ಕರ್ನಾಟಕ

karnataka

By

Published : Nov 3, 2019, 5:23 AM IST

Updated : Nov 3, 2019, 5:41 AM IST

ETV Bharat / sports

ಭಾರತ vs ಬಾಂಗ್ಲಾ: ರಾಜಧಾನಿಯ ವಿಷಗಾಳಿ ಮಧ್ಯೆ ಟಿ20ಯ ಸಾವಿರನೇ ಪಂದ್ಯ

ಈ ಪಂದ್ಯ ಅಂತಾರಾಷ್ಟ್ರೀಯ ಟಿ20ಯ 1000ನೇ ಪಂದ್ಯವಾಗಿದ್ದು, ಈ ನಿಟ್ಟಿನಲ್ಲಿ ವಿಶೇಷತೆ ಪಡೆದಿದೆ. ಹೀಗಾಗಿ ಉಭಯ ತಂಡಗಳು ಗೆದ್ದು ಪಂದ್ಯವನ್ನು ಸ್ಮರಣೀಯವಾಗಿಸಲು ಸಜ್ಜಾಗಿದ್ದಾರೆ.

ಬಲಿಷ್ಠ ಭಾರತಕ್ಕೆ ಬಾಂಗ್ಲಾ ಸವಾಲು

ದೆಹಲಿ:ಹೆಸರು ಮರುನಾಮಕರಣವಾದ ಬಳಿಕ ಮೊದಲ ಪಂದ್ಯ ಆಯೋಜಿಸುತ್ತಿರುವ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಭಾರತ-ಬಾಂಗ್ಲಾದೇಶ ನಡುವೆ ಇಂದು ಮೊದಲ ಟಿ20 ಪಂದ್ಯ ನಡೆಯಲಿದ್ದು,ಮೇಲ್ನೋಟಕ್ಕೆ ಟೀಂ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಅನುಭವಿ ಆಲ್​ರೌಂಡರ್ ಶಕೀಬ್ ಅಲ್​ ಹಸನ್ ಅನುಪಸ್ಥಿತಿ ಬಾಂಗ್ಲಾದೇಶಕ್ಕೆ ಬಹುವಾಗಿ ಕಾಡಲಿದ್ದು, ಇತ್ತ ಕೊಹ್ಲಿ ಇಲ್ಲದ ತಂಡವನ್ನು ಹಿಟ್​ಮ್ಯಾನ್ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.

ಮೂರು ಟಿ20 ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತದಲ್ಲಿ ಆಡಲು ಆಗಮಿಸಿರುವ ಬಾಂಗ್ಲಾದೇಶ ಇಂದಿನಿಂದ ತನ್ನ ಪ್ರವಾಸ ಆರಂಭಿಸಲಿದೆ. ಶಕೀಬ್ ಅನುಪಸ್ಥಿತಿ ಒಂದೆಡೆಯಾದರೆ, ವೈಯಕ್ತಿಕ ಕಾರಣಗಳಿಂದ ಅನುಭವಿ ಆಟಗಾರ ತಮಿಮ್ ಇಕ್ಬಾಲ್ ಭಾರತ ಪ್ರವಾಸ ಕೈಗೊಂಡಿಲ್ಲ. ಇವೆಲ್ಲದರ ನಡುವೆಯೂ ಮಹ್ಮದುಲ್ಲ ಪಡೆ ಗೆಲ್ಲುವ ಉತ್ಸಾಹದಲ್ಲಿದೆ.

ಈ ಪಂದ್ಯ ಅಂತಾರಾಷ್ಟ್ರೀಯ ಟಿ20ಯ 1000ನೇ ಪಂದ್ಯವಾಗಿದ್ದು, ಈ ನಿಟ್ಟಿನಲ್ಲಿ ವಿಶೇಷತೆ ಪಡೆದಿದೆ. ಹೀಗಾಗಿ ಉಭಯ ತಂಡಗಳು ಗೆದ್ದು ಪಂದ್ಯವನ್ನು ಸ್ಮರಣೀಯವಾಗಿಸಲು ಸಜ್ಜಾಗಿದ್ದಾರೆ. ಐಸಿಸಿ ಟಿ20 ಶ್ರೇಯಾಂಕದಲ್ಲಿ ಭಾರತದ ಐದನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ ಒಂಭತ್ತನೇ ಸ್ಥಾನದಲ್ಲಿದೆ.

ವಿಷಗಾಳಿಯದ್ದೇ ದೊಡ್ಡ ಚಿಂತೆ:

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇನ್ನಿಲ್ಲದಂತೆ ನೆಲಕಚ್ಚಿದ್ದು, ಇದು ಕ್ರಿಕೆಟ್ ಮೇಲೂ ನೇರ ಪರಿಣಾಮ ಬೇರಿದೆ. ಮುಖಕ್ಕೆ ಮಾಸ್ಕ್ ಧರಿಸಿ ಬಾಂಗ್ಲಾ ಕ್ರಿಕೆಟಿಗರು ನೆಟ್ ಪ್ರಾಕ್ಟೀಸ್ ನಡೆಸಿದ್ದಾರೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಈ ವೇಳೆ ವಿಷಗಾಳಿ ತೊಂದರೆ ನೀಡುವ ಸಾಧ್ಯತೆ ತೀರಾ ಕಮ್ಮಿ ಎಂದು ನೂತನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಸತತ ಸೋಲಿನ ಸುಳಿಯಲ್ಲಿ ಬಾಂಗ್ಲಾ ಟೈಗರ್ಸ್:

ಟೀಂ ಇಂಡಿಯಾ ವಿರುದ್ಧ ಈವರೆಗೆ 8 ಬಾರಿ ಮುಖಾಮುಖಿಯಾಗಿದ್ದು ಅಷ್ಟೂ ಪಂದ್ಯದಲ್ಲಿ ಸೋತು ನಿರಾಶೆ ಮೂಡಿಸಿದೆ. ಆದರೆ ಈ ಬಾರಿಯಾದರೂ ಈ ಸೋಲಿನ ಸುಳಿಯಿಂದ ಹೊರಬರುತ್ತಾ ಎನ್ನುವ ಕುತೂಹಲ ಮೂಡಿದೆ. ಜಿಂಬಾಬ್ವೆ ತಂಡ ಪಾಕಿಸ್ತಾನ ವಿರುದ್ಧ ಸತತ 12 ಟಿ20 ಪಂದ್ಯ ಸೋತಿದ್ದು ದಾಖಲೆಯಾಗಿ ಉಳಿದಿದೆ. ಈ ಸರಣಿಯಲ್ಲಿ ಬಾಂಗ್ಲಾ ವೈಟ್​ವಾಶ್ ಆದಲ್ಲಿ ಜಿಂಬಾಬ್ವೆ ಸನಿಹ ಬರಲಿದೆ.

ದುಬೆ ಪದಾರ್ಪಣೆ ಸಾಧ್ಯತೆ:

ದೇಶೀಯ ಕ್ರಿಕೆಟ್​ನಲ್ಲಿ ಅಬ್ಬರಿಸಿದ ಮುಂಬೈ ಮೂಲದ ಆಲ್​ರೌಂಡರ್ ಶಿವಂ ದುಬೆ ರಾಷ್ಟ್ರೀಯ ತಂಡದ ಕದತಟ್ಟಿದ್ದಾರೆ. ಇಂದಿನ ಪಂದ್ಯದಲ್ಲಿ ದುಬೆ ಬ್ಲೂ ಜೆರ್ಸಿ ತೊಟ್ಟು ಕಣಕ್ಕಳಿಯುವ ಸಾಧ್ಯತೆ ಇದೆ. ಸಂಜು ಸ್ಯಾಮ್ಸನ್ ತಂಡ ಸೇರಿದ್ದರೂ, ರಿಷಭ್ ಪಂತ್ ಕೀಪರ್ ಆಗಿ ಮುಂದುವರೆಯಲಿದ್ದಾರೆ ಎನ್ನುವ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಹೀಗಾಗಿ ಸ್ಯಾಮ್ಸನ್ ಇಂದಿನ ಪಂದ್ಯದಿಂದ ಹೊರಗುಳಿಯುವ ಲಕ್ಷಣಗಳಿವೆ.

ಚುಟುಕು ಮಹಾಸಮರಕ್ಕೆ ಪರೀಕ್ಷೆ:

2020ರ ಟಿ20 ವಿಶ್ವಕಪ್​ ನಿಟ್ಟಿನಲ್ಲಿ ಈ ಸರಣಿ ಎಲ್ಲ ಆಟಗಾರರಿಗೂ ಮಹತ್ವದ್ದಾಗಿದ್ದು ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ರಾಷ್ಟ್ರೀಯ ತಂಡದಲ್ಲಿ ವೈಫಲ್ಯ ಅನುಭವಿಸಿ ವಿಜಯ್ ಹಜಾರೆ ಟೂರ್ನಿಯಲ್ಲಿ ಮಿಂಚಿರುವ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಅದೇ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಮತ್ತೋರ್ವ ಕನ್ನಡಿಗ ಮನೀಷ್ ಪಾಂಡೆ ನಡುವೆ ಮೂರನೇ ಕ್ರಮಾಂಕದಲ್ಲಿ ಪೈಪೋಟಿ ಏರ್ಪಟ್ಟಿದೆ.

ಸಂಭಾವ್ಯ ಭಾರತ ತಂಡ:

ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಕೆ.ಎಲ್​. ರಾಹುಲ್, ರಿಷಭ್​ ಪಂತ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕೃನಾಲ್ ಪಾಂಡ್ಯ, ಯುಜ್ವೇಂದ್ರ ಚಹಾಲ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್

ಸಂಭಾವ್ಯ ಬಾಂಗ್ಲಾದೇಶ ತಂಡ:

ಸೌಮ್ಯ ಸರ್ಕಾರ್, ಮೊಹಮ್ಮದ್ ನೈಮ್, ಮಹ್ಮದುಲ್ಲಾ(ನಾಯಕ),ಮೊಸೆದ್ದಿಕ್ ಹೊಸೈನ್, ಮುಷ್ಫಿಕರ್ ರಹೀಂ, ಅನಿಮುಲ್ ಇಸ್ಲಾಂ, ಲಿಟನ್ ದಾಸ್, ಮುಸ್ತಫಿಜುರ್ ರಹ್ಮಾನ್, ಶೈಫುಲ್ ಇಸ್ಲಾಂ, ತೈಜುಲ್ ಇಸ್ಲಾಂ,ಮೊಹಮ್ಮದ್ ಮಿಥುನ್

Last Updated : Nov 3, 2019, 5:41 AM IST

ABOUT THE AUTHOR

...view details