ಕರ್ನಾಟಕ

karnataka

By

Published : Feb 20, 2023, 4:22 PM IST

ETV Bharat / sports

'ಕ್ರಿಕೆಟ್​ನಲ್ಲಿ ಮ್ಯಾಚ್​ ಫಿಕ್ಸಿಂಗ್​ಗಿಂತ ಬಹುದೊಡ್ಡ ಭ್ರಷ್ಟಾಚಾರವಿದೆ': ಬಿಸಿಸಿಐ ಮಾಜಿ ಅಧಿಕಾರಿ ಆರೋಪ

ಭಾರತೀಯ ಕ್ರಿಕೆಟ್​ ಮೇಲೆ ಬಿಸಿಸಿಐ ಮಾಜಿ ಅಧಿಕಾರಿಯೊಬ್ಬರು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ.

corruption-allegations-on-indian-cricket
ಬಿಸಿಸಿಐ ಮಾಜಿ ಅಧಿಕಾರಿ ಆರೋಪ

ನವದೆಹಲಿ:ಭಾರತೀಯ ಕ್ರಿಕೆಟ್​​ ಮೇಲೆ ದಿನಕ್ಕೊಂದು ಆಪಾದನೆ ಕೇಳಿ ಬರುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕ್ರಿಕೆಟ್​ ತಂಡದ ಆಟಗಾರರ ಫಿಟ್ನೆಸ್​, ವೈಮನಸ್ಸಿನ ಬಗ್ಗೆ ಕುಟುಕು ಕಾರ್ಯಾಚರಣೆಯೊಂದರಲ್ಲಿ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಚೇತನ್​ ಶರ್ಮಾ ಮಾತನಾಡಿದ್ದರು. ಇದೀಗ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಮಾಜಿ ಅಧಿಕಾರಿಯೊಬ್ಬರು ಭಾರತೀಯ ಕ್ರಿಕೆಟ್​ನಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ಮಾಜಿ ಮುಖ್ಯಸ್ಥ ನೀರಜ್ ಕುಮಾರ್ ತಾವು ಅಧಿಕಾರದಲ್ಲಿದ್ದಾಗ ಕೇಳಿಬಂದ ಆರೋಪಗಳನ್ನು ತಮ್ಮ 'ಎ ಕಾಪ್ ಇನ್ ಕ್ರಿಕೆಟ್' ಪುಸ್ತಕದಲ್ಲಿ ಬರೆದಿದ್ದಾರೆ. ಕ್ರಿಕೆಟ್​ನಲ್ಲಿ ಮ್ಯಾಚ್ ಫಿಕ್ಸಿಂಗ್‌ಗಿಂತಲೂ ದೊಡ್ಡ ಭ್ರಷ್ಟಾಚಾರಗಳು ನಡೆಯುತ್ತದೆ ಎಂಬ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.

'ಮಹಿಳೆಯರಿಗೆ ಲೈಂಗಿಕ ಕಿರುಕುಳ':ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳಧ ಮಾಜಿ ಅಧ್ಯಕ್ಷರಾಗಿದ್ದ ನೀರಜ್ ಕುಮಾರ್ ತಿಳಿಸುವಂತೆ, ಯುವ ಮಹಿಳಾ ಕ್ರಿಕೆಟಿಗರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಟೂರ್ನಿಗಳಲ್ಲಿ ಆಡಲು ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಹೇಳಿ ಆಮಿಷ ತೋರಿಸುತ್ತಾರೆ. ತಮ್ಮ ಅಧಿಕಾರವಧಿಯಲ್ಲಿ ಇಂತಹ ಹಲವು ದೂರುಗಳು ಬಂದಿದ್ದವು ಎಂದು ಉಲ್ಲೇಖಿಸಿದ್ದಾರೆ.

ಐಪಿಎಲ್ ಮತ್ತು ರಣಜಿಯಲ್ಲಿ ಸ್ಥಾನ ನೀಡುವ ಸಲುವಾಗಿ ಯುವ ಕ್ರಿಕೆಟಿಗರು ಮತ್ತು ಪೋಷಕರಿಂದ ಲಕ್ಷಾಂತರ ರೂಪಾಯಿ ಕೇಳುತ್ತಿದ್ದಾರೆ ಎಂದು ಆರೋಪಿಸಿ ಬಂದ ದೂರುಗಳನ್ನು ನಾನು ಪಡೆದಿದ್ದೇನೆ. ಬಿಸಿಸಿಐ ಐಪಿಎಲ್​​ ಸೇರಿದಂತೆ ಅನೇಕ ಟೂರ್ನಿಗಳಿಂದ ಬಂದ ಹಣದಲ್ಲಿ ರಾಜ್ಯ ಕ್ರಿಕೆಟ್​ ಸಂಸ್ಥೆಗಳಿಗೆ ಪಾಲು ನೀಡಲಾಗುತ್ತದೆ. ಆದರೆ, ಅಲ್ಲಿನ ಅಧಿಕಾರಿಗಳು ಕ್ರಿಕೆಟಿಗರನ್ನು ಶೋಷಣೆಗೊಳಪಡಿಸುತ್ತಾರೆ. ಕ್ರಿಕೆಟಿಗರಿಂದ ಹಣ ಪಡೆದುಕೊಳ್ಳುತ್ತಾರೆ. ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಭ್ರಷ್ಟಾಚಾರ, ಲೈಂಗಿಕ ಶೋಷಣೆಗಳ ಬಗ್ಗೆ ಬಂದ ದೂರುಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಆದರೆ, ಈವರೆಗೂ ಯಾವುದೇ ಕ್ರಮಗಳಾಗಿಲ್ಲ. ರಾಜ್ಯ ಕ್ರಿಕೆಟ್​ ಸಂಸ್ಥೆಗಳ ಮೇಲೆ ಕ್ರಮವಾಗಿಲ್ಲ. ಎಲ್ಲವೂ ಗೊತ್ತಿದ್ದರೂ ಅಧಿಕಾರಿಗಳು ಏನೂ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನೀರಜ್ ಕುಮಾರ್​ ಅವರು 2015 ರ ಜೂನ್ 1 ರಿಂದ 2018 ರ ಮೇ 31 ರವರೆಗೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಯು) ಮುಖ್ಯಸ್ಥರಾಗಿದ್ದರು. ಈ ವೇಳೆ ಅವರ ಬಳಿಗೆ ಬಂದ ಇಂತಹ ದೂರುಗಳ ಬಗ್ಗೆ ಪುಸ್ತಕದಲ್ಲಿ ನಮೂದಿಸಿದ್ದಾರೆ. ಇದು ಮತ್ತೆ ಭಾರತೀಯ ಕ್ರಿಕೆಟ್​ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಹಸ್ಯ ಕಾರ್ಯಾಚರಣೆ ವಿವಾದ:ಭಾರತ ಕ್ರಿಕೆಟ್​ ತಂಡದ ಮುಖ್ಯ ಆಯ್ಕೆಗಾರರಾಗಿದ್ದ ಚೇತನ್​ ಶರ್ಮಾ ಖಾಸಗಿ ಸುದ್ದಿವಾಹಿನಿ​ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಕ್ರಿಕೆಟ್​ ಬಗ್ಗೆ ಕೆಲವು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕ್ರಿಕೆಟಿಗರು ಮತ್ತು ಬಿಸಿಸಿಐ ಬಗ್ಗೆ ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದರು. ಇದು ಕ್ರಿಕೆಟ್​ ವಲಯದಲ್ಲಿ ಭಾರಿ ಸಂಚಲನ ಉಂಟು ಮಾಡಿತ್ತು. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಭಾರತ ತಂಡದ ಆಟಗಾರರ ಮಧ್ಯೆ ಮನಸ್ತಾಪ, ಅವರ ದೈಹಿಕ ಸಾಮರ್ಥ್ಯ, ಫಿಟ್​ ಇಲ್ಲದಿದ್ದರೂ ಹೇಗೆ ಆಯ್ಕೆಯಾಗುತ್ತಾರೆ, ತಂಡದಲ್ಲಿನ ಬಣಗಳು ಸೇರಿದಂತೆ ವಿವಿಧ ಮಾಹಿತಿ ಸ್ಟಿಂಗ್​ ಆಪರೇಷನ್​ ಮೂಲಕ ಹೊರಬಿದ್ದಿತ್ತು. ಆಟಗಾರರು ಫಿಟ್ನೆಸ್​ಗಾಗಿ ಬೇರೆ ಮಾರ್ಗ ಹಿಡಿಯುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ:ರಹಸ್ಯ ಕಾರ್ಯಾಚರಣೆ: ಬಿಸಿಸಿಐ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಚೇತನ್​ ಶರ್ಮಾ

ABOUT THE AUTHOR

...view details