ಕರ್ನಾಟಕ

karnataka

By ETV Bharat Karnataka Team

Published : Oct 1, 2023, 5:28 PM IST

ETV Bharat / sports

1975ರಿಂದ 2019ವರೆಗಿನ ವಿಶ್ವಕಪ್ ಪಯಣ..: 2 ಬಾರಿಯ ವಿಶ್ವಚಾಂಪಿಯನ್​ ಭಾರತಕ್ಕೆ 3ನೇ ಪ್ರಶಸ್ತಿಯ ಗುರಿ

ಏಕದಿನ ಕ್ರಿಕೆಟ್‌ ವಿಶ್ವಕಪ್​ ಜಾತ್ರೆಗೆ ವೇದಿಕೆ ಸಿದ್ಧವಾಗಿದೆ. ಪ್ರತಿಷ್ಟಿತ ಕೂಟದಲ್ಲಿ ಭಾಗವಹಿಸುವ 10 ತಂಡಗಳು ಅಭ್ಯಾಸದಲ್ಲಿ ತೊಡಗಿವೆ. ಅಕ್ಟೋಬರ್ 5ರಿಂದ ಪಂದ್ಯಾರಂಭವಾಗಲಿದೆ. ಐಸಿಸಿ ಏಕದಿನ ಶ್ರೇಯಾಂಕದ ನಂ.1 ಟೀಂ​ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದೇ ಪರಿಗಣಿಸಲಾಗಿದೆ. ವಿಶ್ವಕಪ್‌ನಲ್ಲಿ 1975ರಿಂದ ಆರಂಭವಾದ ಭಾರತದ ಪಯಣ ಹೀಗಿದೆ..

2023 Cricket World Cup
2023 Cricket World Cup

ನವದೆಹಲಿ: ಎರಡು ಬಾರಿ ಏಕದಿನ ಕ್ರಿಕೆಟ್​ ವಿಶ್ವಕಪ್​ ಗೆದ್ದಿರುವ ಟೀಂ​ ಇಂಡಿಯಾ ಇದೀಗ 3ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತದಲ್ಲೇ ವಿಶ್ವಕಪ್​ ಆಯೋಜನೆ ಆಗುತ್ತಿದ್ದು, 10 ವರ್ಷಗಳ ಐಸಿಸಿ ಟ್ರೋಫಿಯ ಬರ ನೀಗಿಸಲು ರೋಹಿತ್​ ಬಳಗ ಸಜ್ಜಾಗಿದೆ.

ವಿಶ್ವಕಪ್​ಗೂ ಮುನ್ನ ಏಕದಿನ ಮಾದರಿಯ ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆದ್ದ ಭಾರತ ವಿಶ್ವಾಸ ಹೆಚ್ಚಿಸಿಕೊಂಡಿದೆ. ಇದರೊಂದಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿಯೂ ನಂ.1 ತಂಡವಾಗಿ ಹೊರಹೊಮ್ಮಿದೆ. ಇದು ತಂಡದ ಆಟಗಾರರಿಗೆ ಮತ್ತಷ್ಟು ಬೂಸ್ಟ್‌ ನೀಡಿದೆ.

2011ರಲ್ಲಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಜಂಟಿಯಾಗಿ ವಿಶ್ವಕಪ್ ಟೂರ್ನಿ ಆಯೋಜಿಸಿತ್ತು. ಭಾರತ ಚಾಂಪಿಯನ್​​ ಆಗಿತ್ತು. ಈ ಬಾರಿಯೂ ಭಾರತವನ್ನು ವಿಶ್ವಕಪ್‌ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. 1975ರಿಂದ ಒಟ್ಟು 12 ವಿಶ್ವಕಪ್‌ ಟೂರ್ನಿಗಳನ್ನು ಆಯೋಜಿಸಲಾಗಿದ್ದು, ಟೀಂ ಇಂಡಿಯಾ 1983 ಮತ್ತು 2011ರಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದೆ. ಆಸ್ಟ್ರೇಲಿಯಾ ಅತಿ ಹೆಚ್ಚು 5 ಬಾರಿ ಕಪ್​ ಎತ್ತಿ ಹಿಡಿದಿದೆ. 12 ವಿಶ್ವಕಪ್‌ ಕೂಟದಲ್ಲಿ ಭಾರತ 2003ರಲ್ಲಿ ಫೈನಲ್‌ನಲ್ಲಿ ಸೋತರೆ, 2015 ಮತ್ತು 19ರಲ್ಲಿ ಸೆಮಿಫೈನಲ್‌ ತಲುಪಿ ಸೋಲು ಕಂಡಿದೆ. 1975ರಿಂದ 2019ರವರೆಗಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರದರ್ಶನ ಹೇಗಿತ್ತು ನೋಡೋಣ.

1975 ವಿಶ್ವಕಪ್ - 5ನೇ ಸ್ಥಾನ: ವಿಶ್ವಕಪ್‌ನ ಮೊದಲ ಆವೃತ್ತಿಯನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಗಿತ್ತು. ಎಸ್.ವೆಂಕಟರಾಘವನ್ ಭಾರತ ತಂಡದ ಮೊದಲ ನಾಯಕರಾಗಿದ್ದರು. ತಂಡವು ಪೂರ್ವ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಪೈಕಿ 1ರಲ್ಲಿ ಮಾತ್ರ ಜಯಿಸಿತ್ತು. ಅಂತಿಮವಾಗಿ ಭಾರತ 5ನೇ ಸ್ಥಾನ ಪಡೆದುಕೊಂಡಿತ್ತು. ಆ ಸಂದರ್ಭದ ಭಾರತವನ್ನು ಕ್ರಿಕೆಟ್​ ಶಿಶು ಎಂದು ಕರೆಯಲಾಗುತ್ತಿತ್ತು. ಬಲಿಷ್ಠ ವೆಸ್ಟ್ ಇಂಡೀಸ್ ಪ್ರಶಸ್ತಿ ಗೆದ್ದುಕೊಂಡಿತ್ತು.

1975ರ ವಿಶ್ವಕಪ್ ತಂಡ

1975ರ ವಿಶ್ವಕಪ್ ತಂಡ: ಶ್ರೀನಿವಾಸರಾಘವನ್ ವೆಂಕಟರಾಘವನ್ (ನಾಯಕ), ಸೈಯದ್ ಅಬಿದ್ ಅಲಿ, ಮೊಹಿಂದರ್ ಅಮರನಾಥ್, ಬಿಷನ್ ಸಿಂಗ್ ಬೇಡಿ (ಉಪನಾಯಕ), ಫಾರೂಕ್ ಇಂಜಿನಿಯರ್ (ವಿಕೆಟ್ ಕೀಪರ್), ಅಂಶುಮಾನ್ ಗಾಯಕ್ವಾಡ್, ಸುನಿಲ್ ಗವಾಸ್ಕರ್, ಕರ್ಸನ್ ಘಾವ್ರಿ, ಮದನ್ ಲಾಲ್, ಬ್ರಿಜೇಶ್ ಪಟೇಲ್, ಏಕನಾಥ್ ಸೋಲ್ಕರ್, ಏಕನಾಥ್ ಸೋಲ್ಕರ್ ವಿಶ್ವನಾಥ್, ಸೈಯದ್ ಕಿರ್ಮಾನಿ (ವಿಕೆಟ್ ಕೀಪರ್), ಪಾರ್ಥಸಾರಥಿ ಶರ್ಮಾ.

1979 ವಿಶ್ವಕಪ್ ತಂಡ

1979ರ ವಿಶ್ವಕಪ್ - 7ನೇ ಸ್ಥಾನ:1979 ಕ್ರಿಕೆಟ್ ವಿಶ್ವಕಪ್‌ನ ಆತಿಥ್ಯ ಮತ್ತೊಮ್ಮೆ ಇಂಗ್ಲೆಂಡ್‌ನ ಕೈಯಲ್ಲಿತ್ತು. ಕಳಪೆ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾವನ್ನು ಎಸ್.ವೆಂಕಟರಾಘವನ್ ಅವರಿಗೆ ಹಸ್ತಾಂತರಿಸಲಾಗಿತ್ತು. ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನವು 1975ಕ್ಕಿಂತ ಕಳಪೆಯಾಗಿತ್ತು. ತನ್ನೆಲ್ಲಾ ಮೂರು ಪಂದ್ಯಗಳಲ್ಲೂ ಸೋತ ನಂತರ ಪಂದ್ಯಾವಳಿಯಿಂದ ಹೊರ ಬಿದ್ದಿತ್ತು. ಭಾರತವನ್ನು ವೆಸ್ಟ್ ಇಂಡೀಸ್ 9 ವಿಕೆಟ್‌ಗಳಿಂದ ಮತ್ತು ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಮಣಿಸಿತ್ತು. ಶ್ರೀಲಂಕಾದಂತಹ ದುರ್ಬಲ ತಂಡದ ವಿರುದ್ಧವೂ ಭಾರತ ಪರಾಜಯ ಅನುಭವಿಸಿತ್ತು. ಅಂತಿಮವಾಗಿ 7ನೇ ಸ್ಥಾನ ಗಳಿಸಿತು. ವೆಸ್ಟ್ ಇಂಡೀಸ್ ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಯಿತು.

1979ರ ವಿಶ್ವಕಪ್ ತಂಡ: ಶ್ರೀನಿವಾಸರಾಘವನ್ ವೆಂಕಟರಾಘವನ್ (ನಾಯಕ), ಮೊಹಿಂದರ್ ಅಮರನಾಥ್, ಬಿಷನ್ ಸಿಂಗ್ ಬೇಡಿ, ಅಂಶುಮಾನ್ ಗಾಯಕ್ವಾಡ್, ಸುನಿಲ್ ಗವಾಸ್ಕರ್ (ಉಪನಾಯಕ), ಕರ್ಸನ್ ಘವ್ರಿ, ಕಪಿಲ್ ದೇವ್, ಸುರಿಂದರ್ ಖತ್ರಾ (ವಿಕೆಟ್ ಕೀಪರ್), ಬ್ರಿಜೇಶ್ ಪಟೇಲ್, ದಿಲೀಪ್ ವೆಂಗ್‌ಸರ್ಕರ್, ಗುಂಡಪ್ಪ ವಿಶ್ವನಾಥ್, ಭರತ ರೆಡ್ಡಿ , ಯಜುರ್ವಿಂದ್ರ ಸಿಂಗ್, ಯಶಪಾಲ್ ಶರ್ಮಾ.

1983ರ ವಿಶ್ವಕಪ್ - ಭಾರತ ಚಾಂಪಿಯನ್!:1983ರಲ್ಲಿ ಇಂಗ್ಲೆಂಡ್‌ನಲ್ಲಿ ಸತತ ಮೂರನೇ ಬಾರಿಗೆ ಕ್ರಿಕೆಟ್ ವಿಶ್ವಕಪ್ ಆಯೋಜಿಸಲಾಯಿತು. ಟೂರ್ನಿ ಆರಂಭಕ್ಕೂ ಮುನ್ನ ಭಾರತ ತಂಡವನ್ನು ದುರ್ಬಲ ತಂಡ ಎಂದೇ ಪರಿಗಣಿಸಲಾಗಿತ್ತು. ಅಭ್ಯಾಸ ಪಂದ್ಯದಲ್ಲಿ ಭಾರತ ಆಂಗ್ಲ ಕೌಂಟಿ ತಂಡದ ವಿರುದ್ಧವೂ ಸೋತಿತ್ತು. ಆದರೆ ಮುಖ್ಯ ಸುತ್ತಿನ ಪಂದ್ಯಗಳು ಆರಂಭವಾಗುತ್ತಿದ್ದಂತೆಯೇ ತಂಡದ ಆಟಗಾರರು ಫಾರ್ಮ್​ಗೆ ಬಂದರು. ಲೀಗ್ ಸುತ್ತಿನಲ್ಲಿ ವೆಸ್ಟ್ ಇಂಡೀಸ್‌ನಂತಹ ಬಲಿಷ್ಠ ತಂಡವನ್ನೇ ಸೋಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಇದಾದ ನಂತರ, ಕಪಿಲ್ ದೇವ್ ನಾಯಕತ್ವದ ಟೀಂ ಇಂಡಿಯಾ, ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಅನ್ನು 43 ರನ್‌ಗಳಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಯಿತು.

1983ರ ಕಪಿಲ್​ ದೇವ್​ ಸಾರಥ್ಯದ ವಿಶ್ವಕಪ್​ ತಂಡ

1983 ವಿಶ್ವಕಪ್ ತಂಡ: ಕಪಿಲ್ ದೇವ್ (ನಾಯಕ), ಮೊಹಿಂದರ್ ಅಮರನಾಥ್ (ಉಪನಾಯಕ), ಕೀರ್ತಿ ಆಜಾದ್, ರೋಜರ್ ಬಿನ್ನಿ, ಸುನಿಲ್ ಗವಾಸ್ಕರ್, ಸೈಯದ್ ಕಿರ್ಮಾನಿ (ವಿಕೆಟ್ ಕೀಪರ್), ಮದನ್ ಲಾಲ್, ಸಂದೀಪ್ ಪಾಟೀಲ್, ಬಲ್ವಿಂದರ್ ಸಂಧು, ಯಶಪಾಲ್ ಶರ್ಮಾ, ರವಿಶಾಸ್ತ್ರಿ, ಕೃಷ್ಣಮಾಚಾರಿ ಶ್ರೀಕ್ಕಂತ್ , ಸುನಿಲ್ ವಾಲ್ಸನ್, ದಿಲೀಪ್ ವೆಂಗ್‌ಸರ್ಕರ್

1987ರ ವಿಶ್ವಕಪ್ - ಸೆಮಿಫೈನಲ್: ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ 1987ರ ವಿಶ್ವಕಪ್ ಆಯೋಜಿಸಿದ್ದವು. ಮೊದಲ ಬಾರಿಗೆ, ವಿಶ್ವಕಪ್ ಅನ್ನು 60 ಬದಲಿಗೆ 50 ಓವರ್‌ಗಳಲ್ಲಿ ಆಡಲಾಯಿತು. ಕಪಿಲ್ ದೇವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್ ತಲುಪಿತು. ಆದರೆ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಬೇಕಾಯಿತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ವೇಗಿ ಚೇತನ್ ಶರ್ಮಾ ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದರು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಯಿತು.

1987 ವಿಶ್ವಕಪ್ ತಂಡ: ಕಪಿಲ್ ದೇವ್ (ನಾಯಕ), ಕೃಷ್ಣಮಾಚಾರಿ ಶ್ರೀಕಾಂತ್, ದಿಲೀಪ್ ವೆಂಗ್‌ಸರ್ಕರ್ (ಉಪನಾಯಕ), ಮೊಹಮ್ಮದ್ ಅಜರುದ್ದೀನ್, ರೋಜರ್ ಬಿನ್ನಿ, ಸುನಿಲ್ ಗವಾಸ್ಕರ್, ಮಣಿಂದರ್ ಸಿಂಗ್, ಕಿರಣ್ ಮೋರೆ (ವಿಕೆಟ್ ಕೀಪರ್), ಚಂದ್ರಕಾಂತ್ ಪಂಡಿತ್, ಮನೋಜ್ ಪ್ರಭಾಕರ್, ಚೇತನ್ ಶರ್ಮಾ, ರವಿಶಾಸ್ತ್ರಿ , ನವಜೋತ್ ಸಿಂಗ್ ಸಿಧು, ಲಕ್ಷ್ಮಣ್ ಶಿವರಾಮಕೃಷ್ಣನ್.

1992ರ ವಿಶ್ವಕಪ್​ ಟೀಮ್​

1992ರ ವಿಶ್ವಕಪ್ - 7ನೇ ಸ್ಥಾನ: ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಮೊದಲ ಬಾರಿಗೆ 1992 ರ ವಿಶ್ವಕಪ್ ಅನ್ನು ಜಂಟಿಯಾಗಿ ಆಯೋಜಿಸಿದ್ದವು. ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ಮಿಶ್ರ ಪ್ರದರ್ಶನ ನೀಡಿತ್ತು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಅಲ್ಪ ಅಂತರದಲ್ಲಿ ಸೋಲನುಭವಿಸಿತು. ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ್ದರು. ಅಂತಿಮವಾಗಿ ಭಾರತ 7ನೇ ಸ್ಥಾನ ಪಡೆಯಿತು. ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನವು ಇಂಗ್ಲೆಂಡ್ ಅನ್ನು ಫೈನಲ್‌ನಲ್ಲಿ ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಯಿತು.

1992 ವಿಶ್ವಕಪ್‌ ತಂಡ: ಮೊಹಮ್ಮದ್ ಅಜರುದ್ದೀನ್ (ನಾಯಕ), ಸುಬ್ರೋತೊ ಬ್ಯಾನರ್ಜಿ, ಸಚಿನ್ ತೆಂಡೂಲ್ಕರ್, ಅಜಯ್ ಜಡೇಜಾ, ವಿನೋದ್ ಕಾಂಬ್ಳಿ, ಕಪಿಲ್ ದೇವ್, ರವಿಶಾಸ್ತ್ರಿ (ಉಪನಾಯಕ), ಸಂಜಯ್ ಮಂಜ್ರೇಕರ್, ಕಿರಣ್ ಮೋರೆ (ವಿಕೆಟ್ ಕೀಪರ್), ಮನೋಜ್ ಪ್ರಭಾಕರ್, ವೆಂಕಟಾಚಾರಪತಿ ರಾಜು, ಕೃಷ್ಣಮ್ಮ , ಜಾವಗಲ್.ಶ್ರೀನಾಥ್, ಪ್ರವೀಣ್ ಆಮ್ರೆ

1996ರ ವಿಶ್ವಕಪ್ - ಸೆಮಿಫೈನಲ್: 1996ರ ವಿಶ್ವಕಪ್‌ನ ಆತಿಥ್ಯ ಭಾರತದ ಕೈಯಲ್ಲಿತ್ತು. ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಟೀಂ ಇಂಡಿಯಾ ಗೆಲುವಿನ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಭಾರತವು ಕೀನ್ಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಸೋಲಿಸುವ ಮೂಲಕ ಶುಭಾರಂಭ ಮಾಡಿತು. ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿತು, ಆದರೆ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಪರಾಜಯ ಅನುಭವಿಸಿತು. ಫೈನಲ್‌ನಲ್ಲಿ ಕಾಂಗರೂ ತಂಡವನ್ನು ಸೋಲಿಸುವ ಮೂಲಕ ಶ್ರೀಲಂಕಾ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್ ವಶಪಡಿಸಿಕೊಂಡಿತು.

1996 ವಿಶ್ವಕಪ್ ತಂಡ

1996 ತಂಡ: ಮೊಹಮ್ಮದ್ ಅಜರುದ್ದೀನ್ (ನಾಯಕ), ಸಚಿನ್ ತೆಂಡೂಲ್ಕರ್ (ಉಪನಾಯಕ), ವಿನೋದ್ ಕಾಂಬ್ಳಿ, ಆಶಿಶ್ ಕಪೂರ್, ಅನಿಲ್ ಕುಂಬ್ಳೆ, ಸಂಜಯ್ ಮಂಜ್ರೇಕರ್, ನಯನ್ ಮೊಂಗಿಯಾ (ವಿಕೆಟ್ ಕೀಪರ್), ಮನೋಜ್ ಪ್ರಭಾಕರ್, ವೆಂಕಟೇಶ್ ಪ್ರಸಾದ್, ನವಜೋತ್ ಸಿಂಗ್ ಸಿಧು, ಜಾವಗಲ್ ಶ್ರೀನಾಥ್, ಎ. ಜಡೇಜಾ, ಸಲೀಲ್ ಅಂಕೋಲಾ, ವೆಂಕಟಪತಿ ರಾಜು.

1999ರ ವಿಶ್ವಕಪ್ - 6ನೇ ಸ್ಥಾನ:1999ರ ವಿಶ್ವಕಪ್‌ಗೆ ಇಂಗ್ಲೆಂಡ್ ಆತಿಥ್ಯ ವಹಿಸಿತ್ತು. ಭಾರತ ತಂಡವನ್ನು ಮೊಹಮ್ಮದ್ ಅಜರುದ್ದೀನ್ ಮುನ್ನಡೆಸಿದ್ದರು. ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆರನೇ ಸ್ಥಾನ ಪಡೆಯಿತು. ಲೀಗ್ ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಸೋಲಿಸಿತು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಎದುರಿಸಬೇಕಾಯಿತು. ಆಸ್ಟ್ರೇಲಿಯಾ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಯಿತು.

1999 ವಿಶ್ವಕಪ್​ ತಂಡ

1999 ತಂಡ:ಮೊಹಮ್ಮದ್ ಅಜರುದ್ದೀನ್ (ನಾಯಕ), ಸೌರವ್ ಗಂಗೂಲಿ, ಅಜಯ್ ಜಡೇಜಾ (ಉಪನಾಯಕ), ಸಡಗೊಪ್ಪನ್ ರಮೇಶ್, ರಾಹುಲ್ ದ್ರಾವಿಡ್, ರಾಬಿನ್ ಸಿಂಗ್, ಅಜಿತ್ ಅಗರ್ಕರ್, ಅನಿಲ್ ಕುಂಬ್ಳೆ, ನಯನ್ ಮೊಂಗಿಯಾ (ವಿಕೆಟ್ ಕೀಪರ್), ಸಚಿನ್ ತೆಂಡೂಲ್ಕರ್, ವೆಂಕಟೇಶ್ ಪ್ರಸಾದ್, ನಿಖಿಲ್ ಮೊಹಾಂತಿ, ಜಾವಗಲ್ ಶ್ರೀನಾಥ್, ಅಮಯ್ ಖುರಾಸಿಯಾ

2003ರ ವಿಶ್ವಕಪ್ - ಫೈನಲ್: 2003ರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಸೌರವ್ ಗಂಗೂಲಿ ಮುನ್ನಡೆಸಿದ್ದರು. ಮೊದಲ ಬಾರಿಗೆ ವಿಶ್ವಕಪ್‌ ಆತಿಥ್ಯವನ್ನು ದಕ್ಷಿಣ ಆಫ್ರಿಕಾ ವಹಿಸಿಕೊಂಡಿತ್ತು. ಭಾರತ ತಂಡ ಈ ಸಲದ ವಿಶ್ವಕಪ್‌ನುದ್ದಕ್ಕೂ ಅಮೋಘ ಆಟವಾಡಿತು. ಆಸ್ಟ್ರೇಲಿಯಾ ಹೊರತುಪಡಿಸಿ ಉಳಿದೆಲ್ಲ ತಂಡಗಳನ್ನೂ ಸೋಲಿಸಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಭಾರತವನ್ನು 125 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ಆಸ್ಟ್ರೇಲಿಯಾ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಭಾರತದ ಕನಸು ಭಗ್ನಗೊಳಿಸಿತ್ತು.

2003 ವಿಶ್ವಕಪ್ ತಂಡ

2003 ತಂಡ: ಸೌರವ್ ಗಂಗೂಲಿ (ನಾಯಕ), ರಾಹುಲ್ ದ್ರಾವಿಡ್ (ಉಪನಾಯಕ/ವಿಕೆಟ್ ಕೀಪರ್), ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಜಹೀರ್ ಖಾನ್, ಅನಿಲ್ ಕುಂಬ್ಳೆ, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ದಿನೇಶ್ ಮೊಂಗಿಯಾ, ಸಂಜಯ್ ಬಂಗಾರ್, ಆಶಿಶ್ ನೆಹ್ರಾ, ಅಜಿತ್ ಅಗರ್ಕರ್

2007 ವಿಶ್ವಕಪ್ ತಂಡ

2007 ವಿಶ್ವಕಪ್ - 9ನೇ ಸ್ಥಾನ: ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದ್ದ ಈ ವಿಶ್ವಕಪ್​ನಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿರಲಿಲ್ಲ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ಯುವರಾಜ್ ಸಿಂಗ್ ಅವರಂತಹ ಸೂಪರ್ ಸ್ಟಾರ್ ಆಟಗಾರರಿದ್ದ ಭಾರತ ತಂಡ, ಬಾಂಗ್ಲಾದೇಶದಂತಹ ದುರ್ಬಲ ತಂಡಕ್ಕೆ ಸೋತು ಗುಂಪು ಹಂತದಲ್ಲೇ ಹೊರಬಿದ್ದು 9ನೇ ಸ್ಥಾನ ಪಡೆದುಕೊಂಡಿತು. ಕಳಪೆ ಪ್ರದರ್ಶನದ ನಂತರ ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ್ದರು. ರಿಕಿ ಪಾಂಟಿಂಗ್ ನಾಯಕತ್ವದ ಆಸ್ಟ್ರೇಲಿಯಾ ತಂಡ ನಾಲ್ಕನೇ ಬಾರಿಗೆ ವಿಶ್ವ ಚಾಂಪಿಯನ್ ಆಯಿತು.

2007 ತಂಡ: ರಾಹುಲ್ ದ್ರಾವಿಡ್ (ನಾಯಕ), ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಬಿನ್ ಉತ್ತಪ್ಪ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ (ಉಪನಾಯಕ), ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಇರ್ಫಾನ್ ಪಠಾಣ್, ಹರ್ಭಜನ್ ಅಗರ್ಕರ್, ಸಿಂಗ್, ಅನಿಲ್ ಕುಂಬ್ಳೆ, ಜಹೀರ್ ಖಾನ್, ಎಸ್.ಶ್ರೀಶಾಂತ್, ಮುನಾಫ್ ಪಟೇಲ್

2011ರ ವಿಶ್ವಕಪ್ - ಚಾಂಪಿಯನ್: 2011ರ ವಿಶ್ವಕಪ್ ಅನ್ನು ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿದ್ದವು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡವು ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಎರಡನೇ ಬಾರಿ ವಿಶ್ವ ಚಾಂಪಿಯನ್ ಆಯಿತು. ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಬಲಿಷ್ಠ ತಂಡಗಳನ್ನು ಭಾರತ ಸೋಲಿಸಿತ್ತು. ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಕೊನೆಯ ವಿಶ್ವಕಪ್ ಆಡಿದ್ದು, ವಿಶ್ವಕಪ್ ಗೆಲ್ಲುವ ಕನಸು ಕೂಡ ನನಸಾಗಿತ್ತು. ಸ್ಟಾರ್ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಆಲ್ ರೌಂಡ್ ಪ್ರದರ್ಶನದಿಂದ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2011 ವಿಶ್ವಕಪ್ ತಂಡ

2011ರ ಚಾಂಪಿಯನ್​ ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ/ವಿಕೆಟ್ ಕೀಪರ್), ವೀರೇಂದ್ರ ಸೆಹ್ವಾಗ್ (ಉಪನಾಯಕ), ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ, ವಿರಾಟ್ ಕೊಹ್ಲಿ, ಯೂಸುಫ್ ಪಠಾಣ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಆಶಿಶ್ ನೆಹ್ರಾ, ಮುನಾಫ್ ಪಟೇಲ್, ಎಸ್. ಶ್ರೀಶಾಂತ್, ಪಿಯೂಷ್ ಚಾವ್ಲಾ, ಆರ್ ಅಶ್ವಿನ್.

2015 ವಿಶ್ವಕಪ್ ತಂಡ

2015ರ ವಿಶ್ವಕಪ್ - ಸೆಮಿಫೈನಲ್: 2015ರ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಭಾರತವನ್ನು ಆಸ್ಟ್ರೇಲಿಯಾ ಮಣಿಸಿ, ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಭಾರತದ ಕನಸನ್ನು ಭಗ್ನಗೊಳಿಸಿತು. ಭಾರತದ ಪರ ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅದ್ಭುತ ಆಟವಾಡಿದರು. ಕಾಂಗರೂ ತಂಡ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ದಾಖಲೆಯ 5ನೇ ಬಾರಿ ವಿಶ್ವ ಚಾಂಪಿಯನ್ ಆಯಿತು.

2015 ತಂಡ: ಧೋನಿ (ನಾಯಕ/ವಿಕೆಟ್ ಕೀಪರ್), ವಿರಾಟ್ ಕೊಹ್ಲಿ (ಉಪನಾಯಕ), ರವಿಚಂದ್ರನ್ ಅಶ್ವಿನ್, ಸ್ಟುವರ್ಟ್ ಬಿನ್ನಿ, ಶಿಖರ್ ಧವನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಅಂಬಟಿ ರಾಯುಡು (ವಿಕೆಟ್ ಕೀಪರ್), ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ರೋಹಿತ್ ಶರ್ಮಾ, ಉಮೇಶ್ ಯಾದವ್.

2019 ವಿಶ್ವಕಪ್ ತಂಡ

2019ರ ವಿಶ್ವಕಪ್ - ಸೆಮಿಫೈನಲ್: 2019ರ ವಿಶ್ವಕಪ್‌ನ ಆತಿಥ್ಯ ಇಂಗ್ಲೆಂಡ್‌ಗೆ ಸಿಕ್ಕಿತ್ತು. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್ ತಂಡ ವಿಶ್ವಕಪ್‌ನಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಆದರೆ ಸೆಮಿಫೈನಲ್‌ ಪಂದ್ಯದಲ್ಲಿ ಭಾರತಕ್ಕೆ ವರುಣ ಅಡ್ಡಿಪಡಿಸಿದ ಕಾರಣ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಬೇಕಾಯಿತು. ಧೋನಿ ಈ ವಿಶ್ವಕಪ್​ ಪಂದ್ಯದ ನಂತರ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಪ್ರಕಟಿಸಿದ್ದರು. ಭಾರತದ ಸ್ಟಾರ್ ಓಪನರ್ ಬ್ಯಾಟರ್ ರೋಹಿತ್ ಶರ್ಮಾ ಇಡೀ ಟೂರ್ನಿಯಲ್ಲಿ 5 ಶತಕ ಬಾರಿಸಿ ದಾಖಲೆ ಬರೆದರು. ಕ್ರಿಕೆಟ್‌ ಜನಕ ರಾಷ್ಟ್ರ ಎಂದು ಕರೆಸಿಕೊಳ್ಳುವ ಇಂಗ್ಲೆಂಡ್​ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಯಿತು.

2019 ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಎಂಎಸ್ ಧೋನಿ (ವಿಕೆಟ್ ಕೀಪರ್), ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಶಿಖರ್ ಧವನ್, ವಿಜಯ್ ಶಂಕರ್, ಕೇದಾರ್ ಜಾಧವ್, ಯುಜ್ವೇಂದ್ರ ಚಾಹಲ್ , ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ.

2023ರಲ್ಲಿ ಭಾರತದಲ್ಲಿ ವಿಶ್ವಕಪ್​ ನಡೆಯುತ್ತಿದ್ದು ತಂಡದ ಆಟಗಾರರೆಲ್ಲರೂ ಫಾರ್ಮ್‌ನಲ್ಲಿರುವುದರಿಂದ ತಂಡ ಮೂರನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ ಎಂಬ ಲೆಕ್ಕಾಚಾರಗಳಿವೆ. ಅಕ್ಟೋಬರ್​ 5 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ನಡುವಿನ ಪಂದ್ಯದ ಮೂಲಕ ಈ ವರ್ಷದ ವಿಶ್ವಕಪ್​ ಆರಂಭವಾಗಲಿದೆ.

ಇದನ್ನೂ ಓದಿ:ICC Cricket World Cup 2023: ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ, ಆದ್ರೆ ಈ ಟೀಂಗಳು ಕೂಡ ಬಲಿಷ್ಠ... ಈಟಿವಿ ಭಾರತ್ ಸಂದರ್ಶನದಲ್ಲಿ ರವೀಂದ್ರ ಜಡೇಜಾ ಕೋಚ್

ABOUT THE AUTHOR

...view details