ಕಳೆದ ಎರಡು ತಿಂಗಳಿನಿಂದ ಬಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಬದುಕಿನ ಪಯಣ ಮುಗಿಸಿದ್ದಾರೆ. ನಿನ್ನೆ ಇದ್ದವರು ಇಂದು ಇಲ್ಲ ಎನ್ನುವ ಪರಿಸ್ಥಿತಿ ಉಂಟಾಗಿದೆ. ಕಳೆದ ಭಾನುವಾರ ಚಿರಂಜೀವಿ ಸರ್ಜಾ ನಮ್ಮನ್ನು ಅಗಲಿದ್ದರೆ, ನಿನ್ನೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಾರ ನಗುವಿನ ಹಿಂದೆ ಯಾವ ನೋವಿರುವುದೋ ಯಾರಿಗೆ ಗೊತ್ತು...ಅನುಶ್ರೀ ಹೀಗೆ ಹೇಳಿದ್ದೇಕೆ..? - Sushant Singh Rajput committed suicide
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕಿರುತೆರೆ ನಿರೂಪಕಿ ಅನುಶ್ರೀ ಕಂಬನಿ ಮಿಡಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ಅವರು ಯಾವ ನಗುವಿನ ಹಿಂದೆ ಯಾವ ನೋವಿರುವುದೋ ಯಾರಿಗೆ ಗೊತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಕೊರೊನಾದಿಂದ ಜನರು ಭಯಭೀತರಾಗಿದ್ದರೆ, ಮತ್ತೊಂದೆಡೆ ಹೀಗೆ ಸಿನಿಮಾ ನಟರು ದೂರವಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಚಿರಂಜೀವಿ ಸರ್ಜಾ ಅವರ ನಿಧನದ ಸುದ್ದಿ ತಿಳಿದು ಎರಡು ದಿನಗಳ ಕಾಲ ಟಿವಿಯಿಂದ, ಸೋಷಿಯಲ್ ಮೀಡಿಯಾದಿಂದ ದೂರವಿದ್ದ ನಿರೂಪಕಿ ಅನುಶ್ರೀ ಈಗ ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಧನಕ್ಕೆ ಕೂಡಾ ದು:ಖ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅವರು ಬೇಸರ ಹೊರ ಹಾಕಿದ್ದಾರೆ.
'ಯಾವ ನಗುವಿನ ಹಿಂದೆ ಯಾವ ನೋವಿರುತ್ತೋ ಯಾರು ಬಲ್ಲರು..? 2020 ಮರೆಯಲಾರದ, ಮರೆಸಲಾರದ, ಕ್ಷಮಿಸಲಾಗದ ವರ್ಷ. ಒಂಟಿತನ ಹಾಗು ಮಾನಸಿಕ ಖಿನ್ನತೆ ಕೊರೊನಾ ವೈರಸ್ಗಿಂತ ಅಪಾಯಕಾರಿ. ಈ ಅದ್ಭುತ ನಟನನ್ನು ಎಷ್ಟು ಮಾನಸಿಕ ನೋವು ಕಾಡಿತ್ತೋ ಏನೋ , ನುಂಗಲಾರದೆ, ಹೇಳಲಾರದೆ ಅದೆಷ್ಟು ನೋವನ್ನು ಈ ಜೀವ ಅನುಭವಿಸಿತ್ತೋ ಏನೋ, ನಿಮ್ಮಲ್ಲಿ ಒಂದು ಸಣ್ಣ ವಿನಂತಿ. ಇನ್ನೊಬ್ಬರನ್ನು ಹೀಯಾಳಿಸುವುದು , ಕೆಟ್ಟದಾಗಿ ಮಾತನಾಡುವುದು, ಕಮೆಂಟ್ ಮಾಡೋದು ಮಾಡಬೇಡಿ. ಮುಖ್ಯವಾಗಿ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವಾಗ ಮತ್ತು ಕಮೆಂಟ್ ಮಾಡುವಾಗ ಒಮ್ಮೆ ಯೋಚಿಸಿ. ನಿಮ್ಮ ಮಾತುಗಳು ಅವರನ್ನು ಬಹಳ ನೋಯಿಸಬಹುದು. ನಾಳೆ ಅವರು ಇಲ್ಲದಂತೆ ಆಗಬಹುದು' ಎಂದು ಬರೆದುಕೊಂಡಿದ್ದಾರೆ.