ಕರ್ನಾಟಕ

karnataka

By

Published : Oct 8, 2019, 9:29 AM IST

ETV Bharat / sitara

ಹಿರಿತೆರೆಗೂ ಕಾಲಿಟ್ಟ ಕಾವ್ಯಾಗೌಡ...ಯಾವ ಸಿನಿಮಾ ಗೊತ್ತಾ..?

ಆರ್​​​​​​​​​​​ಜೆ ರೋಹಿತ್ ಅಭಿನಯದ 'ಬಕಾಸುರ' ಚಿತ್ರದಲ್ಲಿ ನಟಿಸುವ ಮೂಲಕ ಕಾವ್ಯಗೌಡ ಬೆಳ್ಳಿತೆರೆಗೆ ಕೂಡಾ ಕಾಲಿಟ್ಟಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಅವರೊಂದಿಗೆ ಜಾಹೀರಾತಿನಲ್ಲಿ ಕೂಡಾ ನಟಿಸಿರುವ ಈಕೆಗೆ ಭಿಕ್ಷುಕಿ, ಕುರುಡಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬಯಕೆ ಅಂತೆ.

ಕಾವ್ಯಾಗೌಡ

ಕಿರುತೆರೆಯ ರಾಧಿಕಾ ಪಂಡಿತ್ ಎಂದೇ ಜನಪ್ರಿಯವಾಗಿರುವ ಚೆಂದುಳ್ಳಿ ಚೆಲುವೆ ಕಾವ್ಯಾಗೌಡ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟವರು. ರಿಯಾಲಿಟಿ ಶೋ ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೀರಾ ಮಾಧವ' ಧಾರಾವಾಹಿಯಲ್ಲಿ ನಾಯಕಿ ಮೀರಾ ಆಗಿ ಅಭಿನಯಿಸಿದ್ದ ಕಾವ್ಯ ಗೌಡ 'ಶುಭವಿವಾಹ' ಧಾರಾವಾಹಿಯಲ್ಲಿ ನಾಯಕಿಯ ತಂಗಿಯ ಪಾತ್ರಕ್ಕೆ ಜೀವ ತುಂಬಿದ್ದವರು.

'ಮೀರಾ ಮಾಧವ' ಧಾರಾವಾಹಿಯಲ್ಲಿ ಮೀರಾ ಆಗಿ ಕಾಣಿಸಿಕೊಂಡು ಭರವಸೆಯ ನಟಿ ಎಂದೇ ಖ್ಯಾತಿ ಪಡೆದಿದ್ದ ಕಾವ್ಯ ಗೌಡ ಜನರಿಗೆ ಹತ್ತಿರವಾದದ್ದು ರಾಧಾ ಮಿಸ್ ಆಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ರಮಣ ಧಾರಾವಾಹಿಯ ರಾಧಾ ಮಿಸ್ ಆಗಿ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದ ಕಾವ್ಯ, ಕಲರ್ಸ್ ಕನ್ನಡ ವಾಹಿನಿಯ 'ಗಾಂಧಾರಿ' ಧಾರಾವಾಹಿಯಲ್ಲಿ ದೀಪ್ತಿ ಹಾಗೂ ದೃಷ್ಟಿ ಎಂಬ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ಅವರಿಗೆ ದ್ವಿಪಾತ್ರದಲ್ಲಿ ನಟಿಸುವುದು ಬಹಳ ಕಷ್ಟ ಎನಿಸಿತ್ತಂತೆ. ಏಕೆಂದರೆ ಒಂದು ಪಾತ್ರದಲ್ಲಿ ಅಭಿನಯಿಸದ ಕೂಡಲೇ ಮತ್ತೊಂದು ಪಾತ್ರಕ್ಕೆ ತಯಾರಿ ಮಾಡಿಕೊಳ್ಳಬೇಕಿತ್ತು. ದೀಪ್ತಿ, ದೃಷ್ಟಿ ಪಾತ್ರಗಳು ಬೇರೆ ಬೇರೆ. ಪಾತ್ರದಲ್ಲಿ ಸಾಕಷ್ಟು ಬದಲಾವಣೆ ಇರುತ್ತಿದ್ದ ಕಾರಣ ತಕ್ಷಣ ಕ್ಯಾಮರಾ ಎದುರಿಸುವುದು ಬಹಳ ಕಷ್ಟ ಆಗಿತ್ತು. ಆದರೆ ನಾನು ಹೆದರದೆ ಧೈರ್ಯದಿಂದ ನಟಿಸಿದೆ ಜನರು ಅದನ್ನು ಸ್ವೀಕರಿಸಿದರು ಎಂದು ತಮ್ಮ ದ್ವಿಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ ಕಾವ್ಯ.

ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ದೊರೆತಾಗ ಮನೆಯವರ ಒಪ್ಪಿಗೆ ಪಡೆದು ಮುಂದುವರೆದ ಕಾವ್ಯ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆತಾಗ ಹಿಂದು ಮುಂದು ನೋಡಿದರು. ನಟನೆಯ ಬಗ್ಗೆ ಅವರಿಗೆ ತಿಳಿಯದ್ದಿದ್ದದ್ದೇ ಇದಕ್ಕೆ ಕಾರಣ. ಕೊನೆಗೂ ನಿರ್ದೇಶಕರ ಒತ್ತಾಯಕ್ಕೆ ಮಣಿದು ನಟನಾ ಪಯಣ ಆರಂಭಿಸಿದ ಕಾವ್ಯ ಇಂದು ರಾಧಾ ಮಿಸ್ ಆಗಿ ಬದಲಾಗಿದ್ದಾರೆ! ಮೊದಲ ಬಾರಿ ಕ್ಯಾಮರಾ ಎದುರಿಸಿದಾಗ ಭಯವಾಗಿದ್ದು ನಿಜ, ಆದರೆ ಮತ್ತೆ ಅದು ಅಭ್ಯಾಸವಾಯಿತು ಎಂದು ಹೇಳುವ ಕಾವ್ಯ ಆರ್​​​​ಜೆ ರೋಹಿತ್ ಅಭಿನಯದ 'ಬಕಾಸುರ' ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕೂಡಾ ಕಾಲಿಟ್ಟಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಅವರೊಂದಿಗೆ ಜಾಹೀರಾತಿನಲ್ಲಿ ಕೂಡಾ ನಟಿಸಿರುವ ಈಕೆಗೆ ಭಿಕ್ಷುಕಿ, ಕುರುಡಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬಯಕೆ ಅಂತೆ. ಕಿಚ್ಚ ಸುದೀಪ್ ಅವರು ನನ್ನ ಫೇವರಿಟ್ ನಟ ಎಂದು ಸಂತಸದಿಂದ ಹೇಳುವ ಕಾವ್ಯಗೆ ಸುದೀಪ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಆಸೆ. ಇದೀಗ 'ರಾಧಾ ರಮಣ' ಧಾರಾವಾಹಿ‌ ಕೂಡಾ ಮುಗಿಯುವ ಹಂತಕ್ಕೆ ಬಂದಿದ್ದು ಮುಂದೆ ಕಾವ್ಯ ಯಾವ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

ABOUT THE AUTHOR

...view details