ಬಿಗ್ಬಾಸ್ ಆರಂಭವಾಗಿ ನಾಲ್ಕು ದಿನಗಳಾಗಿದೆ. ಇಷ್ಟೂ ದಿನಗಳಲ್ಲಿ ಸದ್ದು ಮಾಡುತ್ತಿರುವುದು ಹಿರಿಯ ಪತ್ರಕರ್ತ ರವಿ ಬೆಳಗೆರೆ. ಅದರಲ್ಲೂ ಮೊದಲ ದಿನವೇ ಮನೆಯಿಂದ ಹೊರ ಹೋಗಿ, ಮತ್ತೆ ಬಂದು ಶನಿವಾರದವರೆಗೆ ಅತಿಥಿಯಾಗಿರುವುದು ಈ ಬಾರಿಯ ಬಿಗ್ಬಾಸ್ ಟ್ವಿಸ್ಟ್.
ಇದೀಗ ಮನೆಯಲ್ಲಿ ಇರುವ ರವಿ ಬೆಳಗೆರೆ ತಮ್ಮ ಇಷ್ಟು ವರ್ಷಗಳ ಅನುಭವಗಳನ್ನು ಒಂದೊಂದಾಗಿ ಹಂಚಿಕೊಳ್ಳುತ್ತಿದ್ದಾರೆ. ಕಳೆದ 6 ಸೀಸನ್ಗಳಿಗಿಂತ ಈ ಸೀಸನ್ ಸಾಹಿತ್ಯ - ಸಂಸ್ಕೃತಿ ಸಿನಿಮಾರಂಗ ಹಾಗೂ ಇನ್ನಿತರ ಅನುಭವಗಳ ಹೂರಣವಾಗಿದೆ ಎಂಬುದು ಪ್ರೇಕ್ಷಕರ ಅಭಿಪ್ರಾಯ. ತಮ್ಮ ವಿಭಿನ್ನ ವ್ಯಕ್ತಿತ್ವ ಹಾಗೂ ಅಗಾಧ ಅನುಭವದಿಂದ ಬಿಗ್ಬಾಸ್ ಮನೆಗೆ ರವಿ ಬೆಳೆಗೆರೆ ಹೊಸ ರೂಪ ಕೊಟ್ಟಿದ್ದಾರೆ. ನಿತ್ಯ ತಮ್ಮ ಅನುಭವಗಳ ಸರಣಿಯನ್ನು ಸ್ಪರ್ಧಿಗಳ ಮುಂದೆ ಬಿಚ್ಚಿಡುವ ಮೂಲಕ ಪ್ರೇಕ್ಷಕರಿಗೆ ಅನೇಕ ವಿಚಾರಗಳನ್ನು ರವಾನಿಸುತ್ತಾ, ತಮ್ಮಲ್ಲಿನ ಪ್ರತಿಭೆಯನ್ನು ಜನರಿಗೆ ಪರಿಚಯಿಸುತ್ತಿದ್ದಾರೆ. ಇದೀಗ ತಮ್ಮಲ್ಲಿರುವ ಕವಿಯನ್ನು ರವಿ ಬೆಳೆಗೆರೆ ಜನರಿಗೆ ಪರಿಚಯಿಸಲು ಸಜ್ಜಾಗಿದ್ದಾರೆ.
ನಿನ್ನೆಯ ಸಂಚಿಕೆಯ ಒಂದು ಸಣ್ಣ ಝಲಕ್ಗಳನ್ನು ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದೆ. ಇಂದು ಬಿಗ್ಬಾಸ್ ಮನೆಯಲ್ಲಿ ರವಿ ಬೆಳಗೆರೆಯವರ ಕವಿ ಸಮ್ಮೇಳನ ನಡೆಯಲಿದೆ. ಇದರಲ್ಲಿ ಒಬ್ಬೊಬ್ಬ ಸ್ಪರ್ಧಿಗಳ ಮುಖದಲ್ಲಿ ಕಂಡ ಸ್ವಭಾವಗಳಿಗೆ ರವಿ ಬೆಳೆಗೆರೆಯವರು ಕಾವ್ಯ ಸ್ಪರ್ಶನೀಡಿ ಓದಲಿದ್ದಾರೆ. ಇದರ ನಡುವೆ ಎಂದಿನಂತೆ ಬಿಗ್ಮನೆಯಲ್ಲಿ ಟಾಸ್ಕ್ ಕೂಡಾ ಇರಲಿದೆ. ಸ್ಪರ್ಧಿಗಳು ತಮ್ಮ ತಂದೆ ತಾಯಿಯನ್ನು ನೆನಪಿಸಿಕೊಂಡು ಮಾತನಾಡುತ್ತಾರೆ.
ಬಿಗ್ ಬಾಸ್ ಮನೆಯಲ್ಲಿ ರವಿಬೆಳಗೆರೆ ತಾವು ಪತ್ರಕರ್ತರು ಬರಹಗಾರರು ಹಾಗೂ ವಾಗ್ಮಿ ಎಂಬುದನ್ನು ತಮ್ಮ ಇಷ್ಟು ವರ್ಷದ ಅನುಭವಗಳ ಮೂಲಕ ಪ್ರದರ್ಶಿಸುತ್ತಿದ್ದಾರೆ, ಅಲ್ಲದೇ ಅವರು ಮನೆಯಲ್ಲಿ ಈ ಬಾರಿ ಯಾರಿಗೂ ತಿಳಿಯದ ಆಶ್ಚರ್ಯಕರ ಸಂಗತಿಯನ್ನು ಹೇಳುತ್ತೇನೆಂದು ಬಂದಿದ್ದಾರೆ. ಅದೇನೆಂದರೆ ಜ್ಯೋತಿಷ್ಯ. ಆದರೆ ಬಿಗ್ಬಾಸ್ ಅವರಿಗೆ ಶನಿವಾರದವರೆಗೆ ಮಾತ್ರ ಅತಿಥಿಯೆಂದು ಘೋಷಿಸಿದೆ. ಆದರೆ, ಇನ್ನುಳಿದ ಎರಡು ದಿನಗಳಲ್ಲಿ ಅವರು ಜ್ಯೋತಿಷ್ಯ ಹೇಳುತ್ತಾರೊ, ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.