ಕರ್ನಾಟಕ

karnataka

ETV Bharat / sitara

ಮುಲಾಜಿಲ್ಲದೆ ನೋಡಿ ಬನ್ನಿ ಮುಂದಿನ ನಿಲ್ದಾಣ - mundina nildana movie review update

film
ಮುಂದಿನ ನಿಲ್ದಾಣ

By

Published : Nov 28, 2019, 10:41 AM IST

Updated : Nov 28, 2019, 10:58 AM IST

ಪ್ರೇಕ್ಷಕರ ಮನೆಗಳಿಂದ ಚಿತ್ರಮಂದಿರಗಳಿಗೆ ಹೋಗುವಷ್ಟು ಸುಲಭವಾಗಿ ಮುಂದಿನ ನಿಲ್ದಾಣ ಸಿನಿಮಾದ ನಿರೂಪಣೆ ಅರ್ಥವಾಗುತ್ತದೆ. ಕೆಲವು ಅನಿವಾಸಿ ಭಾರತೀಯರು ಸೇರಿಕೊಂಡು ವಿನಯ್ ಭಾರದ್ವಾಜ್ ನಿರ್ದೇಶನದಲ್ಲಿ ತಯಾರಿಸಿರುವ ಈ ಚಿತ್ರಕ್ಕೆ ಮೊದಲ ಅಂಕ ಸಿಗುವುದೇ ನವಿರಾದ, ತಂಪಾದ ಶೈಲಿಯಲ್ಲಿ ನಿರೂಪಣೆಯನ್ನು ಒಗ್ಗಿಸಿಕೊಂಡು ಹೇಳಿರುವುದರಿಂದ. ವಿನಯ್ ಭಾರದ್ವಾಜ್ ಸಹ ವಿದೇಶದಲ್ಲಿ ಬ್ಯಾಂಕ್ ಉದ್ಯಮದಲ್ಲಿ ಇದ್ದು ಹಲವಾರು ಟಾಕ್ ಶೋ ಸಹ ನಿರೂಪಣೆ ಮಾಡಿದವರು.

ನಟ ಪ್ರವೀಣ್ ತೇಜ್

ಕಥೆಯ ನಿರೂಪಣೆಯಲ್ಲಿ ಅವರು ‘ನಿಲ್ದಾಣವನ್ನು’ ನಾಯಕನ ಜೀವನದಲ್ಲಿ ಬದಲಿಸುತ್ತಾ ಹೋಗುತ್ತಾರೆ. ಆದರೆ ಕಥೆ ಹೇಳಿರುವ ಶೈಲಿ ಇದೆಯಲ್ಲ ಅದು ಮುಲಾಜಿಲ್ಲದೆ ಕುಳಿತು ಸಿನಿಮಾವನ್ನು ನೋಡುವಂತೆ ಮಾಡಿದೆ. ಒಂದು ಚಿತ್ರ ಪ್ರದರ್ಶನದಲ್ಲಿ ಸಂದರ್ಶನ ಕೊಡುವುದರಿಂದ ಪ್ರಾರಂಭ ಆಗುವ ಸಿನಿಮಾ ನಾಯಕ ಪಾರ್ಥ (ಪ್ರವೀಣ್ ತೇಜ್) ಜೀವನದ ಪುಟಗಳನ್ನು ತೆರೆದಿಡುತ್ತದೆ. ಅವನ ಜೀವನದಲ್ಲಿ ನಿಲ್ದಾಣ ಸಹ ಆಗಾಗ್ಗೆ ಬದಲಾಗುತ್ತ ಹೋಗುವುದು ಚಿತ್ರದಲ್ಲಿ ಕಾಣಸಿಗುತ್ತದೆ.

ನಟಿ ಅನನ್ಯಾ ಕಶ್ಯಪ್

ಪಾರ್ಥ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾಗ ಮೀರಾ (ರಾಧಿಕ ನಾರಾಯಣ್) ಪರಿಚಯ, ಸ್ನೇಹಕ್ಕೆ ತಿರುಗುತ್ತದೆ. ಆ ಸ್ನೇಹದಿಂದಲೇ ಮೀರಾ ನನ್ನನ್ನು ಮದುವೆ ಆಗು ಎಂದು ಪಾರ್ಥನನ್ನು ಕೇಳಿದಾಗ ಸಿನಿಮಾಗೆ ತಿರಿವು ಸಿಗುತ್ತದೆ. ಅಲ್ಲಿಂದ ಪಾರ್ಥನ ಜೀವನದಲ್ಲಿ ಡಾಕ್ಟರ್ ಅಹನಾ (ಅನನ್ಯ ಕಶ್ಯಪ್) ಆಗಮನ ಆಗುತ್ತದೆ. ಈಗ ಪಾರ್ಥ ಅಹನಾಳ ಮುಂದೆ ಪ್ರೇಮ ಪ್ರಸ್ತಾಪ ಇಡುತ್ತಾನೆ. ಅಲ್ಲಿಗೆ ಪ್ರೇಕ್ಷಕರಿಗೆ ಕೊಂಚ ನಿರಾಸೆ ಉಂಟಾಗುತ್ತದೆ. ಅತ್ತ ಕಡೆ ಅಹನಾ ಒಂದು ನಿರ್ಧಾರ ತೆಗೆದುಕೊಳ್ಳಲು ಅವಳಿಗೆ ಮೀರಾ ಸಂಪರ್ಕ ಬೆಳೆದಿರುತ್ತದೆ. ಇಲ್ಲಿರುವುದು ಮತ್ತೊಂದು ತಿರುವು.

ಈ ಅಹನಾ ಹಾಗೂ ಮೀರಾ ಜೊತೆಗಿನ ಬಾಂಧವ್ಯ ಮತ್ತೆ ಪಾರ್ಥ ಹಾಗೂ ಮೀರಾ ಹತ್ತಿರ ಆಗುವಂತೆ ಮಾಡುತ್ತದೆ. ಕೊನೆಗೆ ಎಲ್ಲರ ನಿಲ್ದಾಣ ಜೀವನದಲ್ಲಿ ಯಾವುದು? ಮೀರಾಗೆ ಈಗ ಪಾರ್ಥ ಮದುವೆ ಆಗಲು ಇಟ್ಟ ವಿನಂತಿಯನ್ನು ಅವಳು ಸ್ವೀಕಾರ ಮಾಡಿದಳೇ...ಇದಕ್ಕೆಲ್ಲ ಉತ್ತರ ನೀವು ಚಿತ್ರಮಂದಿರದಲ್ಲಿ ಪಡೆದುಕೊಳ್ಳಬಹುದು.

ಪ್ರವೀಣ್ ತೇಜ್ ಥೇಟ್ ಬಾಲಿವುಡ್ ನಟನಂತೆ ಈ ಚಿತ್ರದಲ್ಲಿ ಕಂಗೊಳಿಸುತ್ತಾರೆ. ಆಸೆ, ನಿರಾಸೆ, ತರ್ಕ ಮಾಡುವ ಮನಸ್ಸು, ನಿರಮ್ಮಳ ಆಗಿ ಇದ್ದು ಬಿಡುವ ರೀತಿ ಅವರ ಅಭಿನಯದಿಂದ ವ್ಯಕ್ತ ಆಗಿದೆ.

ಚಿನಕುರುಳಿ ಹಾಗೆ ನಟನೆ ಮಾಡಿ ಹೆಚ್ಚು ಗಮನ ಸೆಳೆಯುವುದು ಅನನ್ಯ ಕಶ್ಯಪ್. ಇವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಅನ್ನಿಸದೇ ಇರದು. ರಾಧಿಕಾ ನಾರಾಯಣ್ ಅವರಿಗೆ ಯು ಟರ್ನ್ ಸಿನಿಮಾ ನಂತರ ಒಂದು ಗುರುತಿಸಿಕೊಳ್ಳುವ ಪಾತ್ರ ಸಿಕ್ಕಿದೆ.

ಅಜಯ್ ರಾಜ್ ಹಾಗೂ ದತ್ತಣ್ಣ ಅವರ ಲವಲವಿಕೆಯ ಮಾತುಗಳು ಚಿತ್ರದ ಗುಣವನ್ನು ಹೆಚ್ಚಿಸುತ್ತದೆ. ಈ ಚಿತ್ರಕ್ಕೆ ಆರು ಸಂಗೀತ ನಿರ್ದೇಶಕರುಗಳು ಹಾಡುಗಳಿಗೆ ಹಾಗೂ ಹಿನ್ನಲೆ ಸಂಗೀತ ಜೋಡಣೆ ಮಾಡಿದ್ದಾರೆ. ವಾಸುಕಿ ವೈಭವ್ ಅವರ ಎರಡು ಹಾಡುಗಳು ಮತ್ತು ನಾಯಕಿ ಅನನ್ಯ ಕಶ್ಯಪ್ ಅವರಿಗೆ ನೀಡಲಾದ ಹಾಡು ಉತ್ತಮ ಗುಣಮಟ್ಟದಲ್ಲಿದೆ. ಶಂಕರ್ ಅಶ್ವಥ್ ನಾಯಕನ ಅಪ್ಪನಾಗಿ ಒಂದು ಸನ್ನಿವೇಶದಲ್ಲಿ ಆಪ್ತರೆನಿಸುತ್ತಾರೆ.

ಈ ಚಿತ್ರದ ಮತ್ತೊಂದು ಬೆಸ್ಟ್ ಪಾರ್ಟ್ ಅಂದರೆ ಛಾಯಾಗ್ರಹಣ. ಅಭಿಮನ್ಯು ಸದಾನಂದ್ ಅವರ ಕ್ಯಾಮರಾಸೆರೆ ಕಣ್ಣುಗಳಿಗೆ ಆನಂದವನ್ನು ನೀಡುತ್ತದೆ.

ಅನೇಕ ಅಬ್ಬರ, ರಕ್ತಪಾತ, ದ್ವಂದಾರ್ಥ, ಕೊಲೆ, ಅನಪೇಕ್ಷಿತ ಸನ್ನಿವೇಶಗಳನ್ನು ಒಳಗೊಂಡ ಕನ್ನಡ ಸಿನಿಮಾಗಳ ಮಧ್ಯೆ ಈ ‘ಮುಂದಿನ ನಿಲ್ದಾಣ’ ಸಿನಿಮಾ ಎದ್ದು ಕಾಣುತ್ತದೆ. ಇದು ಫೀಲ್ ಗುಡ್ ಸಿನಿಮಾ..!

Last Updated : Nov 28, 2019, 10:58 AM IST

ABOUT THE AUTHOR

...view details