ಹೊಸ ಕಲ್ಪನೆಯ ತ್ರಿಕೋನ ಪ್ರೇಮಕಥೆಗೆ ಮ್ಯೂಸಿಕ್ನ ಮ್ಯಾಜಿಕ್ ಟಚ್ ನೀಡಿ ಮೋಡಿ ಮಾಡಲು ಬರ್ತಿದೆ ಅಕ್ಕ ತಂಗಿ ಬಾಂಧವ್ಯದ ಕಥೆ 'ಕಾವ್ಯಾಂಜಲಿ'. ಕಾವ್ಯ ಹಾಗೂ ಅಂಜಲಿಯಾಗಿ ನಟಿಸುತ್ತಿರುವ ಪಾತ್ರಧಾರಿಗಳು ಪ್ರೇಕ್ಷಕರಿಗೆ ಹೊಸ ಮುಖಗಳು.
ಸುಷ್ಮಿತಾ ಭಟ್
ಸುಷ್ಮಿತಾ (ವಿಡಿಯೋ ಕೃಪೆ: ಉದಯ ವಾಹಿನಿ) ಕಾವ್ಯಾಂಜಲಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿ ಅಂಜಲಿಯಾಗಿ ನಟಿಸುತ್ತಿರುವ ಸುಷ್ಮಿತಾ ಭಟ್ ಹುಟ್ಟಿದ್ದು ಉಡುಪಿಯಲ್ಲಾದರೂ ನೆಲೆಸಿರುವುದು ಬೆಂಗಳೂರಿನಲ್ಲಿ. ಬಿ.ಇ ಓದಿರುವ ಸುಷ್ಮಿತಾ ಯೋಗ ಹಾಗೂ ಶಾಸ್ತ್ರೀಯ ನೃತ್ಯದಲ್ಲಿ ಪರಿಣಿತರಾಗಿದ್ದಾರೆ. ಕಾವ್ಯಾಂಜಲಿ ಇವರ ಮೊದಲ ಧಾರಾವಾಹಿಯಾಗಿದ್ದು, ನಟನೆ ಜೊತೆಗೆ ಇವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಪವನ್ ರವೀಂದ್ರ
ಪವನ್ ರವೀಂದ್ರ (ವಿಡಿಯೋ ಕೃಪೆ: ಉದಯ ವಾಹಿನಿ) ಕಾವ್ಯಾಂಜಲಿ ಧಾರಾವಾಹಿಯಲ್ಲಿ ನಾಯಕ ಸುಶಾಂತ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಪವನ್ ರವೀಂದ್ರ ಅವರು ಮೂಲತಃ ಬೆಂಗಳೂರಿನವರೇ ಆಗಿದ್ದಾರೆ. ಇವರು ಬಿ.ಇ ಪದವಿ ಪಡೆದಿದ್ದಾರೆ. ಸುಶಾಂತ್ ಮೆಚ್ಚಿನ ಹವ್ಯಾಸವೆಂದರೆ ಬೈಕ್ ರೈಡಿಂಗ್. ಹಾಗೆಯೇ ಫುಟ್ಬಾಲ್ ಮತ್ತು ಷಟಲ್ ಬ್ಯಾಡ್ಮಿಂಟನ್ನಲ್ಲಿ ಪರಿಣಿತಿ ಪಡೆದಿದ್ದಾರೆ. ತಮ್ಮ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲೇ ಅಭಿನಯದ ಮೇಲೆ ಆಸಕ್ತಿ ಹೊಂದಿದ್ದ ಇವರು, ಕಾವ್ಯಾಂಜಲಿಗೂ ಮುನ್ನ ಕನ್ನಡ ಮತ್ತು ಇತರ ಭಾಷೆಗಳ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ವಿದ್ಯಾಶ್ರೀ
ವಿದ್ಯಾಶ್ರೀ (ವಿಡಿಯೋ ಕೃಪೆ: ಉದಯ ವಾಹಿನಿ) ಕಾವ್ಯ ಪಾತ್ರದಲ್ಲಿ ನಟಿಸುತ್ತಿರುವ ವಿದ್ಯಾಶ್ರೀ ಜಯರಾಮ್ ಮೂಲತಃ ಹಾಸನದವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಏರೋನಾಟಿಕ್ಸ್ನಲ್ಲಿ ಡಿಪ್ಲೊಮಾ ಓದಿದ್ದಾರೆ. ನೃತ್ಯ ಮತ್ತು ಚಿತ್ರಕಲೆ ಇವರ ನೆಚ್ಚಿನ ಹವ್ಯಾಸಗಳಾಗಿವೆ. ಆ್ಯಕ್ಟಿಂಗ್ಗೆ ಬರುವ ಮುನ್ನ ಇವರು ಗಗನಸಖಿಯಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಕಾವ್ಯಾಂಜಲಿ ಇವರು ನಾಯಕಿಯಾಗಿ ಅಭಿನಯಿಸುತ್ತಿರುವ ಮೊದಲ ಧಾರಾವಾಹಿ.
ಈ ಹೊಸ ಪ್ರತಿಭೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಹೇಗೆ ಯಶಸ್ವಿಯಾಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಇಂದಿನಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಕಾವ್ಯಾಂಜಲಿ ಪ್ರಸಾರವಾಗಲಿದೆ.