ಕರ್ನಾಟಕ

karnataka

ETV Bharat / sitara

'ನಾನು ಉಳಿಯೋದು ಕಷ್ಟ, ದಯಮಾಡಿ ಧನಸಹಾಯ ಮಾಡಿ': ನಟಿ ವಿಜಯಲಕ್ಷ್ಮಿ ಮನವಿ

'ನಾವೀಗ ಬಹಳ ನೋವಿನಲ್ಲಿ ಇದ್ದೇವೆ. ದಯವಿಟ್ಟು ನಮಗೆ ಆರ್ಥಿಕವಾಗಿ ಸಹಾಯ ಮಾಡಿ' ಎಂದು ನಟಿ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.

By

Published : Sep 16, 2021, 6:09 PM IST

actress Vijayalakshmi
ನಟಿ ವಿಜಯಲಕ್ಷ್ಮಿ

ಕನ್ನಡ ಚಿತ್ರರಂಗದಲ್ಲಿ ಸೂರ್ಯವಂಶ, ನಾಗಮಂಡಲ, ಸ್ವಸ್ತಿಕ್ ಸಿನಿಮಾ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತಿ ಹೊಂದಿದ ನಟಿ ವಿಜಯಲಕ್ಷ್ಮಿ. ಕೆಲವು ತಿಂಗಳ ಹಿಂದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವಿಜಯಲಕ್ಷ್ಮಿ, ಸಹೋದರಿ ಉಷಾ ಆರೋಗ್ಯ ಚಿಂತಾಜನಕವಾಗಿದೆ. ದಯಮಾಡಿ ಹಣದ ಸಹಾಯ ಮಾಡಿ ಅಂತಾ ವಿಡಿಯೋ ಮೂಲಕ ಮನವಿ ಮಾಡಿದ್ದರು.

ಸದ್ಯ ವಿಜಯಲಕ್ಷ್ಮಿ ಅವರಿಗೆ ಕೋವಿಡ್​ ಸೋಂಕು ತಗುಲಿದ್ದು, ಆರೋಗ್ಯ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿರುವ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ವಿಜಯಲಕ್ಷ್ಮಿ ಮನವಿ

'ನಾನು ಜ್ವರದಿಂದ ತುಂಬಾ ನರಳುತ್ತಿದ್ದೇನೆ. ಐದು ದಿನಗಳಿಂದ ಜ್ವರ ಬಂದಿದ್ದು, ಕಷ್ಟಪಟ್ಟು ಆಸ್ಪತ್ರೆಗೆ ಬಂದಿದ್ದೇನೆ. ನಾನು ಕೋವಿಡ್​ ಸೆಂಟರ್​ಗೆ ಹೋಗಬೇಕು. ಈ ಬಗ್ಗೆ ಕಲಾವಿದರ ಸಂಘಕ್ಕೆ ಮನವಿ ಮಾಡಿದ್ದೇನೆ. ನಾನು ಎಲ್ಲರ ಜತೆಯೂ ಮಾತನಾಡುತ್ತಿದ್ದೇನೆ. ಆದರೆ ಪ್ರಯೋಜನವಾಗುತ್ತಿಲ್ಲ. ನನಗೆ ಕೋವಿಡ್​ ನ್ಯುಮೋನಿಯಾ ಅಟ್ಯಾಕ್​ ಆಗಿದೆ. ನಾನು ಉಳಿಯುವ ರೀತಿ ಕಾಣುತ್ತಿಲ್ಲ. ಐದು ದಿನದಿಂದ ಊಟ ಸರಿಯಾಗಿ ಸಿಗುತ್ತಿಲ್ಲ. ನಾನು ಎಲ್ಲಿಯೂ ಹೋಗಿಲ್ಲ. ಕರ್ನಾಟಕದಲ್ಲೇ ಇದ್ದೇನೆ' ಎಂದಿದ್ದಾರೆ.

'ನನ್ನ ಸಹೋದರಿ ಉಷಾ ತುಂಬಾ ವೀಕ್​​ ಆಗಿದ್ದಾರೆ. ಎರಡು ಮೂರು ದಿನದಿಂದ ನೆನಪು ಮಾಡಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಅವರಿಗೆ ಮಾತನಾಡಲು ಆಗುತ್ತಿಲ್ಲ. ಸರ್ಜರಿ ಆದ ನಂತರ ಇಷ್ಟೆಲ್ಲ ಆಗಿದೆ. ಡಾಕ್ಟರ್​ ಜತೆ ಮಾತನಾಡಿ ನನಗೆ ಸಾಕಾಗಿದೆ. ಯಾರೂ ಕೂಡ ಅವರು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಈಗ ಉಷಾ ಅವರಿಗೆ ಬೇರೆ ಕಡೆ ಚಿಕಿತ್ಸೆ ಕೊಡಿಸಲು ನಮ್ಮ ಬಳಿ ದುಡ್ಡಿಲ್ಲ. ನಾವೀಗ ಬಹಳ ನೋವಿನಲ್ಲಿ ಇದ್ದೇವೆ. ದಯವಿಟ್ಟು ನಮಗೆ ಆರ್ಥಿಕವಾಗಿ ಸಹಾಯ ಮಾಡಿ' ಎಂದು ಅಭಿಮಾನಿಗಳಲ್ಲಿ ಹಾಗು ಸಿನಿಮಾ ರಂಗದವರಿಗೆ ವಿಜಯಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಮತ್ತೊಂದು ಸಂಕಷ್ಟದಲ್ಲಿ ವಿಜಯಲಕ್ಷ್ಮಿ: ಸಹೋದರಿಗಾಗಿ ಶಿವಣ್ಣನ ಸಹಾಯ ಕೇಳಿದ ನಟಿ

ABOUT THE AUTHOR

...view details