ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಣ್ಮಣಿ' ಧಾರಾವಾಹಿಯಲ್ಲಿ ಡಿಕೆ ಎಂಬ ಬ್ಯುಸ್ನೆಸ್ ಮ್ಯಾನ್ ಪಾತ್ರದಲ್ಲಿ ನಟಿಸಿ ಹೆಸರು ಮಾಡಿದ್ದ ದರ್ಶಕ್ ಗೌಡ ಇದೀಗ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.
ಉದಯ ವಾಹಿನಿಯಲ್ಲಿ ಇತ್ತೀಚೆಗೆ ಆರಂಭವಾಗಿರುವ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಸಿದ್ಧಾರ್ಥ್ ಅರಸ್ ಆಗಿ ದರ್ಶಕ್ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ದರ್ಶಕ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದರ್ಶಕ್ ತಮ್ಮ ಪಾತ್ರದ ವಿಡಿಯೋ ತುಣುಕೊಂದನ್ನು ಷೇರ್ ಮಾಡಿದ್ದು ಒಂದು ವರ್ಷದ ನಂತರ ಮತ್ತೆ ಕಿರುತೆರೆಗೆ ಕಂಬ್ಯಾಕ್ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷದ ಗ್ಯಾಪ್ ನಂತರ ಮುದ್ದು ಮಗನ ಪಾತ್ರದ ಮೂಲಕ ಮತ್ತೆ ನಿಮ್ಮ ಮುಂದೆ ಬಂದಿದ್ದೇನೆ ಎಂದು ದರ್ಶಕ್ ಬರೆದುಕೊಂಡಿದ್ದಾರೆ. ಮೂಲತಃ ಟೆಕ್ಕಿಯಾಗಿರುವ ದರ್ಶಕ್, 'ಪದ್ಮಾವತಿ' ಧಾರಾವಾಹಿಯಲ್ಲಿ ಪ್ರಸನ್ನ ಪಾತ್ರಕ್ಕೆ ಜೀವ ತುಂಬಿದ್ದರು. ಪದ್ಮಾವತಿಯಲ್ಲಿ ದರ್ಶನ್ ರಗಡ್ ಲುಕ್ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಂತರ 'ಕಣ್ಮಣಿ' ಧಾರಾವಾಹಿಯಲ್ಲಿ ಡಿಕೆ ಎಂಬ ಬ್ಯುಸ್ನೆಸ್ ಮ್ಯಾನ್ ಪಾತ್ರ ಮಾಡಿ ದರ್ಶಕ್ ಸೈ ಎನಿಸಿಕೊಂಡಿದ್ದರು.
'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ನಟಿಸುತ್ತಿರುವ ದರ್ಶಕ್
'ಕಾವ್ಯಾಂಜಲಿ' ಧಾರಾವಾಹಿ ಕಾವ್ಯ ಹಾಗೂ ಅಂಜಲಿ ಎಂಬ ಅಕ್ಕ-ತಂಗಿಯರ ಕಥೆಯಾಗಿದ್ದು ವಿದ್ಯಾಶ್ರೀ ಜಯರಾಮ್, ಸುಷ್ಮಿತಾ ಭಟ್ , ಪವನ್ ರವೀಂದ್ರ ಹಾಗೂ ದರ್ಶಕ್ ಗೌಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದರ್ಶಕ್ ಕಳೆದ ವರ್ಷ, ಶಿಲ್ಪಾ ರವಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.