ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ' ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ಅಭಿನಯಿಸುತ್ತಿರುವ ಕಿರಣ್ ರಾಜ್, ನಟರಾಗಿ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳ ಮೂಲಕ ಸುದ್ದಿಯಲ್ಲಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಹಾಗೂ ಈಗಲೂ ಕೂಡಾ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.
100 ದಿನಗಳನ್ನು ಪೂರೈಸಿದ ಕಿರಣ್ ರಾಜ್ ಫೌಂಡೇಶನ್ ಸಾಮಾಜಿಕ ಸೇವೆ - Small screen actor Kiran raj
ಕಿನ್ನರಿ, ಕನ್ನಡತಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಧಾರಾವಾಹಿ ಪ್ರಿಯರ ಮನ ಗೆದ್ದ ಕಿರಣ್ ರಾಜ್ ತಮ್ಮ ಫೌಂಡೇಷನ್ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಮುಂದಿದ್ದಾರೆ. ಸಾಮಾಜಿಕ ಸೇವೆಯಲ್ಲಿ 365 ದಿನಗಳನ್ನು ಪೂರೈಸುವುದು ನಮ್ಮ ಗುರಿ ಎಂದು ಕಿರಣ್ ರಾಜ್ ಹೇಳಿದ್ದಾರೆ.
![100 ದಿನಗಳನ್ನು ಪೂರೈಸಿದ ಕಿರಣ್ ರಾಜ್ ಫೌಂಡೇಶನ್ ಸಾಮಾಜಿಕ ಸೇವೆ Actor Kiran raj](https://etvbharatimages.akamaized.net/etvbharat/prod-images/768-512-8486155-501-8486155-1597904188859.jpg)
ಇದೀಗ ಮತ್ತೊಂದು ಸಂತೋಷದ ವಿಚಾರವನ್ನು ಕಿರಣ್ ರಾಜ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಸ್ಕಾನ್ ಸಹಯೋಗದಲ್ಲಿ ಕಿರಣ್ ರಾಜ್ ತಮ್ಮ ಕಿರಣ್ ಫೌಂಡೇಶನ್ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಅಂದ ಹಾಗೆ 'ಈ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ಕಾರ್ಯ ಯಶಸ್ವಿ 100 ದಿನಗಳನ್ನು ಪೂರ್ಣಗೊಳಿಸಿದೆ. ಜೊತೆಗೆ ಈ ಸಂಕಷ್ಟ ಕಾಲದಲ್ಲಿ ಸಹಾಯ ಮಾಡಿರುವುದರಿಂದ ತೃಪ್ತಿ ಇದೆ. ಇನ್ನು 365 ದಿನಗಳನ್ನು ಪೂರೈಸುವ ಗುರಿ ಹೊಂದಿದ್ದೇವೆ' ಎಂದು ಕಿರಣ್ ಬರೆದುಕೊಂಡಿದ್ದಾರೆ.
ಕಿರಣ್ ರಾಜ್ ಆರಂಭಿಸಿರುವ ಈ ಯೋಜನೆ ಅದೆಷ್ಟೋ ಜನರಿಗೆ ಸಹಾಯವಾಗಿದೆ ಹಾಗೂ ಮಾದರಿಯಾಗಿದೆ. ವೃದ್ಧಾಶ್ರಮ, ಅನಾಥಾಶ್ರಮ ಸೇರಿದಂತೆ ಇದುವರೆಗೂ ಸುಮಾರು 250 ಕುಟುಂಬಗಳಿಗೆ ಕಿರಣ್ ನೆರವು ನೀಡಿದ್ದಾರೆ. ಅವರ ಸಂಪಾದನೆಯಲ್ಲಿ ಶೇ. 40 ರಷ್ಟು ಭಾಗವನ್ನು ಬಡವರಿಗಾಗಿ ಮೀಸಲಿಟ್ಟಿದ್ದಾರೆ. ಇದರ ಜೊತೆಗೆ ಈ ಹಿಂದೆ ಬೀದಿಬದಿಯ ವ್ಯಾಪಾರಿಯಿಂದ ವಸ್ತುವೊಂದನ್ನು ಖರೀದಿಸುವ ಮೂಲಕ ಅವರಿಗೆ ಸಹಾಯ ಮಾಡಿದ್ದರು. ಒಟ್ಟಿನಲ್ಲಿ ಕಿರಣ್ ರಾಜ್ ತೆರೆ ಮೇಲೆ ಮಾತ್ರವಲ್ಲ, ತೆರೆ ಹಿಂದೆ ಕೂಡಾ ರಿಯಲ್ ಹೀರೋ ಎನಿಸಿದ್ದಾರೆ.