ಸಾಕಷ್ಟು ಕುತೂಹಲ ಕೆರಳಿಸಿದ್ದ 'ಕವಲುದಾರಿ' ಸಿನಿಮಾ ಇಂದು ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ತೆರೆ ಕಂಡಿದೆ. ಇದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಪಿಆರ್ಕೆ ಬ್ಯಾನರ್ನಿಂದ ಬಿಡುಗಡೆಯಾದ ಮೊದಲ ಸಿನಿಮಾ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ಮಾಡಿ ಸಕ್ಸಸ್ ಆಗಿದ್ದ ನಿರ್ದೇಶಕ ಹೇಮಂತ್ ರಾವ್ ಮತ್ತೊಂದು 'ಕವಲುದಾರಿ' ಯಂತ ಒಳ್ಳೆ ಸಿನಿಮಾ ನಿರ್ದೇಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಸಿನಿಮಾಗೆ ಹೇಮಂತ್ ಅವರೇ ಚಿತ್ರಕಥೆ ಬರೆದಿದ್ದಾರೆ. ಸಿನಿಮಾ ನಿಜಕ್ಕೂ ಸಿನಿಪ್ರಿಯರ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದೆ. ಕ್ರೈಂ ಥ್ರಿಲ್ಲರ್ ಕಥೆ ಆಧರಿಸಿರುವ ಕವಲುದಾರಿ ಸಿನಿಮಾ ಸದ್ಯಕ್ಕೆ ಸಮಾಜದಲ್ಲಿ ನಡೆಯುತ್ತಿರುವ ರಾಜಕೀಯ ವ್ಯವಸ್ಥೆ, ಅಧಿಕಾರದ ಆಸೆ, ಬೇರೆಯವರನ್ನು ಬಲಿ ಕೊಟ್ಟು ನಾನು ಚೆನ್ನಾಗಿರಬೇಕು ಎಂಬ ಮನೋಭಾವ... ಹೀಗೆ ಸೂಕ್ಷ್ಮ ವಿಷಯಗಳ ಬಗ್ಗೆ ಕವಲುದಾರಿ ಸಿನಿಮಾ ಬೆಳಕು ಚೆಲ್ಲುತ್ತದೆ.
ಒಂದು ಕುಟುಂಬದ ಸಾವಿನ ಸುತ್ತ ಆರಂಭವಾಗುವ ಕವಲುದಾರಿ ಸಿನಿಮಾ ಕ್ಷಣ ಕ್ಷಣಕ್ಕೂ ರೋಚಕತೆಯಿಂದ ಕೂಡಿದೆ. ಟ್ರಾಫಿಕ್ ಪೊಲೀಸ್ ಆಗಿ ನಟಿಸಿರುವ ನಾಯಕ ನಟ ಶ್ಯಾಮ್ (ರಿಷಿ)ಗೆ ಕ್ರೈಂ ಬ್ರಾಂಚ್ ಪೊಲೀಸ್ ಆಫೀಸರ್ ಆಗಿ, ಕ್ರೈಂ ಇನ್ವೆಷ್ಟಿಗೇಶನ್ ಮಾಡಬೇಕು ಎಂಬ ಆಸೆ. ಆದರೆ ಮೇಲಾಧಿಕಾರಿಗಳು ಶ್ಯಾಮ್ ಆಸೆಗೆ ತಣ್ಣೀರು ಎರುಚುವ ಕೆಲಸ ಮಾಡುತ್ತಾರೆ. ಆದರೂ ರಿಷಿ ಒಂದು ಕೊಲೆಯ ಕೇಸನ್ನು ಸ್ಟಡಿ ಮಾಡಿ, ಆ ಕೊಲೆಯ ಹಿಂದಿನ ರಹಸ್ಯವನ್ನು ಹೇಗೆ ಬೇಧಿಸುತ್ತಾನೆ ಅನ್ನೋದು ಸಿನಿಮಾದ ಕಥೆ.