ಕರ್ನಾಟಕ

karnataka

ಕುರುಕ್ಷೇತ್ರ ವೈಭವದ ಬೆರಗು ಕಣ್ಣಿಗೆ ಸೊಬಗು

By

Published : Aug 9, 2019, 6:52 PM IST

ಕುರುಕ್ಷೇತ್ರ

ಭಾರತೀಯ ಚಿತ್ರ ರಂಗದಲ್ಲಿ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು ಚಿರಪರಿಚಿತ. ಇದಕ್ಕೆ ಕಾರಣ ರಮಾನಂದ್ ಸಾಗರ್ ಹಾಗೂ ಬಿ.ಆರ್. ಚೋಪ್ರಾ. ಇವರು ಧಾರಾವಾಹಿ ಮೂಲಕ ಇವೆರಡೂ ಮಹಾನ್ ಗ್ರಂಥಗಳನ್ನು ಮನೆ ಮನೆಗೂ ತಲುಪಿಸಿದವರು. ಅದಕ್ಕೂ ಮುಂಚೆ ದಕ್ಷಿಣ ಭಾರತದಲ್ಲಿ ಹಲವಾರು ಪೌರಾಣಿಕ ಸಿನಿಮಾಗಳು ರಾಮಾಯಣ ಹಾಗೂ ಮಹಾಭಾರತ ಆಧರಿಸಿ ಬಂದಿವು.

ಈಗ ಬಂದಿರುವ ‘ಕುರುಕ್ಷೇತ್ರ’ ಸಿನಿಮಾದ ಏಕೈಕ ಹೆಗ್ಗಳಿಕೆ ಅಂದರೆ ಅದಕ್ಕೆ ಬಳಸಿರುವ ತಂತ್ರಜ್ಞಾನ. ಕಥೆ ವಿಚಾರದಲ್ಲಿ ಬದಲಾವಣೆ ಅಸಾಧ್ಯ. ಆದರೆ, ಈ ಚಿತ್ರದಲ್ಲಿ ದುರ್ಯೋಧನ ಕೇಂದ್ರೀಕೃತ ‘ಕುರುಕ್ಷೇತ್ರ’ ತೆರೆಯ ಮೇಲೆ ಬಹಳ ದೊಡ್ಡ ರೀತಿಯಲ್ಲಿ ಅದರಲ್ಲೂ 3ಡಿ ತಂತ್ರಜ್ಞಾನದಲ್ಲಿ ತಂದಿರುವುದು ಭಾರತೀಯ ಚಿತ್ರ ರಂಗಕ್ಕೆ ಕನ್ನಡ ನಾಡಿನ ಕೊಡುಗೆ ಅಂತಾ ಹೇಳಬಹುದು.

ಪೌರಾಣಿಕ ಕಥಾ ವಸ್ತು ಆಯ್ಕೆ ಮಾಡಿಕೊಂಡ ಮೇಲೆ ಅದಕ್ಕೆ ತಕ್ಕುದಾದ ಪಾತ್ರ ಪೋಷಣೆ ಬಹಳ ಅತ್ಯಗತ್ಯ. ಅದೇ ಈ ಚಿತ್ರದಲ್ಲಿ ಆಗದೆ ಇರುವ ವಿಚಾರ. ದುರ್ಯೋಧನ, ಭೀಮ, ಶಕುನಿ, ಕರ್ಣ, ದ್ರೋಣಾಚಾರ್ಯ, ಧರ್ಮರಾಯ, ಅಭಿಮನ್ಯು ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸರಿಯಾಗಿದ್ದು ಬಿಟ್ಟರೆ ಮಿಕ್ಕ ಪಾತ್ರಗಳ ನಟರುಗಳು ಹೊಂದಾಣಿಕೆ ಆಗುವುದೇ ಇಲ್ಲ. ಆದರೆ ತಂತ್ರಗಾರಿಕೆ ಭೇಷ್​ ಅನ್ನಲೆ ಬೇಕು.

ಸುಯೋಧನ (ದರ್ಶನ್) ಆಧರಿಸಿ ಇಲ್ಲಿ ಎಲ್ಲವೂ ಹೇಳಲಾಗಿದೆ. ಆತನ ಆಟ್ಟಹಾಸ, ಪರಾಕ್ರಮ, ಶತಗಜ ಶಕ್ತಿ ಕೊಂಡಾಡುವಿಕೆ ಹೆಚ್ಚು ಆಗಿದೆ. ಈ ಪಾತ್ರವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಯ ವಾಚಾ ಮನಸಾ ನಿಭಾಯಿಸಿದ್ದಾರೆ. ಇನ್ಮುಂದೆ ಇಂತಹುದೇ ಗಟ್ಟಿಯಾದ ಪಾತ್ರಗಳು ಅವರು ಆಯ್ಕೆ ಮಾಡಿಕೊಂಡು ಗೆಲ್ಲಬಹುದು.

ಕೌರವರು ಹಾಗೂ ಪಾಂಡವರ ಸಭೆಯೊಂದಿಗೆ ‘ಮುನಿರತ್ನ ಕುರುಕ್ಷೇತ್ರ’ ಪಿತಾಮಹ ಭೀಷ್ಮ ಅವರಿಂದ ಪ್ರಾರಂಭವಾಗುತ್ತೆ. ಅಲ್ಲಿಂದ ಕರ್ಣನ ಆಗಮನ ಸಹ ಆಗುತ್ತದೆ. ಆಪ್ತ ಸ್ನೇಹಿತ ಆಗಿ ಒಂದು ರಾಜ್ಯವನ್ನೂ ಸಹ ದುರ್ಯೋಧನ ಅವನಿಗೆ ಕೊಟ್ಟು ತನ್ನ ಪಕ್ಕಕ್ಕೆ ಕೂರಿಸಿಕೊಳ್ಳುತ್ತಾನೆ. ಇದೆ ಸಭೆಯಲ್ಲಿ ಭೀಷ್ಮ ಹೇಳಿದ ಮಾತು ಧರ್ಮರಾಯ ರಾಜನಾಗಬೇಕು ಎಂಬುದನ್ನು ದುರ್ಯೋಧನ ಒಪ್ಪುವುದಿಲ್ಲ.

ಕುರುಕ್ಷೇತ್ರ ಸಿನಿಮಾ ದುರ್ಯೋಧನನಿಗೆ ಅವಮಾನ, ಶಕುನಿಯ ಆಗಮನ, ಸಭೆಯಲ್ಲಿ ದ್ರೌಪದಿಯ ಮಾನಭಂಗ, ಶ್ರೀ ಕೃಷ್ಣನ ಆಗಮನ, ಆಮೇಲೆ ಪಾಂಡವರಿಗೆ 13 ವರ್ಷಗಳ ವನವಾಸ, ನಂತರ ಕುರುಕ್ಷೇತ್ರ ಯುದ್ಧ ಭೂಮಿ, ದುರ್ಯೋಧನ ಹಾಗೂ ಭೀಮನ ಗದಾ ಯುದ್ದ, ಅಂತ್ಯದಲ್ಲಿ ಕರ್ಣ ಹೋದ ಸ್ವರ್ಗ ಲೋಕಕ್ಕೆ ದುರ್ಯೋಧನ ಸಹ ಹೋಗುವುದರೊಂದಿಗೆ ಚಿತ್ರ ಅಂತ್ಯಗೊಳ್ಳುತ್ತದೆ.

ಈಗಿನ ಕಾಲದ ಯುವಕರಿಗೆ ಮಹಾಭಾರತದ ಅರಿವು ಇಲ್ಲದೆ ಇದ್ದರೆ ಇಂತಹ ಚಿತ್ರಗಳನ್ನು ತಪ್ಪದೆ ನೋಡಬಹುದು. ಇಲ್ಲಿ ಯುವಕರಿಗೆ ಬೇಕಾದ ತಂತ್ರಜ್ಞಾನವಿದೆ ಜೊತೆಗೆ ನಿರೂಪಣೆಯನ್ನು ಸಹ ನಿರ್ದೇಶಕ ನಾಗಣ್ಣ ಅಚ್ಚುಕಟ್ಟಾಗಿ ತೋರಿಸಿದ್ದಾರೆ.

ಡಿ ಬಾಸ್ ದರ್ಶನ್ ಅಭಿನಯ ಈ ಚಿತ್ರದ ಪ್ರಮುಖ ಅಂಶ. ಅವರ ವೇಷ ಭೂಷಣ, ನಡಿಗೆ, ಮೀಸೆ ಮೇಲೆ ಕೈ ತಿರುವುವ ಸ್ಟೈಲ್, ಅಬ್ಬರದ ಮಾತುಗಳು, ಗಹಗಹಿಸಿ ನಗುವುದು – ಅಲ್ಲಲ್ಲಿ ಅವರ ತಂದೆ ಶ್ರೀ ತೂಗುದೀಪ ಶ್ರೀನಿವಾಸ್ ಜ್ಞಾಪಿಸುತ್ತಾರೆ.

ಆನಂತರ ಕರ್ಣನಾಗಿ ಅರ್ಜುನ್ ಸರ್ಜಾ, ಶಕುನಿ ಆಗಿ ರವಿಶಂಕರ್,ದ್ರೋಣಾಚಾರ್ಯ ಆಗಿ ಜೆ.ಕೆ ಶ್ರೀನಿವಾಸಮೂರ್ತಿ , ಭೀಷ್ಮನಾಗಿ ಡಾ.ಅಂಬರೀಶ್, ದ್ರೌಪದಿ ಆಗಿ ಸ್ನೇಹ ಅಭಿನಯ ಮೆಚ್ಚಬಹುದು. ಅಭಿಮನ್ಯು ಆಗಿ ನಿಖಿಲ್ ಕುಮಾರಸ್ವಾಮಿ ಅಭಿನಯದಲ್ಲಿ ಮಿಂಚಿದರೆ ಸಂಭಾಷಣೆಯಲ್ಲಿ ಸೊರಗಿದ್ದಾರೆ. ಮೇಘನಾ ರಾಜ್ ಹಾಗೂ ಹರಿಪ್ರಿಯಾ ಅವರಿಗೆ ಒಂದು ಹಾಡಿಗಷ್ಟೇ ಸೀಮಿತ.

ಕುರುಕ್ಷೇತ್ರ ಚಿತ್ರ ಕಲಾ ನಿರ್ದೇಶಕನಿಗೆ ಸೆಲ್ಯೂಟ್ ಹೇಳಬೇಕು. ಅಂತಹ ವೈಭವದ ಸೆಟ್ಟುಗಳನ್ನು ನಿರ್ಮಾಣ ಮಾಡುವುದು ಸುಲಭದ ಮಾತಲ್ಲ. ವಿ.ಹರಿಕೃಷ್ಣ ಅವರ ನಾಲ್ಕು ಹಾಡುಗಳು ಸೊಗಸಾಗಿದೆ, ಹಾಗೆಯೇ ಹಿನ್ನೆಲೆ ಸಂಗೀತ ಸಹ ಚನ್ನಾಗಿ ಕೂಡಿಕೊಂಡಿದೆ.

ಛಾಯಾಗ್ರಾಹಕ ಅಜಯನ್ ವಿನ್ಸೆಂಟ್ ಭೇಷ್​ ಅನ್ನುವ ಹಾಗೆ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. ಹೇಗೆ ಪಾತ್ರಗಳು 2 ಡಿ ಹಾಗೂ 3 ಡಿ ಹೊಂದುವಂತೆ ಅಭಿನಯ ಮಾಡಬೇಕೋ ಹಾಗೆ ಇವರು ಸಹ ಎರಡೆರಡು ಭಾರಿ ದೃಶ್ಯಗಳನ್ನು ಸೆರೆ ಹಿಡಿಯಬೇಕು. ಸಂಕಲನಕಾರ ಜೋನಿ ಹರ್ಷ ಅವರ ತಾಕತ್ತು ಸಹ ಈ ಸಿನಿಮಾ ಇಂದ ಅದ್ಭುತವಾಗಿ ಹೊರ ಹೊಮ್ಮಿದೆ.

ABOUT THE AUTHOR

...view details