ಕ್ರೂರ ವಿಧಿಯ ಆಟದೆದುರು ವಯಸ್ಸು, ವರ್ಚಸ್ಸು ಲೆಕ್ಕಕ್ಕಿಲ್ಲ. ಬಾಳ ಪಯಣದ ಕೊನೆಯೆಂದು ಅರಿಯದೇ ಸಾಗುವ ಈ ಜೀವನದ ಅಂತಿಮ ನಿಲ್ದಾಣ ಯಾವುದೆಂಬುದು ಯಾರಿಗೂ ತಿಳಿದಿಲ್ಲ. ನಿನ್ನೆಯಿದ್ದವರು ಇಂದಿಲ್ಲ, ಇಂದು ಇದ್ದವರು ನಾಳೆಯಿಲ್ಲ. ಉಸಿರಾಡುವ ತನಕ ಮಾತ್ರ ನಮ್ಮವರು-ತಮ್ಮವರು. ಹುಟ್ಟಿದ ಪ್ರತಿಯೊಬ್ಬರು ಒಂದಲ್ಲೊಂದು ದಿನ ಜೀವನದ ಅಧ್ಯಾಯಕ್ಕೆ ವಿದಾಯ ಹೇಳಲೇಬೇಕು. ಆದರೆ, ಕೆಲವೊಂದು ವಿದಾಯಗಳು ಮನಸ್ಸಿನಲ್ಲಿ ಕತ್ತಲೆಯ ಛಾಯೆಯನ್ನು ಆವರಿಸುವಂತೆ ಮಾಡುತ್ತವೆ. ಅದೇ ಅಪ್ಪು ಕರುನಾಡಿಗೆ ಹೇಳಿದ ವಿದಾಯ.
ಮೊನ್ನೆಯಷ್ಟೇ ನಕ್ಕು-ನಲಿದೆ, ಹಾಡಿ-ಕುಣಿದ ಕರುನಾಡ 'ಯುವರತ್ನ' ಇಂದು ನಮ್ಮೊಂದಿಗಿಲ್ಲ. ಎಲ್ಲರನ್ನೂ ಸಂತಸ ಪಡಿಸುತ್ತಿದ್ದ ಆ ಹೃದಯ ನಿನ್ನೆ ತನ್ನ ಬಡಿತ ನಿಲ್ಲಿಸಿದೆ. ಕೋಟ್ಯಂತರ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.
ಸಿನಿರಂಗ ಕಂಬನಿ ಇಡುತ್ತಿದೆ. ಕುಟುಂಬದವರಲ್ಲಿ ದುಃಖ ಮಡುಗಟ್ಟಿದೆ. ಬಾಲ್ಯದಿಂದಲೂ ತನ್ನ ಕಲೆಯಿಂದಲೇ ಗುರುತಿಸಿಕೊಂಡಿದ್ದ ಅಪ್ಪು ಅಗಲಿಕೆಗೆ ಖ್ಯಾತ ಸಾಹಿತಿ, ನಿರ್ದೇಶಕ ಯೋಗರಾಜ್ ಭಟ್ಟರು ಗೀತ ನಮನ ಸಲ್ಲಿಸಿದ್ದಾರೆ.
"ಉಸಿರು ಪೂರ್ತಿ ಹೋದರು, ಹೆಸರು ಪೂರ್ತಿ ನೆನಪಿದೆ. ನೀನು ಇರದೆ ಹೋದರು, ನಿನ್ನ ನಗೆಯ ಬೆಳಕಿದೆ. ಮನೆಯ ಮುದ್ದು ಕೂಸಿಗೆ ನಾಡ ನಮನ.. ಖಂಡಿತ ಮರಣವಿದಲ್ಲ ಜನಿಸಿದೆ ನೀನಿಂದು. ನಮ್ಮೊಲವಿನ ಪರಮಾತ್ಮ ಶಾಶ್ವತ ನೀನೆಂದು.. ಉಸಿರು ಮಾತ್ರ ಹೋಗಿದೆ, ಹೆಸರು ಪೂರ್ತಿ ನೆನಪಿದೆ. ಬಾಳ ಪಯಣ ಮುಗಿದರೂ, ಸ್ಮೃತಿ ಪಯನ ಮುಗಿವುದೇ? ಬೆಳ್ಳಿ ಪರದೆ ಚುಕ್ಕಿಗೆ ನಲ್ಮೆ ನಮನ.." ಎಂದು ಅಪ್ಪುವಿನ ಆ ಮಗುವಿನ ನಗು, ಕೋಮಲ ಹೃದಯದ ಬಗ್ಗೆ ಬರೆದಿರುವ ಭಟ್ಟರು ಗಾನ ನಮನ ಸಲ್ಲಿಸಿದ್ದಾರೆ.
ಓದಿ:BBC News (World)ನಲ್ಲಿ ಕನ್ನಡದ 'ಯುವರತ್ನ'ನ ಅಗಲಿಕೆಯ ಸುದ್ದಿ ಪ್ರಸಾರ..