ಕೇಂದ್ರ ಸರ್ಕಾರ 2017 ರಲ್ಲಿ ಹೊರ ತಂದಿರುವ ‘ತ್ರಿವಳಿ ತಲಾಕ್’ ಕಾಯ್ದೆ ಬಗ್ಗೆ ಕನ್ನಡದಲ್ಲಿ ಹಿರಿಯ ನಿರ್ದೇಶಕ ವೈದ್ಯನಾಥನ್ , ತಮ್ಮ ಸುಚೇತನ ಎಂಟರ್ಪ್ರೈಸಸ್ ಸಂಸ್ಥೆ ಅಡಿಯಲ್ಲಿ ‘ತಲಾಕ್ ತಲಾಕ್ ತಲಾಕ್’ ಎಂಬ ಕನ್ನಡ ಸಿನಿಮಾವನ್ನು ತಯಾರಿಸಿದ್ದಾರೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಕೂಡಾ ಈ ಚಿತ್ರಕ್ಕೆ ಯು/ಎ ಅರ್ಹತಾ ಪತ್ರ ನೀಡಿದೆ.
ಅನುಭವಿ ನಿರ್ದೇಶಕ ವೈದ್ಯನಾಥನ್ ಸುಮಾರು 20 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ದೇವರಾಜ್ ಅಭಿನಯದ 'ದಂಡನಾಯಕ' ಸಿನಿಮಾ ನಂತರ ಇವರು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅನೇ ಸಿನಿಮಾಗಳಿಗೆ ಕಥೆ ಹಾಗೂ ಚಿತ್ರಕಥೆ ಕೂಡಾ ಬರೆದಿದ್ದಾರೆ. ಈ ಚಿತ್ರಕ್ಕೆ ವೈದ್ಯನಾಥನ್ ಅವರೇ ನಿರ್ದೇಶಕ ಕೂಡಾ ಆಗಿದ್ದು ಪತ್ನಿ ,ನಿವೃತ್ತ ಶಿಕ್ಷಕಿ ಸುಭಾಷಿಣಿ ಕೂಡಾ ಪತಿಯ ಸಿನಿಮಾ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ‘ತಲಾಕ್ ತಲಾಕ್ ತಲಾಕ್’ ಚಿತ್ರದಲ್ಲಿ ವೈದ್ಯನಾಥನ್ ಮಕ್ಕಳಾದ ಸುಚೇತನ್ ಸ್ವರೂಪ್ ವೈದ್ಯ ಮತ್ತು ಶಮಂತ್ ವೈದ್ಯ ನಟಿಸಿದ್ದಾರೆ. ಚಿತ್ರದಲ್ಲಿ ರಿಷಿ ತಂಗಿ ಹಾಗೂ ಖ್ಯಾತ ಆರ್ಜೆ ನೇತ್ರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಹಿರಿಯ ನಟ ಶ್ರೀನಿವಾಸಮೂರ್ತಿ, ವೀಣಾ ಸುಂದರ್, ರವಿ ಭಟ್, ಇಂತಿಯಾಜ್ ಹಾಗೂ ಇತರರು ನಟಿಸಿದ್ದಾರೆ.