ಕರ್ನಾಟಕ

karnataka

ETV Bharat / sitara

ಇಂದು ನಟಭಯಂಕರ, ಪುಟ್ಮಲ್ಲಿ ಹುಟ್ಟಿದ ದಿನ: ಮೆಚ್ಚಿನ ನಟರಿಗೆ ಅಭಿಮಾನಿಗಳ ಶುಭಾಶಯ - undefined

ಇಂದು ಸ್ಯಾಂಡಲ್​ವುಡ್​​ನ ಎರಡು ಮೇರು ಪ್ರತಿಭೆಗಳ ಜನ್ಮ ದಿನ. ಅಭಿಮಾನಿಗಳಿಂದ ನಟಭಯಂಕರ ಎಂದೇ ಬಿರುದು ಪಡೆದ ವಜ್ರಮುನಿ ಹಾಗೂ ಪುಟ್ಮಲ್ಲಿ ಎಂದೇ ಕರೆಯಲ್ಪಡುವ ಹಿರಿಯ ನಟಿ ಉಮಾಶ್ರೀ ಜನ್ಮ ದಿನ ಇಂದು.

ವಜ್ರಮುನಿ, ಉಮಾಶ್ರೀ

By

Published : May 10, 2019, 7:18 PM IST

ವಜ್ರಮುನಿ

1944 ಮೇ 11 ರಂದು ಬೆಂಗಳೂರಿನಲ್ಲಿ ಜನಿಸಿದ ವಜ್ರಮುನಿ ಮೊದಲ ಹೆಸರು ಸದಾನಂದ ಸಾಗರ್​. ಅವರ ಕುಟುಂಬದ ಸದಸ್ಯರು ವಜ್ರಮುನೇಶ್ವರ ದೇವರನ್ನು ಹೆಚ್ಚು ಆರಾಧಿಸುತ್ತಿದ್ದರಿಂದ ನಂತರ ಅವರಿಗೆ ವಜ್ರಮುನಿ ಎಂಬ ಹೆಸರಿಡಲಾಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್​ಇ ಪದವಿ ಮುಗಿಸಿದ ವಜ್ರಮುನಿ ಕಲೆಯಲ್ಲಿ ಆಸಕ್ತಿ ಇದ್ದ ಕಾರಣ ಆ್ಯಕ್ಟಿಂಗ್ ಕಲಿಯಲು ನೀನಾಸಂ ಸಂಸ್ಥೆ ಸೇರಿದರು. ನೀನಾಸಂನಲ್ಲಿ ಕಲಿಯುವಾಗಲೇ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರ 'ಪ್ರಚಂಡ ರಾವಣ' ನಾಟಕದಲ್ಲಿ ರಾವಣನ ಪಾತ್ರ ಮಾಡಿ ಎಲ್ಲರ ಮನಗೆದ್ದರು. ಮುಖ್ಯವಾಗಿ ಅವರ ಅಭಿನಯ ಪುಟ್ಟಣ್ಣ ಕಣಗಾಲ್ ಅವರನ್ನು ಸೆಳೆಯಿತು. ವಜ್ರಮುನಿ ಅವರಿಗೆ ಪುಟ್ಟಣ್ಣ 'ಸಾವಿರ ಮೆಟ್ಟಿಲು' ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಆದರೆ ಆ ಸಿನಿಮಾ ಬಿಡುಗಡೆಯಾಗಲೇ ಇಲ್ಲ.

'ಮಲ್ಲಮ್ಮನ ಪವಾಡ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ವಜ್ರಮುನಿ ಬಂಗಾರದ ಮನುಷ್ಯ, ದಾರಿ ತಪ್ಪಿದ ಮಗ, ಹುಲಿಯ ಹಾಲಿನ ಮೇವು, ಅಂತ, ಸಿಬಿಐ ಶಂಕರ್​, ಸಂಪತ್ತಿಗೆ ಸವಾಲ್, ಒಡಹುಟ್ಟಿದವರು ಸೇರಿದಂತೆ ಸುಮಾರು 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟನಾಗಿ ಅಭಿನಯಿಸಿದ್ದಾರೆ. ತೆರೆ ಮೇಲೆ ಖಡಕ್ ಆಗಿ ಅಭಿನಯಿಸುತ್ತಿದ್ದ ನಟ ವಜ್ರಮುನಿ ನಿಜ ಜೀವನದಲ್ಲಿ ಬಹಳ ಮೃದು ಸ್ವಭಾವದವರು. ಒಂದು ಕಾಲದಲ್ಲಿ ತೆರೆಯ ಮೇಲೆ ಅಬ್ಬರಿಸಿದ ನಟನಿಗೆ ಎರಡೂ ಕಿಡ್ನಿಗಳೂ ಫೇಲ್ ಆಗಿ ಅನಾರೋಗ್ಯದಿಂದ ಬಳಲುವಂತಾಯಿತು. 2006 ಜನವರಿ 5 ರಂದು ವಜ್ರಮುನಿ ಅಲಿಯಾಸ್ ಸದಾನಂದ ಸಾಗರ್​​​​ ನಮ್ಮನ್ನೆಲ್ಲಾ ಬಿಟ್ಟು ಅಗಲಿದರು. ವಜ್ರಮುನಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಅಭಿನಯದ ಸಿನಿಮಾಗಳು ಅಭಿಮಾನಿಗಳ ಮನಸ್ಸಿನಲ್ಲಿ ಎಂದಿಗೂ ಚಿರಾಯು.

ಉಮಾಶ್ರೀ

ಪುಟ್ಮಲ್ಲಿ ಎಂದೇ ಖ್ಯಾತರಾದ ನಟಿ ಉಮಾಶ್ರೀ 1957 ಮೇ 10 ರಂದು ತುಮಕೂರಿನಲ್ಲಿ ಜನಿಸಿದರು. ಸಿನಿಮಾ ನಟನೆ ಮಾತ್ರವಲ್ಲ ರಾಜಕೀಯದಲ್ಲೂ ತಮ್ಮ ಹೆಜ್ಜೆ ಗುರುತು ಮೂಡಿಸಿದ ಉಮಾಶ್ರೀ ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ.

ಚಿಕ್ಕಂದಿನಿಂದಲೇ ಕಲೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಉಮಾಶ್ರೀ ಸಾಕಷ್ಟು ಏಳು-ಬೀಳುಗಳನ್ನು ಕಂಡವರು. ನಾಟಕಗಳಲ್ಲಿ ಅಭಿನಯಿಸುತ್ತಾ ಒಂದು ಪುಟ್ಟಮನೆಯಲ್ಲಿ ಬದುಕು ಸಾಗಿಸಿದ ಉಮಾಶ್ರೀ ವೈಯಕ್ತಿಕ ಜೀವನದಲ್ಲಿ ಕೂಡಾ ಸೋಲು ಕಂಡವರು. ನಾಟಕದ ಜೊತೆ ಇಡ್ಲಿ ಮಾರಿ ಜೀವನ ಸಾಗಿಸುತ್ತಿದ್ದ ಉಮಾಶ್ರೀ ಮದುವೆ ನಂತರ ಕೂಡಾ ತಮ್ಮ ಮಕ್ಕಳನ್ನು ಬಹಳ ಕಷ್ಟಪಟ್ಟು ಮುಂದೆ ತಂದವರು. 1984 ರಲ್ಲಿ 'ಅನುಭವ' ಚಿತ್ರದ ಮೂಲಕ ಸಿನಿ ಕೆರಿಯರ್ ಆರಂಭಿಸಿದ ಉಮಾಶ್ರೀ ಸ್ವಾಭಿಮಾನ, ಜಯಸಿಂಹ , ಒಲವಿನ ಉಡುಗೊರೆ, ಶ್ರೀರಾಮಚಂದ್ರ, ಕಲಾವಿದ, ಪುಟ್ಮಲ್ಲಿ, ದಿಗ್ಗಜರು, ಕಲ್ಪನ, ಸಂಗೊಳ್ಳಿ ರಾಯಣ್ಣ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಯಾವ ಕನ್ನಡಿಗ ಕೂಡಾ ಮರೆಯಲಾರದಂತ ವಜ್ರಮುನಿ ಹಾಗೂ ಉಮಾಶ್ರೀಗೆ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಿದ್ದಾರೆ.

For All Latest Updates

TAGGED:

ABOUT THE AUTHOR

...view details