ಕಲರ್ಸ್ ಸೂಪರ್ ವಾಹಿನಿಯಲ್ಲಿ, ಟಿ ಎನ್ ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿಯಲ್ಲಿ ಶ್ಯಾಮಲತ್ತೆ ಮಗ ಶ್ಯಾಮಸುಂದರ ಆಗಿ ಅಭಿನಯಿಸಿದ್ದ ಶ್ರೀರಾಮ್ ಇದೀಗ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ಹೂಮಳೆ ಧಾರಾವಾಹಿಯಲ್ಲಿ ಕಾರ್ಪೋರೇಟರ್ ಕಾವೇರಿ ಮಗ, ನಾಯಕಿ ಲಹರಿಯ ಅಣ್ಣ ಉದಯ ಆಗಿ ಶ್ರೀರಾಮ್ ಅಭಿನಯಿಸುತ್ತಿದ್ದಾರೆ.
ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀರಾಮ್ ಆಯ್ದುಕೊಂಡಿದ್ದು ನಟನಾ ಕ್ಷೇತ್ರವನ್ನು! ರಾಧಾ ರಮಣ ಧಾರಾವಾಹಿಯಲ್ಲಿ ನಾಯಕ ರಮಣನ ಬೆಸ್ಟ್ ಪ್ರೆಂಡ್ ಸುಮೇಧ್ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಶ್ರೀರಾಮ್ ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾದವರು. ಮಾತ್ರವಲ್ಲ ಸುಮೇಧ್ ಆಗಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು.
ಮುಂದೆ ಮಗಳು ಜಾನಕಿ ಧಾರಾವಾಹಿಯಲ್ಲಿ ಶ್ಯಾಮಲತ್ತೆ ಮಗ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದ ಶ್ರೀರಾಮ್ಗೆ ಶ್ಯಾಮಸುಂದರನ ಪಾತ್ರವೂ ಸಾಕಷ್ಟು ಹೆಸರು ತಂದುಕೊಟ್ಟಿತ್ತು. "ಟಿ ಎನ್ ಸೀತಾರಾಮ್ ಅವರು ಒಬ್ಬ ಜನಪ್ರಿಯ ನಿರ್ದೇಶಕ. ಅವರ ಜೊತೆ ಕೆಲಸ ಮಾಡಿರುವುದಕ್ಕೆ ನಿಜಕ್ಕೂ ಸಂತಸವಿದೆ" ಎಂದು ನಗುತ್ತಾ ಹೇಳುವ ಶ್ರೀರಾಮ್ ಈಗಾಗಲೇ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ.
ದಿ ಪ್ಲ್ಯಾನ್ ಅನ್ನುವ ಸಿನಿಮಾದಲ್ಲಿ ಅನಂತ್ ನಾಗ್ ಅವರೊಂದಿಗೆ ತೆರೆ ಹಂಚಿಕೊಂಡಿರುವ ಶ್ರೀರಾಮ್ ದರ್ಪಣ ಸಿನಿಮಾದಲ್ಲಿ ಖಳನಾಯಕರಾಗಿ ಮಿಂಚಿದ್ದಾರೆ. ಇದರ ಜೊತೆಗೆ ಗಿಮಿಕ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸ್ನೇಹಿತನಾಗಿ ಬಣ್ಣ ಹಚ್ಚಿರುವ ಇವರು ರಿಪ್ಪರ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಮಾತ್ರವಲ್ಲ ಪೆಟ್ಕಮ್ಮಿ ಎನ್ನುವ ಚಿತ್ರದಲ್ಲಿ ನಾಯಕರಾಗಿ ಬಣ್ಣ ಹಚ್ಚಿರುವ ಶ್ರೀರಾಮ್ ಸದ್ಯ ಕಿರುತೆರೆಯಲ್ಲಿ ಬ್ಯುಸಿ.