ಬಾಗಲಕೋಟೆ :ಶ್ರೀ ಅಂಜನಾದ್ರಿ ಸಿನಿ ಪ್ರೊಡಕ್ಷನ್ ಗಂಗಾವತಿ/ಬೆಂಗಳೂರು ಅವರ ಲಿಂಗಸಗೂರು ತಾಲೂಕಿನ ಸುಕ್ಷೇತ್ರ ಅಂಕಲಿಮಠದ ನಿರುಪಾದೀಶ್ವರ ಶರಣರ ಜೀವನ ಚರಿತ್ರೆ ಆಧಾರಿತ ಭಾವೈಕ್ಯ ಬ್ರಹ್ಮ ಚಲನಚಿತ್ರ ಚಿತ್ರೀಕರಣದ ಎರಡನೇ ಹಂತದ ಚಿತ್ರೀಕರಣ ಬಾಗಲಕೋಟೆಯ ಸುತ್ತಮುತ್ತಲು ನಡೆದು ಮುಕ್ತಾಯಗೊಂಡಿತು.
ಮಾಸ್ಟರ್ ಆನಂದ್, ನಯನ ಅಭಿನಯದ ಭಾವೈಕ್ಯಬ್ರಹ್ಮ 2ನೇ ಹಂತದ ಚಿತ್ರೀಕರಣ ಮುಕ್ತಾಯ.. ಮಾ. ಆನಂದ, ಸಿದ್ಧನಕೊಳ್ಳದ ಡಾ. ಶಿವಕುಮಾರ ಸ್ವಾಮಿಗಳು ಅಭಿನಯದಲ್ಲಿ ದರುಶನ ನೀಡಬನ್ನಿ ಕಾದಿಹೆ ಬಾಗಿಲಲಿ- ಎಂಬ ಹಾಡನ್ನು ಸಿದ್ಧನಕೊಳ್ಳದ ಸಿದ್ಧೇಶ್ವರ ಮಠ ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆಯಲ್ಲದೆ, ಮುಗಿಲೇರಿ ಕುಣಿವಾ ಬನ್ನಿ ಸಂಕೋಚ ಏತಕೆ.. ಎನ್ನುವ ಹಾಡಿನ ಚಿತ್ರೀಕರಣವನ್ನು ನಯನಾ ಅಭಿನಯದಲ್ಲಿ ಕೆಲೂರ, ಐಹೊಳೆ, ಗುಳೇದಗುಡ್ಡ ಸುತ್ತಮುತ್ತ ಚಿತ್ರೀಕರಿಸಲಾಯಿತು. ಜೊತೆಗೆ ಹಲವಷ್ಟು ಹುಬ್ಬಳ್ಳಿಯ ನಯನಾ, ಮಾ.ಆನಂದ ಅವರ ಸನ್ನಿವೇಶಗಳ ಚಿತ್ರೀಕರಣ ಮಾಡಲಾಯಿತು. ಇನ್ನೂ ಎರಡು ಹಾಡುಗಳು ಬಾಕಿ ಇವೆ. ಲಿಂಗಸಗೂರು ತಾಲೂಕಿನ ಮುದಗಲ್, ಜಲದುರ್ಗ, ಬಾಗಲಕೋಟ ಜಿಲ್ಲೆಯ ಸಿದ್ಧನಕೊಳ್ಳ, ಕೆಲೂರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ ಶೇ 70 ರಷ್ಟು ಚಿತ್ರೀಕರಣ ಮುಗಿಸಲಾಗಿದೆ.
ಅಂತಿಮ ಹಂತದ ಚಿತ್ರೀಕರಣ ಇದೇ ತಿಂಗಳಲ್ಲಿ ಆರಂಭವಾಗಲಿದ್ದು ಬಾಗಲಕೋಟ ಜಿಲ್ಲೆಯ ಕೆಲವು ಪ್ರಮುಖ ಸ್ಥಳ, ರಾಯಚೂರು, ಗಂಗಾವತಿ, ಕೊಪ್ಪಳ, ಬೆಂಗಳೂರು, ಬೆಳಗಾವಿ ಜಿಲ್ಲೆ ಅಂಕಲಗಿಮಠ ಸುತ್ತಮುತ್ತಲ ನಡೆಯಲಿದ್ದು ನಿರುಪಾಧೀಶ್ವರರ ಮಹಿಮೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಮಾ. ಆನಂದ ನಿರುಪಾಧೀಶ್ವರರಾಗಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ಮಾಪಕ, ನಿರ್ದೇಶಕ ವಿಜಯಕುಮಾರ ಗದ್ದಿ ತಿಳಿಸಿದ್ದಾರೆ.
ಲಿಂಗಸಗೂರು ತಾಲೂಕಿನ ಅಮರೇಶ್ವರ ರಂಗಭೂಮಿಯ ಕಲಾವಿದರ ಸಂಘದ ಅಧ್ಯಕ್ಷರಾದ ನಿರುಪಾದಿ ಕವಿಗಳು ಕತೆ ಸಂಭಾಷಣೆ, ಸಂಗೀತ ಯುವ ನಿರ್ದೇಶಕ ಅನುರಾಗ ಗದ್ದಿ, ಸಾಹಿತ್ಯ ಕೆ.ಕಲ್ಯಾಣ, ಡಾ.ವಿ.ನಾಗೇಂದ್ರಪ್ರಸಾದ, ವಿಜಯಕುಮಾರ ಗದ್ದಿ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ತಾಂತ್ರಿಕ ವರ್ಗದಲ್ಲಿ ಶಿವಶರಣ ಸುಗ್ನಳ್ಳಿ, ರಂಜಿತ್ ತಿಗಡಿ, ಗೋವಿಂದರಾಜ್, ಮದನ ಹರಣಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ ಅವರದಿದೆ. ಮಾಸ್ಟರ್ ಆನಂದ ನಿರುಪಾದೀಶ್ವರರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿದ್ಧನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮಿಗಳು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಮಿಡಿ ಕಿಲಾಡಿ ಖ್ಯಾತಿಯ ನಯನ, ವಾಣಿಶ್ರೀ, ಜ್ಯೋತಿ ಮುರೂರ, ಅಪೂರ್ವ, ಮಹಾಂತೇಶ ಹಳ್ಳೂರ, ಅಂಜನಪ್ಪ, ಪ್ರಮುಖ ಚಲನಚಿತ್ರ ಕಲಾವಿದರ ಜೊತೆಗೆ ಉತ್ತರ ಕರ್ನಾಟಕದ ಕಲಾವಿದರು ಅಭಿನಯಿಸುತ್ತಿದ್ದಾರೆ.