ಕರ್ನಾಟಕ

karnataka

By

Published : Jun 23, 2021, 9:17 AM IST

ETV Bharat / sitara

ಸಂಚಾರಿ ವಿಜಯ್​ಗೆ ಅಂಥ ಯಾವುದೇ ಸಮಸ್ಯೆಗಳಿರಲಿಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಆಪ್ತರು

ಸಂಚಾರಿ ವಿಜಯ್​ ಮರಣಾನಂತರ ಸದ್ಯ ಹಲವಾರು ಊಹಾಪೋಹಗಳು ಅವರನ್ನು ಎಳೆದಾಡುತ್ತಿವೆ. ಇದೀಗ ಅವರ ಆಪ್ತ ವಲಯಗಳು ಅವನ್ನೆಲ್ಲಾ ಸುಳ್ಳು ಎಂದಿದ್ದು, ಅಂತಹ ಸುದ್ದಿಗಳಿಗೆ ಕಿವಿಗೊಟ್ಟು, ಪ್ರಚಾರ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.

Sanchari Vijay
ಸಂಚಾರಿ ವಿಜಯ್

ಸಂಚಾರಿ ವಿಜಯ್ ಬದುಕಿರುವವರೆಗೂ ಅದ್ಯಾವ ವಿಷಯಗಳೂ ಇರಲಿಲ್ಲ. ಆದರೆ, ಅವರು ನಿಧನರಾದ ಒಂದು ವಾರದಲ್ಲಿ ಅವರ ಕುರಿತಾಗಿ ಹಲವು ವಿಷಯಗಳು ಬೆಳಕಿಗೆ ಬಂದವು. ಸಂಚಾರಿ ವಿಜಯ್ ಜಾತಿ ಸಮಸ್ಯೆಗಳಿಂದ ಕಷ್ಟಗಳನ್ನು ಎದುರಿಸಬೇಕಾಯಿತು ಎಂಬ ಲೇಖನವೊಂದು ಬಂದರೆ, ಅದನ್ನು ಸತೀಶ್ ನೀನಾಸಂ ಅನುಮೋದಿಸಿದರು.

ಅವಕಾಶಗಳ ಅಭಾವದಿಂದ ಅವರಿಗೆ ಹಣಕಾಸಿನ ಸಮಸ್ಯೆ ಎದುರಾಗಿದ್ದರಿಂದ ಅವರು ಮದುವೆಯಾಗಿರಲಿಲ್ಲ ಎಂದು ಕೆಲವರು ಹೇಳಿದರು. ಇದೆಲ್ಲದರಿಂದ ಸಂಚಾರಿ ವಿಜಯ್ ಬಗ್ಗೆ ಜನರಲ್ಲಿ ಅನುಕಂಪ ಹೆಚ್ಚಾಗುವುದರ ಜೊತೆಗೆ, ಇನ್ನೇನೋ ಅನುಮಾನಗಳು ಮೂಡತೊಡಗಿದವು. ಆದರೆ, ಇದೆಲ್ಲವೂ ಸುಳ್ಳು ಎಂದು ವಿಜಯ್ ಆಪ್ತರು ಮತ್ತು ಬಂಧುಗಳು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ವಿಜಯ್ ಆಪ್ತರಾದ ವೀರು ಮಲ್ಲಣ್ಣ ಮತ್ತು 'ನಾನು ಅವನಲ್ಲ ಅವಳು' ನಿರ್ದೇಶಕ ಬಿ.ಎಸ್. ಲಿಂಗದೇವರು ಸುದೀರ್ಘವಾದ ಪತ್ರ ಬರೆದಿದ್ದಾರೆ. ವಿಜಯ್ ಸಹೋದರ ವಿರೂಪಾಕ್ಷ ಮಲ್ಲಿಕಾರ್ಜುನಯ್ಯ ಸಹ ವಿಡಿಯೋ ಮೂಲಕ, ವಿಜಯ್​ಗೆ ಯಾವುದೇ ಸಮಸ್ಯೆಗಳಿರಲಿಲ್ಲ, ವೃಥಾ ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ವಿಜಯ್ ತನಗೆ ಜಾತಿ ಸಮಸ್ಯೆಯಾಗಿದೆ ಎಂದು ಎಲ್ಲೂ ಹೇಳಿಲ್ಲ. ಚಿತ್ರರಂಗದಿಂದಲೂ ಅವನಿಗೆ ಯಾವುದೇ ಸಮಸ್ಯೆ ಆಗಿಲ್ಲ. ಎಲ್ಲರೂ ಅವನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಹೀಗಿರುವಾಗ ಅವನಿಗೆ ಅನ್ಯಾಯ ಅನ್ನೋದು ತಪ್ಪಾಗುತ್ತದೆ. ದಯವಿಟ್ಟು ಜಾತಿ ವಿಷಯವಾಗಿ ಯಾವುದೇ ಮೆಸೇಜ್ ಅಥವಾ ವಿಡಿಯೋ ಬಂದರೂ ಅದಕ್ಕೆ ಕಿವಿಗೊಡಬೇಡಿ ಮತ್ತು ಫಾರ್ವರ್ಡ್ ಮಾಡಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.

ಸಂಚಾರಿ ವಿಜಯ್​​ಗೆ ಅವಕಾಶಗಳ ಕೊರತೆ ಮತ್ತು ಹಣಕಾಸಿನ ಸಮಸ್ಯೆ ಇರಲಿಲ್ಲ ಎಂದು ಪ್ರತಿಪಾದಿಸಿರುವ ಅವರು, ‘ವಿಜಯ್ ನನಗೆ ಹೇಳಿಕೊಂಡಂತೆ, ಅವನಿಗೆ ಪ್ರತೀ ವಾರ ಹೊಸ ಚಿತ್ರಗಳಲ್ಲಿ ನಟಿಸುವುದಕ್ಕೆ ಮೂರ್ನಾಲ್ಕು ಆಫರ್​ಗಳು ಸಿಗುತ್ತಿದ್ದವಂತೆ. ಅವನಿಗೆ ಅವಕಾಶಗಳ ಸಮಸ್ಯೆ ಖಂಡಿತಾ ಇರಲಿಲ್ಲ. ಆದರೆ, ಅದರಲ್ಲಿ ಒಳ್ಳೆಯ ಪಾತ್ರ ಮಾಡಬೇಕು ಎಂಬುದು ಅವನ ಆಸೆ ಅಷ್ಟೇ. ಅವನು ಚೆನ್ನಾಗಿಯೇ ದುಡಿಮೆ ಮಾಡುತ್ತಿದ್ದ ಮತ್ತು ಆ ಹಣವನ್ನು ಸಮಾಜಮುಖಿ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದ. ಆ ತರಹದ ಸಮಸ್ಯೆಗಳು ಅವನಿಗೆ ಯಾವುದೂ ಇರಲಿಲ್ಲ’ ಎಂದು ಹೇಳುವು ಮೂಲಕ ಎಲ್ಲ ಊಹಾಪೋಹಗಳಿಗೆ ವಿರೂಪಾಕ್ಷ ತೆರೆ ಎಳೆದರು.

ABOUT THE AUTHOR

...view details