ಕರ್ನಾಟಕ

karnataka

ETV Bharat / sitara

ನಿಜ ಜೀವನದ ರೌಡಿಸಂ ಕಥೆ ಆಧರಿಸಿ ಯಶಸ್ವಿಯಾದ ಸಿನಿಮಾಗಳು ಇವು...! - Rowdyism Based movies in Sandalwood

90 ರ ದಶಕದಲ್ಲಿ ಕನ್ನಡ ಚಿತ್ರರಂಗದ ಟ್ರೆಂಡ್ ಸೆಟರ್​​​​​​​​ ರೌಡಿಸಂ ಸಿನಿಮಾ ಎಂದರೆ 'ಓಂ'. ಈ ಸಿನಿಮಾ ನಂತರ ಸ್ಯಾಂಡಲ್​​​​​​​​​​ವುಡ್​​​​ನಲ್ಲಿ ರೌಡಿಸಂ ಸಿನಿಮಾಗಳ ಜಮಾನ ಶುರುವಾಯ್ತು. ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಲಾಂಗ್ ಹಿಡಿಯೋ ಸ್ಟೈಲ್ ಜನರಿಗೆ ಬಹಳ ಇಷ್ಟವಾಯ್ತು.

Real Rowdyism story in Kannada film industry
ರೌಡಿಸಂ ಕಥೆ ಆಧರಿಸಿ ಯಶಸ್ವಿಯಾದ ಸಿನಿಮಾಗಳು

By

Published : Jun 22, 2020, 6:09 PM IST

ಸ್ಯಾಂಡಲ್​​ವುಡ್​ನಲ್ಲಿ ನೈಜ ಘಟನೆ ಆಧರಿಸಿ ಬಹಳಷ್ಟು ಸಿನಿಮಾಗಳು ತಯಾರಾಗಿವೆ. ಇನ್ನು ಕಾದಂಬರಿ ಹಾಗೂ ಪೌರಾಣಿಕ ಸಿನಿಮಾಗಳ ನಡುವೆ ಹೆಚ್ಚು ಸದ್ದು ಮಾಡಿದ ಚಿತ್ರಗಳು ಎಂದರೆ ನಿಜ ಜೀವನದ ಕಥೆ ಹೊಂದಿರುವ ರೌಡಿಸಂ ಸಿನಿಮಾಗಳು. ಹೀಗೆ ನೈಜ ರೌಡಿಸಂ ಘಟನೆ ಆಧರಿಸಿರುವ ಕಥೆಗಳು ಸ್ಯಾಂಡಲ್​​ವುಡ್​​​ನಲ್ಲಿ ಸೂಪರ್ ಹಿಟ್ ಚಿತ್ರಗಳಾಗಿವೆ. ಅಂತಹ ಚಿತ್ರಗಳ ರೋಚಕ ಕಹಾನಿ ಇಲ್ಲಿದೆ ನೋಡಿ.

ಓಂ

ಶಿವರಾಜ್ ಕುಮಾರ್ ಅಭಿನಯದ 'ಓಂ', ರೌಡಿಸಂ ಜೊತೆಗೆ ಮುದ್ದಾದ ಲವ್ ಸ್ಟೋರಿ ಕಥೆ ಹೊಂದಿದ್ದ ಚಿತ್ರ. ನಿರ್ದೇಶಕ ಉಪೇಂದ್ರ ಕೆಲವು ಪತ್ರಿಕೆಗಳಲ್ಲಿ ಬಂದ ನೈಜ ಘಟನೆಗಳ ಜೊತೆಗೆ ನಿಜವಾದ ರೌಡಿಗಳ ಕಥೆಯನ್ನು ಬೆಳ್ಳಿ ತೆರೆ ಮೇಲೆ ತೋರಿಸುವ ಮೂಲಕ ರೌಡಿಸಂ, ಶಾಶ್ವತ ಅಲ್ಲ ಎಂಬ ಜಾಗೃತಿಯನ್ನು ಮೂಡಿಸಿದ್ದರು.

ಆ ದಿನಗಳು

'ಓಂ' ನಂತರ ಕನ್ನಡ ಚಿತ್ರರಂಗದಲ್ಲಿ ಬಂದ ನೈಜ ಘಟನೆಯ ರೌಡಿಸಂ ಸಿನಿಮಾ ಅಂದ್ರೆ 'ಆ ದಿನಗಳು'. ಇದು 1986ರಲ್ಲಿ ಬೆಂಗಳೂರಿನಲ್ಲಿ ನಡೆದ ಭೂಗತ ಜಗತ್ತಿನ ರಿಯಲ್ ಸ್ಟೋರಿ ಸಿನಿಮಾ. ಅಂದಿನ ರೌಡಿಸಂ ದಿನಗಳಲ್ಲಿ ಗುರುತಿಸಿಕೊಂಡಿದ್ದ, ಬರಹಗಾರ ಅಗ್ನಿ ಶ್ರೀಧರ್ ಬರೆದಿರುವ ನೈಜ ಕಥೆಯನ್ನು ನಿರ್ದೇಶಕ ಕೆ.ಎಂ. ಚೈತನ್ಯ ನಿರ್ದೇಶನ ಮಾಡಿದ್ದರು. 'ಆ ದಿನಗಳು' ಸಿನಿಮಾ ಮೂಲಕ ಚೇತನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ಕಾಲದಲ್ಲಿ ಭೂಗತ ಜಗತ್ತಿನಲ್ಲಿ ಹಿಡಿತ ಸಾಧಿಸಿದ್ದ ಕೊತ್ವಾಲ್​​​ ರಾಮಚಂದ್ರ ಎಂಬ ರೌಡಿಯ ಕಥೆಯನ್ನು 'ಆ ದಿನಗಳು' ಸಿನಿಮಾ ಒಳಗೊಂಡಿತ್ತು. 2007 ರಲ್ಲಿ ತೆರೆ ಕಂಡ ಈ ಸಿನಿಮಾ ನೈಜ ಕಥೆ ಆಧರಿಸಿದ್ದ ಕಾರಣಕ್ಕೆ ಸಕ್ಸಸ್ ಕಂಡು ನಟ ಚೇತನ್​​​ಗೆ ಒಳ್ಳೆ ಹೆಸರು ತಂದುಕೊಡ್ತು. ಈ ಸಿನಿಮಾ ಬಳಿಕ ಚೇತನ್, ಆ ದಿನಗಳು ಹೀರೋ ಎಂದೇ ಗುರುತಿಸಿಕೊಂಡಿದ್ದಾರೆ.

ಡೆಡ್ಲಿಸೋಮ

'ಆ ದಿನಗಳು' ನಂತರ ಸ್ಯಾಂಡಲ್​ವುಡ್​​ನಲ್ಲಿ ಬಂದ ರೌಡಿಸಂ ಸಿನಿಮಾ 'ಡೆಡ್ಲಿ ಸೋಮ'. 2005ರಲ್ಲಿ ತೆರೆ ಕಂಡ 'ಡೆಡ್ಲಿ ಸೋಮ' ಕನ್ನಡ ಚಿತ್ರರಂಗದಲ್ಲಿ ಭಾರೀ ಸಕ್ಸಸ್ ಕಂಡ ಸಿನಿಮಾ. ಬರಹಗಾರ ರವಿ ಬೆಳಗೆರೆ ಈ ಕಥೆಯನ್ನು ಬರೆದರೆ ರವಿ ಶ್ರೀವತ್ಸ ಚಿತ್ರಕ್ಕೆ ಸಾರಥಿಯಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ಆದಿತ್ಯ 'ಡೆಡ್ಲಿ ಸೋಮ'ನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದು ಮಾತ್ರ ಸುಳ್ಳಲ್ಲ. ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾದ ಕಾರಣ, ನಿರ್ದೇಶಕ ರವಿ ಶ್ರೀವತ್ಸ 'ಡೆಡ್ಲಿಸೋಮ ಭಾಗ 2' ಸಿನಿಮಾ ಮಾಡಿ ಯಶಸ್ಸು ಸಾಧಿಸಿದರು.

ಸ್ಲಂ ಬಾಲ

'ಡೆಡ್ಲಿ ಸೋಮ' ಹಿಟ್ ಆದ ನಂತರ ನಂತರ ಬಂದ ಚಿತ್ರ 'ಸ್ಲಂ ಬಾಲ'. 2008ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಸುಮನಾ ಕಿತ್ತೂರು ನಿರ್ದೇಶನ ಮಾಡಿದರು. ಅಂಡರ್ ವರ್ಲ್ಡ್ ಕಥೆ ಆಧರಿಸಿದ ಕಥೆಯನ್ನು ಮಹಿಳಾ ನಿರ್ದೇಶಕಿ ಸಿನಿಮಾವಾಗಿ ಹೊರತಂದಿದ್ದು ವಿಶೇಷ. ಬೆಂಗಳೂರು ಭೂಗತ ಜಗತ್ತಿನ ಕುಖ್ಯಾತ ರೌಡಿಗಳನ್ನು ಗಡಿಪಾರು ಮಾಡುವ ಕಥೆ ಆಧರಿಸಿರುವ 'ಸ್ಲಂ ಬಾಲ' ಸಿನಿಮಾದಲ್ಲಿ ದುನಿಯಾ ವಿಜಯ್ ಗಡಿಪಾರು ಆಗುವ ರೌಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡಾ ನೈಜ ಘಟನೆ ಆಧರಿಸಿದ್ದರಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇನ್ನು 'ಓಂ' ಚಿತ್ರದಲ್ಲಿ ನಿಜವಾಗಿ ರೌಡಿಯಾಗಿ ನಟಿಸಿದ್ದ ಜೇಡರಹಳ್ಳಿ ಕೃಷ್ಣಪ್ಪ ತಮ್ಮ ಜೀವನಗಾಥೆಯನ್ನು 'ಜೇಡ್ರಳ್ಳಿ' ಎಂಬ ಸಿನಿಮಾ ಮೂಲಕ ತೆರೆ ಮೇಲೆ ತಂದ್ರು. ಜೇಡರಹಳ್ಳಿ ಕೃಷ್ಣಪ್ಪ ಕೂಡಾ ಒಂದು ಕಾಲದಲ್ಲಿ ರೌಡಿಯಾಗಿ ಸುದ್ದಿಯಾಗಿದ್ದವರು.

ಎದೆಗಾರಿಕೆ

'ಸ್ಲಂ ಬಾಲ' ಸಿನಿಮಾ ನಂತರ ನಿರ್ದೇಶಕಿ ಸುಮನಾ ಕಿತ್ತೂರು ನಿರ್ದೇಶಿಸಿದ ಮತ್ತೊಂದು ಸಿನಿಮಾ 'ಎದೆಗಾರಿಕೆ'. ಈ ಚಿತ್ರದಲ್ಲಿ ಆದಿತ್ಯ ಮುಂಬೈ ಶಾರ್ಪ್ ಶೂಟರ್ ಆಗಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು. ಇದು ಬರಹಗಾರ ಅಗ್ನಿ ಶ್ರೀಧರ್​​​​​​​​​​ ಬರೆದ ಕಥೆಯಾದ್ದರಿಂದ ಇದು ಕೂಡಾ ಪ್ರೇಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಯ್ತು.

ಜಯರಾಜ್

ಈ ಹಿಂದೆ ಭೂಗತ ಲೋಕದ ಮಾಜಿ ಡಾನ್‌ ಮುತ್ತಪ್ಪ ರೈ ಜೀವನವನ್ನು ಆಧರಿಸಿ 'ರೈ' ಸಿನಿಮಾ ಘೋಷಣೆ ಆಗಿತ್ತು. ಆದರೆ, ಕಾರಣಾಂತರಗಳಿಂದ ಈ ಚಿತ್ರ ಮುಂದುವರಿಯಲೇ ಇಲ್ಲ. ಈಗ ಬೆಂಗಳೂರಿನ 90ರ ದಶಕದ ಮಾಜಿ ಭೂಗತ ದೊರೆ ಎಂ.ಪಿ. ಜಯರಾಜ್‌ ಬಯೋಪಿಕ್‌ ಸಿನಿಮಾ ಮಾಡಲಾಗುತ್ತಿದೆ. ಡಾಲಿ ಪಾತ್ರದ ಮೂಲಕ ಸ್ಟಾರ್​​​​​​​​​​​​​​​​​​​​​​​​​​​ಡಮ್ ಗಿಟ್ಟಿಸಿರುವ ಧನಂಜಯ್ ಎಂ.ಪಿ. ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕಥೆಯನ್ನು ಕೂಡಾ ಅಗ್ನಿ ಶ್ರೀಧರ್ ಬರೆದಿದ್ದು, ಇವರ ಗರಡಿಯಲ್ಲಿ ಪಳಗಿರುವ ಶೂನ್ಯ ಎಂಬ ಯುವ ನಿರ್ದೇಶಕ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಡಾಲಿ ಧನಂಜಯ್ ಡಾನ್​​​​​​​​​​​ ಜಯರಾಜ್ ಪಾತ್ರಕ್ಕಾಗಿ ಭಾರೀ ಕಸರತ್ತು ಮಾಡುತ್ತಿದ್ದಾರೆ.

ನೈಜ ರೌಡಿಸಂ ಕಥೆಗಳನ್ನು ಹೊಂದಿರುವ ಸಿನಿಮಾಗಳು ಹಿಟ್ ಆಗಿವೆ ಎಂಬುದಕ್ಕೆ ಈ ಸಿನಿಮಾಗಳೇ ಸಾಕ್ಷಿ.

ABOUT THE AUTHOR

...view details