ತೆಲುಗಿನ ಮೆಗಾಸ್ಟಾರ್ ಜಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ರಿಲೀಸ್ ಆಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇದೀಗ ಈ ಚಿತ್ರವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನೋಡಿ ಮೆಚ್ಚಿಕೊಂಡಿದ್ದಾರೆ.
ಚಿತ್ರ ಬಿಡುಗಡೆಯಾದ ಮೇಲೆ ಪ್ರಮುಖ ರಾಜಕೀಯ ನಾಯಕರನ್ನು ಚಿತ್ರ ನೋಡುವಂತೆ ಆಹ್ವಾನಿಸುತ್ತಿರುವ ಮಾಜಿ ಸಂಸದ, ನಟ ಚಿರಂಜೀವಿ, ವೆಂಕಯ್ಯ ನಾಯ್ಡು ಅವರನ್ನು ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾ ನೋಡಿರುವ ನಾಯ್ಡು ಚಿತ್ರ ವೀಕ್ಷಣೆ ಸಂದರ್ಭದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಳಿಕ ಮಾತನಾಡಿರುವ ಅವರು, ಎನ್.ಟಿ ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರ ರಾವ್ ನಂತರ ತೆಲುಗಿನ ಅದ್ಭುತ ನಟ ಜಿರಂಜೀವಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಲು ಈಗಾಗಲೇ ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನೂ ಚಿರು ಆಹ್ವಾನಿಸಿದ್ದಾರಂತೆ.
ಸೈರಾ ನರಸಿಂಹ ರೆಡ್ಡಿ ಅಕ್ಟೋಬರ್ 2 ಗಾಂಧಿ ಜಯಂತಿ ದಿನ ಬಿಡುಗಡೆಯಾಗಿತ್ತು. ಸುರೇಂದರ್ ರೆಡ್ಡಿ ಚಿತ್ರ ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್, ಅಮಿತಾಬ್ ಬಚ್ಚನ್, ನಯನ ತಾರಾ ಸೇರಿದಂತೆ ಹಲವು ದೊಡ್ಡ ನಟರು ಚಿತ್ರದಲ್ಲಿದ್ದು, ಈಗಾಗಲೇ 200 ಕೋಟಿ ರೂ ಹಣ ಗಳಿಕೆ ಮಾಡಿದೆ.