ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಕೊರೊನಾ ಸೋಂಕಿಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದ ವಿಚಾರ. ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾದ ಎಸ್ಪಿಬಿ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಎಸ್ಪಿಬಿ ಶೀಘ್ರ ಗುಣಮುಖರಾಗಲೆಂದು ಆ.20 ರಂದು ಜಾಗತಿಕ ಪ್ರಾರ್ಥನೆ ಆಯೋಜನೆ
ಕೊರೊನಾ ಸೋಂಕಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಆರೋಗ್ಯ ಸುಧಾರಿಸಲೆಂದು ಆಗಸ್ಟ್ 20 ರಂದು ಜಾಗತಿಕ ಪ್ರಾರ್ಥನೆ ಏರ್ಪಡಿಸಲಾಗಿದೆ.
ಎಸ್ಪಿಬಿ ಪುತ್ರ ಎಸ್.ಪಿ. ಚರಣ್ ತಮ್ಮ ತಂದೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಆದರೆ ಎಸ್ಪಿಬಿ ಶೀಘ್ರ ಗುಣಮುಖರಾಗಿ ವಾಪಸ್ ಬರಲೆಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಎಸ್ಪಿಬಿ ಅವರಿಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದೀಗ ಸಂಗೀತ ನಿರ್ದೇಶನ ಇಳಯರಾಜ, ಎ.ಆರ್. ರೆಹಮಾನ್, ನಿರ್ದೇಶಕ ಭಾರತಿರಾಜ, ವೈರಮುತ್ತು, ನಟರಾದ ರಜನಿಕಾಂತ್, ಕಮಲಹಾಸನ್ ಹಾಗೂ ಇನ್ನಿತರ ಗಣ್ಯರು ಎಸ್ಪಿಬಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.
ಆಗಸ್ಟ್ 20 ರಂದು ಸಂಜೆ 6 ರಿಂದ 6:05 ವರೆಗೆ 5 ನಿಮಿಷಗಳ ಕಾಲ ಎಸ್ಪಿಬಿ ಅವರಿಗಾಗಿ ಜಾಗತಿಕ ಪ್ರಾರ್ಥನೆಯನ್ನು ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಸಿನಿಮಾ ಗಣ್ಯರು, ಸಂಗೀತ ಪ್ರಿಯರು ಹಾಗೂ ಅಭಿಮಾನಿಗಳು ಎಲ್ಲರೂ ಸೇರಿ ಎಸ್ಪಿಬಿ ಅವರು ಶೀಘ್ರ ಗುಣಮುಖರಾಗಿ ವಾಪಸ್ ಬರುವಂತೆ ನೀವು ಇರುವ ಸ್ಥಳದಿಂದಲೇ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.