ಕರ್ನಾಟಕ

karnataka

ETV Bharat / sitara

'ಪೆದ್ರೊ' ಸಿನಿಮಾದ ಟ್ರೈಲರ್ ರಿಲೀಸ್: ಗಿರೀಶ್ ಕಾಸರವಳ್ಳಿ ಮೆಚ್ಚುಗೆ - ಪೆದ್ರೊ ಸಿನಿಮಾ ಟ್ರೈಲರ್

'ಪೆದ್ರೊ' ಸಿನಿಮಾ ಟ್ರೈಲರ್ ಅನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'Pedro' Trailer Released by director Girish Kasaravalli
'ಪೆದ್ರೊ' ಟ್ರೈಲರ್ ರಿಲೀಸ್

By

Published : Feb 27, 2022, 8:10 AM IST

'ಪೆದ್ರೊ' ಸಿನಿಮಾ ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಟ್ರೈಲರ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ನಾನು ಪೆದ್ರೊ ಚಿತ್ರ ನೋಡಿ ಬೆರಗಾದೆ. ಇತ್ತೀಚೆಗೆ ದೂರವಾಗಿರುವ ಸಿನಿಮಾ ಭಾಷೆಯನ್ನು ಈ ಚಿತ್ರದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ.‌‌ ವಿಭಿನ್ನವಾಗಿ ಕನ್ನಡ ಸಿನಿಮಾಗಳನ್ನು ಮಾಡಬೇಕಿದೆ. ಆ ನಿಟ್ಟಿನಲ್ಲಿ ಕನ್ನಡದಲ್ಲಿ ತಿಥಿ ಹಾಗೂ ಹರಿಕಥಾ ಪ್ರಸಂಗ ಚಿತ್ರಗಳು ನನಗೆ ಬಹಳ ಹಿಡಿಸಿದ್ದವು. ಈಗ ಆ ಸಾಲಿಗೆ ಪೆದ್ರೊ ಸೇರಿದೆ. ರಿಷಭ್ ಶೆಟ್ಟಿ ಸೇರಿದಂತೆ ಇಡೀ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ' ಎಂದು ಹಾರೈಸಿದರು.


ನಿರ್ಮಾಪಕ ರಿಷಭ್ ಶೆಟ್ಟಿ ಮಾತನಾಡಿ, 'ನನ್ನ ಪ್ರಕಾರ ಕಮರ್ಷಿಯಲ್ ಸಿನಿಮಾ ಅಥವಾ ಅವಾರ್ಡ್ ಸಿನಿಮಾ ಎಂಬುದು ಇಲ್ಲ. ಸಿನಿಮಾ ಅಂದರೆ ಸಿನಿಮಾ ಅಷ್ಟೇ. ವಿಭಾಗಗಳನ್ನು ನಾವು ಮಾಡಿಕೊಂಡಿದ್ದೇವೆ. ನಾನು ಇಷ್ಟ ಪಡುವ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು ಬಹಳ ಸಂತೋಷವಾಗಿದೆ. ಅವರ ಮಾರ್ಗದರ್ಶನ ನಮಗೆ‌ ಮುಖ್ಯ. ನಟೇಶ್ ಚಿತ್ರವನ್ನು ತುಂಬಾ ಚೆನ್ನಾಗಿ ನಿರ್ದೇಶನ‌ ಮಾಡಿದ್ದಾರೆ. ಸಾಮಾನ್ಯವಾಗಿ ತಂದೆ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಾರೆ. ಆದರೆ ನಮ್ಮ ಚಿತ್ರದಲ್ಲಿ ಮಗ ತಂದೆಯನ್ನು ಚಿತ್ರರಂಗಕ್ಕೆ ಪ್ರವೇಶ ಮಾಡಿಸಿದ್ದಾರೆ. ನಟೇಶ್ ಹೆಗಡೆ ಅವರ ತಂದೆ ಗೋಪಾಲ್ ಹೆಗಡೆ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ, ರಾಮಕೃಷ್ಣ ಭಟ್, ಮೇಧಿನಿ ಕೆಳಮನೆ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಈ ಚಿತ್ರವನ್ನು ತೆರೆಗೆ ತರುತ್ತೇವೆ' ಎಂದು ತಿಳಿಸಿದರು.

ಇದನ್ನೂ ಓದಿ:ನಾನು ಸಿನಿಮಾ ಕಲೆಕ್ಷನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.. ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಬೇಕೆಂದ ನಟ ಧನ್ವೀರ್..

ನಿರ್ದೇಶಕ ನಟೇಶ್ ಹೆಗಡೆ ಮಾತನಾಡಿ, 'ನಮ್ಮ ಚಿತ್ರ ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಆದರೆ ಎಲ್ಲೆಡೆ ಈ ಚಿತ್ರ ತಲುಪಬೇಕು. ಅದರ ಮೊದಲ ಹೆಜ್ಜೆಯಾಗಿ ಟ್ರೈಲರ್ ಬಿಡುಗಡೆ ಮಾಡಿದ್ದೇವೆ. ನನ್ನ ಕಥೆ ಇಷ್ಟ ಪಟ್ಟು ಹಣ ಹಾಕಿದ ರಿಷಭ್ ಶೆಟ್ಟಿ ಅವರಿಗೆ, ರಿಷಭ್ ರನ್ನು ಪರಿಚಯಿಸಿದ ರಾಜ್ ಶೆಟ್ಟಿ ಅವರಿಗೆ, ಚಿತ್ರದಲ್ಲಿ ನಟಿಸಿರುವ ನನ್ನ ತಂದೆ ಗೋಪಾಲ್ ಹೆಗಡೆ ಹಾಗೂ ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ಗಿರೀಶ್ ಕಾಸರವಳ್ಳಿ ಸರ್ ಅವರಿಗೆ ಅನಂತ ಧನ್ಯವಾದಗಳು' ಎಂದರು.

'ಈ ಹುಡುಗನನ್ನು ಫೇಸ್ಬುಕ್ ಮೂಲಕ ಹುಡುಕಿ ನಿನ್ನ ಕಿರುಚಿತ್ರವೊಂದನ್ನು ಕಳುಹಿಸು ಎಂದೆ. ಆತನ ಕಿರುಚಿತ್ರ ನೋಡಿ ಸಂತೋಷಪಟ್ಟೆ. ರಿಷಭ್​ಗೆ ಈತನನ್ನು ಪರಿಚಯಿಸಿದೆ. ಈಗ ಈ ಚಿತ್ರ ನಿರ್ಮಾಣವಾಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ಈ ಹುಡುಗನಿಗೆ ಹಾಗೂ ತಂಡಕ್ಕೆ ನಿಮ್ಮ ಬೆಂಬಲವಿರಲಿ' ಎಂದು ರಾಜ್ ಬಿ. ಶೆಟ್ಟಿ ತಿಳಿಸಿದರು.

ABOUT THE AUTHOR

...view details