ಕನ್ನಡದ ಬಿಗ್ ಸ್ಟಾರ್ಗಳ ಚಿತ್ರಗಳು ಒಂದೇ ದಿನ ರಿಲೀಸ್ ಆಗೋದು ಇತ್ತೀಚಿಗೆ ಅಪರೂಪವಾಗಿದೆ. ಆದರೆ, ಇದೀಗ ಚಂದನವನದ ಇಬ್ಬರು ದಿಗ್ಗಜರ ಚಿತ್ರಗಳು ಏಕಕಾಲದಲ್ಲೇ ತೆರೆಗೆ ಬರುತ್ತಿವೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪೈಲ್ವಾನ್ ಹಾಗೂ ದರ್ಶನ್ ನಟನೆಯ 'ಮುನಿರತ್ನ ಕುರುಕ್ಷೇತ್ರ' ಚಿತ್ರಗಳು ಬೆಳ್ಳಿ ಪರದೆ ಮೇಲೆ ಮುಖಾಮುಖಿಯಾಗಲಿವೆ. ಬರುವ ಆಗಸ್ಟ್ 8 ರಂದು ವರಮಹಾಲಕ್ಷ್ಮೀ ಹಬ್ಬದ ಉಡುಗೊರೆಯಾಗಿ ಪೈಲ್ವಾನ್ ಹಾಗೂ ಅದರ ಮರುದಿನ (ಆಗಸ್ಟ್ .9) ಕುರುಕ್ಷೇತ್ರ ಚಿತ್ರ ಥಿಯೇಟರ್ಗಳಿಗೆ ಲಗ್ಗೆ ಇಡಲಿವೆ. ಈ ಉಭಯ ಚಿತ್ರಗಳು ಕೂಡ ಬಹುಭಾಷೆಯಲ್ಲಿ ತೆರೆ ಕಾಣುತ್ತಿರುವುದು ಮತ್ತೊಂದು ವಿಶೇಷ.
ಒಂದೇ ಸಮಯದಲ್ಲಿ ತೆರೆಕಾಣುತ್ತಿರುವುದು ಬಹುಕೋಟಿ ವೆಚ್ಚದ ಈ ಎರಡು ಅದ್ಧೂರಿ ಸಿನಿಮಾಗಳು, ಬಾಕ್ಸ್ ಆಫೀಸಿನಲ್ಲಿ ಕ್ಲ್ಯಾಶ್ ಆಗೋದು ಗ್ಯಾರಂಟಿ. ಬಹಳ ದಿನಗಳ ನಂತ್ರ ಈ ಸ್ನೇಹಿತರಿಬ್ಬರ ಚಿತ್ರಗಳು ಒಟ್ಟಿಗೆ ಬರುತ್ತಿರುವುದು ಅಭಿಮಾನಿಗಳಲ್ಲಿ ಇನ್ನಿಲ್ಲದ ಖುಷಿ ಮೂಡಿಸಿದೆ.
ಒಂದು ದಿನದ ಅಂತರದಲ್ಲಿ ಪ್ರೇಕ್ಷಕರ ಎದುರು ಬರುತ್ತಿರುವ ಈ ಎರಡು ಚಿತ್ರಗಳ ಮಧ್ಯೆ ಬಿಗ್ ಫೈಟ್ ನಡೆಯಲಿದೆಯೇ ಎನ್ನುವ ಪ್ರಶ್ನೆಗೆ ಕುರುಕ್ಷೇತ್ರದ ನಿರ್ಮಾಪಕ ಮುನಿರತ್ನ ಉತ್ತರಿಸಿದ್ದಾರೆ. ಪೈಲ್ವಾನ್ ಮತ್ತು ಕುರುಕ್ಷೇತ್ರ ಸಿನಿಮಾಗಳು ಯುದ್ಧವಲ್ಲ. ಬದಲಾಗಿ ಇವೆರಡು ಕನ್ನಡ ಸಿನಿಮಾಗಳೇ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು. ಇಬ್ಬರೂ ನಟರಿಗೆ ಅಪಾರ ಅಭಿಮಾನಿಗಳ ಬಳಗವಿದೆ. ಎರಡು ಸಿನಿಮಾಗಳನ್ನು ಜನರು ನೋಡ್ತಾರೆ ಅಂತಾ ಹೇಳಿದ್ರು.
ಮಾಧ್ಯಮಗೋಷ್ಟಿಯಲ್ಲಿ ನಿರ್ಮಾಪಕ ಮುನಿರತ್ನ ಮಾತಾಡಿದರು. ಇದೇ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುನಿರತ್ನ, ಇಲ್ಲಿ ಯುದ್ಧ ಅನ್ನೋ ಪ್ರಶ್ನೆಯೇ ಬರೋಲ್ಲ, ನಾನು ಯಾವದೇ ಕಾರಣಕ್ಕೂ ಸಿನಿಮಾ ರಿಲೀಸ್ ಡೇಟ್ ಬದಲಾಯಿಸೋಲ್ಲ. ಯಾಕಂದ್ರೆ ಇದು ಬಿಗ್ ಬಜೆಟ್ ಸಿನಿಮಾ ಎಂದರು.