ಕರ್ನಾಟಕ

karnataka

ETV Bharat / sitara

ಚಿಕ್ಕ ವಯಸ್ಸಲ್ಲೇ ಮಿಂಚಿ ಮರೆಯಾದ ಸ್ಯಾಂಡಲ್​ವುಡ್​ನ ಮೂವರು​​ ಮಾಣಿಕ್ಯಗಳು

ಕನ್ನಡ ಚಿತ್ರರಂಗದಲ್ಲಿ ಅತಿ ಕಡಿಮೆ ವಯಸ್ಸಿನಲ್ಲಿ ಹಲವು ಸಿನಿಮಾಗಳನ್ನು ಮಾಡಿ, ಹೆಸರು ಮಾಡಿದ ಮೂವರು ನಟರು ಚಿಕ್ಕ ವಯಸ್ಸಿನಲ್ಲೇ ಕಣ್ಮರೆಯಾಗಿದ್ದಾರೆ. ಆ ಮೂವರು ನಟರ ಕುರಿತಾದ ಸ್ಟೋರಿ ಇಲ್ಲಿದೆ.

By

Published : Jun 10, 2020, 1:34 AM IST

News about Shankar Nag, Chiru, Sunil
ಚಿಕ್ಕ ವಯಸ್ಸಿಗೆ ಮಿಂಚಿ ಮರೆಯಾದ ಸ್ಯಾಂಡಲ್​ವುಡ್ ಮೂರು​​ ಮಾಣಿಕ್ಯಗಳು

ಹುಟ್ಟು ಉಚಿತ, ಸಾವು ಖಚಿತ ಎಂಬ ಮಾತು ಬಹುಶಃ ಕನ್ನಡ ಚಿತ್ರರಂಗಕ್ಕೆ ಅನ್ವಯ ಆಗುತ್ತೆ. ವಯಸ್ಸಲ್ಲದ ವಯಸ್ಸಿನಲ್ಲಿ ಈ ಸಾವು ಬಂದು ಪ್ರಾಣ ಪಕ್ಷಿಯನ್ನ ಕಸಿದುಕೊಂಡು ಹೋಗುತ್ತೆ. ಈ ಸತ್ಯ ಈಗ ಕನ್ನಡ ಚಿತ್ರರಂಗದಲ್ಲಿ ನಿಜವಾಗಿದೆ.

ಹೌದು, ಕನ್ನಡ ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲಿ ಬೆಳ್ಳಿತೆರೆ ಮೇಲೆ ವಿಜೃಂಭಿಸಿದ ಮೂವರು ಮಾಣಿಕ್ಯಗಳು, ಚಿಕ್ಕವಯಸ್ಸಿನಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸುವ ಮೂಲಕ ತಮ್ಮ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿ ವರ್ಗವನ್ನ ಅಗಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಡಿಮೆ ವಯಸ್ಸಿನಲ್ಲಿ ಸಾವನ್ನಪ್ಪಿದ ಮೂರು ಮಾಣಿಕ್ಯಗಳ ಇಂಟ್ರಸ್ಟ್ರಿಂಗ್ ಸ್ಟೋರಿ ಇಲ್ಲಿದೆ.

ಈ ಸಾಲಿನಲ್ಲಿ ಮೊದಲಿಗೆ ಬರುವವರು ಕಳೆದ ಎರಡು ದಿನದ ಹಿಂದೆಯಷ್ಟೇ ಅಕಾಲಿಕ ಮರಣ ಹೊಂದಿದ ನಟ ಚಿರಂಜೀವಿ ಸರ್ಜಾ. ಚಿರು 2009ರಲ್ಲಿ 'ವಾಯುಪುತ್ರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

ಚಿರಂಜೀವಿ ಸರ್ಜಾ

ಕನ್ನಡ ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ ಚಿರಂಜೀವಿ, ಬರೋಬ್ಬರಿ 22 ಸಿನಿಮಾಗಳನ್ನ ಮಾಡಿ ಚಿತ್ರರಂಗದಲ್ಲಿ ಸ್ಟಾರ್ ಹೀರೋ ಅಂತಾ ಕರೆಯಿಸಿಕೊಂಡಿದ್ರು. ಅಷ್ಟೇ ಅಲ್ಲ ಚಿರಂಜೀವಿ ಸರ್ಜಾ, ಅಂದುಕೊಂಡಂತೆ ಇಷ್ಟದ ಹುಡುಗಿ ಮೇಘನಾ ರಾಜ್ ಜೊತೆ ಮದುವೆ ಕೂಡ ಆದ್ರು. ಇನ್ನೇನು ವಿಭಿನ್ನ ಕಥೆಯ ಸಿನಿಮಾಗಳನ್ನ ಮಾಡಿ, ಸಿನಿಮಾ ಪ್ರೇಕ್ಷಕರನ್ನ ರಂಜಿಸಿ, ದೊಡ್ಡಮಟ್ಟದಲ್ಲಿ ಸ್ಟಾರ್ ನಟನಾಗಿ ಬೆಳೆಯುವ ಟೈಮಲ್ಲಿ ಚಿರಂಜೀವಿ ಸರ್ಜಾ ಕೇವಲ, 39ನೇ ವಯಸ್ಸಿಗೆ ತಮ್ಮ ಬದುಕಿನ ಪಯಣ ಮುಗಿಸಿದ್ರು. ಆ ವಿಧಿಯಾಟಕ್ಕೆ ಚಿರಂಜೀವಿ ಸರ್ಜಾ ಎಂಬ ವಾಯುಪುತ್ರನನ್ನ ಕುಟುಂಬದವರು ಹಾಗೂ ಕನ್ನಡ ಚಿತ್ರರಂಗ ಕಳೆದುಕೊಂಡಿದೆ.

ಚಿತ್ರರಂಗದಲ್ಲಿ ಚಿರಂಜೀವಿ ಸರ್ಜಾ ನಂತರ, ಭಾರತೀಯ ಚಿತ್ರರಂಗ ಕಂಡ ಮಾಣಿಕ್ಯ ಅಂದರೆ ಕರಾಟೆ ಕಿಂಗ್ ಶಂಕರ್ ನಾಗ್. ಹೌದು ಹೆಸರಲ್ಲೇ ಒಂದು ಶಕ್ತಿ ಹೊಂದಿದ್ದ ಶಂಕರ್ ನಾಗ್ ಕೂಡ ತೀರಾ ಚಿಕ್ಕವಯಸ್ಸಿನಲ್ಲೇ ಕನ್ನಡ ಚಿತ್ರರಂಗದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು, ಕನ್ನಡದವರ ಆಟೋ ರಾಜ ಎಂದೇ ಖ್ಯಾತಿ ಗಳಿಸಿದ್ರು.

ಶಂಕರ್ ಮತ್ತು ಅನಂತ್​ ನಾಗ್​​​

'ಒಂದಾನೊಂದು ಕಾಲದಲ್ಲಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶಂಕರ್ ನಾಗ್, ಮುಂದೆ ಒಂದು ದಿನ ನಿರ್ದೇಶಕನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತೇನೆ ಅಂತಾ ಸ್ವತಃ ಅವರೇ ಅಂದುಕೊಂಡಿರಲಿಲ್ಲ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಾಗೂ ತಂತ್ರಜ್ಞನಾಗಿ ಕನ್ನಡ ಸಿನಿಮಾವನ್ನ ಆಳಿದವರು ನಟ ನಾಗರಕಟ್ಟೆ ಶಂಕರ್​ ನಾಗ್​​.

ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ ಕರಾಟೆ ಕಿಂಗ್, ಕಡಿಮೆ ಅವಧಿಯಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ಈಗ ಇತಿಹಾಸ. 1987ರಲ್ಲಿ 'ಮಾಲ್ಗುಡಿ ಡೇಸ್' ಅಂತಾ ಸೀರಿಯಲ್ ನಿರ್ದೇಶನ ಮಾಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಐದು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಮೆಟ್ರೋ ರೈಲಿನ ಕನಸು ಕಂಡಿದ್ದ ಶಂಕರ್ ನಾಗ್ ಕೇವಲ 35 ವರ್ಷಕ್ಕೆ ಬಾರದ ಲೋಕಕ್ಕೆ ತೆರಳಿದರು.

1990 ಸೆಪ್ಟೆಂಬರ್ 30ರಂದು ಸಿನಿಮಾ ಚಿತ್ರೀಕರಣ ಮುಗಿಸಿ, ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಲ್ಲಿ ಶಂಕರ್ ನಾಗ್ ಕಾರು ಅಪಘಾತವಾಗಿ ಮೃತಪಟ್ಟಿದ್ರು. ಈ ಸುದ್ದಿ ಕೂಡ ಕನ್ನಡ ಚಿತ್ರರಂಗಕ್ಕೆ ಬರ ಸಿಡಿಲಿನಂತೆ ಬಡಿದಿತ್ತು. ಇಷ್ಟು ಚಿಕ್ಕ ವಯಸ್ಸಿಗೆ ಶಂಕರ್ ನಾಗ್ ಸಾಯಬಾರದು ಅಂತಾ ಕನ್ನಡ ಚಿತ್ರರಂಗ ಅಲ್ಲದೇ ಕೋಟ್ಯಾಂತರ ಅಭಿಮಾನಿಗಳು ಮರುಗಿದ್ರು.

ಈ ಮಹಾನ್ ನಟನ ಬಳಿಕ 90ರ ದಶಕದಲ್ಲಿ ಚಾರ್ಮಿಂಗ್ ಹೀರೋ ಅಂತಾ ಗಮನ ಸೆಳೆದಿದ್ದ ನಟ ಸುನೀಲ್ ಕೂಡ ಚಿಕ್ಕ ವಯಸ್ಸಿನಲ್ಲೆ ವಿಧಿವಶರಾದರು. 1989ರಲ್ಲಿ 'ಬಿಸಿರಕ್ತ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸುನೀಲ್ ಕೂಡ, ಕಡಿಮೆ ಅವಧಿಯಲ್ಲಿ ಚಿತ್ರರಂಗದಲ್ಲಿ ಸ್ಟಾರ್ ಹೀರೋ ಪಟ್ಟ ಗಳಿಸಿದ್ರು.

ಶೃತಿ ಸಿನಿಮಾದಿಂದ ಸುನೀಲ್ ರಾತ್ರೋರಾತ್ರಿ ಸ್ಟಾರ್ ಪಟ್ಟ ಅಲಂಕರಿಸುತ್ತಾರೆ. ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿದ್ದ ಅವರು 20 ಸಿನಿಮಾ ಮಾಡಿರುತ್ತಾರೆ. ಆ ಕಾಲದ ಚಾಕೊಲೇಟ್ ಹೀರೋ ಅಂತಾ ಕರೆಯಿಸಿಕೊಂಡಿದ್ದ ಸುನೀಲ್ ಕೂಡ ಕೇವಲ 30ನೇ ವಯಸ್ಸಿಗೆ ಕಾರು ಅಪಘಾತದಲ್ಲಿ ಸಾವನ್ನಪ್ಪುತ್ತಾರೆ.

ಸುನೀಲ್​

ಸಿನಿಮಾ ಶೂಟಿಂಗ್ ಮುಗಿಸಿ ಬಾಗಲಕೋಟೆಯಿಂದ ಬೆಂಗಳೂರಿಗೆ ಬರುವಾಗ ಮಾರ್ಗ ಮಧ್ಯೆ, ಸುನೀಲ್ ಕಾರು ಅಪಘಾತಕ್ಕೊಳಗಾಗುತ್ತೆ. ಇದು ಕೂಡ ಕನ್ನಡ ಚಿತ್ರರಂಗಕ್ಕೆ ಶಾಕಿಂಗ್ ನ್ಯೂಸ್ ಆಗಿತ್ತು.

ಒಟ್ಟಾರೆ ಬದುಕಿ ಬೆಳೆಯಬೇಕಾಗಿದ್ದ, ಕರಾಟೆ ಕಿಂಗ್ ಶಂಕರ್ ನಾಗ್, ಸುನೀಲ್ ಹಾಗು ಚಿರಂಜೀವಿ ಸರ್ಜಾರಂತಹ ಮೂರು ಮಾಣಿಕ್ಯಗಳನ್ನ ಕನ್ನಡ ಚಿತ್ರರಂಗ ಕಳೆದುಕೊಂಡಿದೆ.

ABOUT THE AUTHOR

...view details