ಕರ್ನಾಟಕ

karnataka

ಡಾ. ವಿಷ್ಣುವರ್ಧನ್ ಅವರನ್ನು ನೆನೆದ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್

By

Published : Sep 18, 2020, 5:33 PM IST

ಚಿಕ್ಕಂದಿನಿಂದ ನಾನು ಡಾ. ವಿಷ್ಣುವರ್ಧನ್ ಅಭಿಮಾನಿಯಾಗಿದ್ದೆ. ಅವರನ್ನು ಹತ್ತಿರದಿಂದ ನೋಡಿ ಮಾತನಾಡಿಸುವ ಭಾಗ್ಯ ನನಗೆ ದೊರೆಯಲಿಲ್ಲ. ಅವರು ಎಷ್ಟೋ ಯುವಜನತೆಗೆ ಸ್ಪೂರ್ತಿಯಾಗಿದ್ದರು ಎಂದು ನಟ ಸಂಚಾರಿ ವಿಜಯ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Sahasasimha 70th Birthday
ಡಾ. ವಿಷ್ಣುವರ್ಧನ್

ಇಂದು ಡಾ. ವಿಷ್ಣುವರ್ಧನ್ ಅವರ 70ನೇ ಜನ್ಮದಿನ. ಕೆಲವು ದಿನಗಳ ಹಿಂದೆಯೇ ವಿಷ್ಣು ಬರ್ತಡೇ ಸಂಭ್ರಮ ಆರಂಭವಾಗಿದೆ. ಅಭಿಮಾನಿಗಳು ತಾವಿರುವಲ್ಲೇ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಿದ್ದಾರೆ. ಇದರೊಂದಿಗೆ ಸೆಪ್ಟೆಂಬರ್​ 15 ರಂದು ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಿರುವುದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ.

ಸುಮಲತಾ ಅಂಬರೀಶ್, ಪುನೀತ್ ರಾಜ್​ಕುಮಾರ್, ದರ್ಶನ್, ಸುದೀಪ್, ನವೀನ್​ ಕೃಷ್ಣ, ರವಿ ಶ್ರೀವತ್ಸ ಸೇರಿದಂತೆ ಹಲವು ನಟರು, ನಿರ್ದೇಶಕರು ಡಾ. ವಿಷ್ಣುವರ್ಧನ್ ಅವರಿಗೆ ಜನ್ಮದಿನದ ಶುಭ ಕೋರುವ ಮೂಲಕ ಅವರನ್ನು ನೆನಪಿಸಿಕೊಂಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಜಾರಿ ವಿಜಯ್ ಕೂಡಾ ವಿಷ್ಣುವರ್ಧನ್ ಅವರನ್ನು ನೆನೆದು ತಮ್ಮ ಫೇಸ್​​​​​​​ಬುಕ್​​ನಲ್ಲಿ ಅವರ ಬಗ್ಗೆ ಬರೆದಿದ್ದಾರೆ.

ಸಂಚಾರಿ ವಿಜಯ್ ಪೆನ್ ಸ್ಕೆಚ್

"ಚಿಕ್ಕ ವಯಸ್ಸಿನಲ್ಲಿ 'ದಾದಾ' ಪೋಸ್ಟರನ್ನು ಮೊದಲು ಪೆನ್ನಿನಲ್ಲಿ ತಿದ್ದಿ ಹೇಗೆ ಬರೆಯುತ್ತಿದ್ದೆನೋ ಹಾಗೆಯೇ ಮತ್ತೆ ಬರೆಯುವ ಪ್ರಯತ್ನ ಮಾಡಿದ್ದೇನೆ. ವಿಷ್ಣು ಸರ್ ಬದುಕಿದ್ದಾಗ ಒಮ್ಮೆಯೂ ಅವರನ್ನೂ ಹತ್ತಿರದಿಂದ ನೋಡಿ ಮಾತನಾಡಿಸುವ ಅವಕಾಶ ಒದಗಿ ಬರಲಿಲ್ಲ, ಆದರೆ ಅವರು ಕಾಲವಾದ ಮರುದಿನ ಕೊನೆಯ ಅವಕಾಶ ಸಿಕ್ಕಿದ್ದು 'ನ್ಯಾಷನಲ್ ಕಾಲೇಜು ಗ್ರೌಂಡ್​​​​​​​​​'ನಲ್ಲಿ, ಅಲ್ಲಿಯೂ ಆ ಜನ ಜಂಗುಳಿಯಲ್ಲಿ ಪೊಲೀಸರಿಂದ ಲಾಠಿ ಏಟು ತಿಂದು ಹರಿದ ಚಪ್ಪಲಿ ಎಳೆದಾಡಿಕೊಂಡು ಸಿಕ್ಕ ಅವಕಾಶದಲ್ಲೇ ಅಂತಿಮ ದರ್ಶನ ಮಾಡಿ ಸಮಾಧಾನ ಮಾಡಿಕೊಂಡಿದ್ದಾಯ್ತು.

ಭೇಟಿಯಾಗಲು ಒಮ್ಮೆಯೂ ಸಾಧ್ಯವಾಗಲಿಲ್ಲ ಆದರೆ ಅವರ ಆಚಾರ ವಿಚಾರಗಳ ಬಗ್ಗೆ ಅವರನ್ನು ಹತ್ತಿರದಿಂದ ಬಲ್ಲವರಿಂದ ಕೇಳಿ ತಿಳಿದದ್ದೇ ಹೆಚ್ಚು. ಚಿಕ್ಕಂದಿನಲ್ಲಿ 'ದಾದಾ' ಚಿತ್ರ ತೆರೆ ಕಂಡಾಗ ನೋಡಿ ಹೊರಬಂದು ಅದೇ ಭಂಗಿಯಲ್ಲಿ ನಡೆಯೋದು, ಮಾತಾಡುವುದು, ಕೈ ತಿರುಗಿಸಿ ಅನುಕರಣೆ ಮಾಡೋ ಹುಚ್ಚು ಹತ್ತಿಸ್ಕೊಂಡಿದ್ವಿ . ಕನ್ನಡ ಸಿನಿಮಾಗಳ ಶೀರ್ಷಿಕೆಯನ್ನು ಮುದ್ದಾಗಿ ಬರೆಯೋ ಅಭ್ಯಾಸ ಬೆಳೆಸಿಕೊಂಡು ಬಂದಿದ್ದ ನಾನು ಈ ಚಿತ್ರದ ಶೀರ್ಷಿಕೆಯನ್ನು ಪೋಸ್ಟರ್​​​​​​​​​​​ನಲ್ಲಿ ಹೇಗಿತ್ತೋ ಹಾಗೆ ಬರೆಯುವುದನ್ನು ರೂಢಿಸಿಕೊಂಡಿದ್ದೆ, ಯಾರೇ ಬಂದು ಕೇಳಿದರೂ ಇಲ್ಲ ಎನ್ನದೆ ಬರೆದು ಕೊಡುತ್ತಿದ್ದೆ. ಹೀಗೆ ತಿಳುವಳಿಕೆಯಿಲ್ಲದ ವಯಸ್ಸಲ್ಲೇ ಗೊತ್ತಿಲ್ಲದೆ ಅವರ ಚಿತ್ರದ ಶೀರ್ಷಿಕೆಗಳನ್ನು ಬರೆಯುತ್ತಾ, ಸಿನಿಮಾಗಳನ್ನು ನೋಡುತ್ತಾ ಸಾವಿರಾರು ಜನರಲ್ಲಿ ನಾನೂ ಒಬ್ಬ ವಿಷ್ಣು ಸರ್ ಅಭಿಮಾನಿಯಾದೆ.

ಮುಂದೆ ಅವರ ನಡೆ-ನುಡಿ ಕಷ್ಟದಲ್ಲಿರುವವರನ್ನು ಕಂಡು ಮರುಗುವ ಮನಸ್ಸು, ಹೊಸಬರನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟುವ ಮಾನವೀಯ ಗುಣಗಳನ್ನು ಕೇಳಿ ತುಂಬಾ ಪ್ರಭಾವಿತನಾಗಿದ್ದೆ. 'ಯಾರಿಗಾದರೂ ಸಹಾಯ ಮಾಡಿದರೆ ಅದನ್ನು ಅಲ್ಲಿಗೇ ಮರೆತುಬಿಡು, ಸಹಾಯ ಮಾಡಿದೆನೆಂಬ ಸಣ್ಣ ಅಹಂ ಕೂಡಾ ನಿನ್ನೊಳಗೆ ಇರದಂತೆ' ಎಂದು ಅವರು ಹೇಳಿದ ಮಾತು ನನ್ನಂತ ಹಲವಾರು ಜನರ ಮೇಲೆ ಪ್ರಭಾವ ಬೀರಿದೆ. ಇಂದು ನಮ್ಮೊಂದಿಗೆ ನೀವಿದ್ದಿದ್ದರೆ ಇಂದಿನ ಯುವ ಪೀಳಿಗೆಗೆ ಮತ್ತಷ್ಟು ಸ್ಪೂರ್ತಿಯಾಗುತ್ತಿದ್ದಿರಿ. ಸ್ನೇಹಜೀವಿ ಕರುನಾಡ ಯಜಮಾನರೇ ನಿಮಗೆ ಮತ್ತೊಮ್ಮೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು" ಎಂದು ವಿಜಯ್" ಭಾವಪೂರ್ಣವಾಗಿ ಬರೆದಿದ್ದಾರೆ.

ABOUT THE AUTHOR

...view details