ಒಂದು ಉತ್ತಮ ಸಂದೇಶದೊಂದಿಗೆ ಕಳೆದ ವಾರ ಬಿಡುಗಡೆಯಾದ ಮಹೇಶ್ ಬಾಬು ಅಭಿನಯದ 'ಮಹರ್ಷಿ' ಚಿತ್ರ ಕಳೆದ ವಾರ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮನಗೆದ್ದಿದೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಸಿನಿಮಾ ಮಹೇಶ್ ಬಾಬು ಅಭಿನಯದ 25ನೇ ಸಿನಿಮಾ ಎನ್ನುವುದು ವಿಶೇಷ.
ಗುರುಸ್ವಾಮಿ ಮಿಟ್ಗಿರಿ ಅವರೊಂದಿಗೆ ಮಾತುಕತೆ ಸಿನಿಮಾದಲ್ಲಿ ಮಹೇಶ್ ಬಾಬು ಮೂರು ಶೇಡ್ನಲ್ಲಿ ನಟಿಸಿದ್ದಾರೆ. ಅದರಲ್ಲಿ ರೈತನ ಪಾತ್ರ ಕೂಡಾ ಒಂದು. ಸಿನಿಮಾದಲ್ಲಿ ಮಹೇಶ್ ಬಾಬುಗೆ ವ್ಯವಸಾಯವನ್ನು ಹೇಳಿಕೊಡುವ ಊರ ಹಿರಿಯನ ಪಾತ್ರದಲ್ಲಿ ನಟಿಸಿರುವ ವ್ಯಕ್ತಿಗೆ ನಿಜಜೀವನದಲ್ಲಿ ವ್ಯವಸಾಯದ ಬಗ್ಗೆ ಯಾವುದೇ ಅನುಭವವಿಲ್ಲವಂತೆ. ಆದರೂ ಚಿತ್ರದಲ್ಲಿ ರೈತನ ಪಾತ್ರದಲ್ಲಿ ಮಿಂಚಿರುವ ಈ ವ್ಯಕ್ತಿಯ ಹೆಸರು ಗುರುಸ್ವಾಮಿ ಮಿಟ್ಗಿರಿ. ಕರ್ನೂಲ್ ಜಿಲ್ಲೆಯ ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ. ತನಗೆ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಹೇಗೆ ದೊರೆಯಿತು. ಮಹೇಶ್ ಬಾಬು ಜೊತೆ ನಟಿಸಿದ ಅನುಭವ ಹೇಗಿತ್ತು ಎಂಬುದನ್ನು ಈ ಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.
ಗುರುಸ್ವಾಮಿ ಹೇಳುವ ಪ್ರಕಾರ ಅವರ ಸ್ನೇಹಿತರಿಬ್ಬರು ಸೇರಿ ತಯಾರಿಸಿದ ಕಿರುಚಿತ್ರಗಳಲ್ಲಿ ಗುರುಸ್ವಾಮಿ ಅಭಿನಯಿಸಿದ್ದರಂತೆ. ಕಿರುಚಿತ್ರವನ್ನು ನೋಡಿದ ಮಹರ್ಷಿ ಚಿತ್ರತಂಡ ಗುರುಸ್ವಾಮಿ ಅವರಿಗೆ ತಮ್ಮ ಚಿತ್ರದಲ್ಲಿ ನಟಿಸಲು ಆಹ್ವಾನ ನೀಡಿದರಂತೆ. ಗುರುಸ್ವಾಮಿ ರಂಗಭೂಮಿ ಕಲಾವಿದರಾಗಿದ್ದು ಇದಕ್ಕೂ ಮುನ್ನ ಅವರು ಸಾಕಷ್ಟು ನಾಟಕಗಳಲ್ಲಿ ಕೂಡಾ ಅಭಿನಯಿಸಿದ್ದರಂತೆ. ಆದ ಕಾರಣ ನನಗೆ ನಟನೆಯಲ್ಲಿ ಆಸಕ್ತಿ ಬಂತು ಎನ್ನುತ್ತಾರೆ ಪೆದ್ದಾಯಿನ. 'ಮಹರ್ಷಿ' ಚಿತ್ರದ ಮೂಲಕ ನನಗೆ ಒಳ್ಳೆ ಹೆಸರು ಸಿಕ್ಕಿದ್ದು ಇದರಿಂದ ನನಗೆ ಬಹಳ ಸಂತೋಷವಾಗಿದೆ ಎನ್ನುತ್ತಾರೆ ಗುರುಸ್ವಾಮಿ.
ಮಹೇಶ್ ಬಾಬು ಅವರೊಂದಿಗೆ ನಟಿಸಲು ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ. ಮೊದಲ ದಿನ ಅವರೊಂದಿಗೆ ನಟಿಸುವಾಗ ನಾನು ಬಹಳ ಎಕ್ಸೈಟ್ ಆಗಿದ್ದೆ. ನಮ್ಮ ವಂಶದಲ್ಲಿ ಯಾರೂ ವ್ಯವಸಾಯ ಮಾಡಿಲ್ಲ. ನಮಗೆ ವ್ಯವಸಾಯ ಭೂಮಿ ಕೂಡಾ ಇಲ್ಲ. ಆದರೆ ಈ ಸಿನಿಮಾದಲ್ಲಿ ನನ್ನನ್ನು ಒಬ್ಬ ಅನುಭವಿ ರೈತನಾಗಿ ತೋರಿಸಿದ್ದಾರೆ. ಸಿನಿಮಾದಲ್ಲಿ ನಟಿಸಿದ ಮೇಲೆ ಒಬ್ಬ ರೈತನಿಗೆ ಇರುವ ಕಷ್ಟ ಏನು ಎಂಬುದು ನನಗೆ ಅರಿವಾಯಿತು. ನೇಗಿಲು ಹಿಡಿದು ಹೊಲ ಉಳುವುದು, ನಾಟಿ ನೆಡುವುದು ನಿಜಕ್ಕೂ ನನಗೆ ಒಳ್ಳೆ ಅನುಭವ ನೀಡಿತು ಎಂದು ಗುರುಸ್ವಾಮಿ ಭಾವೋದ್ವೇಗವಾಗಿ ಹೇಳಿಕೊಂಡಿದ್ದಾರೆ.
'ಭೂಮಿಯನ್ನು ನಂಬಿ ಕೆಟ್ಟವರಿಲ್ಲ' ಎಂದು ಹಿರಿಯರು ಹೇಳಿರುವ ಮಾತು ಅಕ್ಷರಶ: ಸತ್ಯ. ಇರುವ ಭೂಮಿಯನ್ನು ಬಿಟ್ಟು, ತಂದೆ ತಾಯಿಯನ್ನು ಬಿಟ್ಟು ಯುವಜನತೆ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುತ್ತಿರುವುದು ಸರಿಯಲ್ಲ. ನಿಮ್ಮ ವಿದ್ಯಾಭ್ಯಾಸವನ್ನು ನೀವು ಹುಟ್ಟಿ ಬೆಳೆದ ಹಳ್ಳಿಗೆ ಹಾಗೂ ವ್ಯವಸಾಯಕ್ಕೆ ಮುಡುಪಾಗಿಡಿ ಎಂದು ಗುರುಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.