ಚಾಲೆಂಜಿಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳು, ಪಕ್ಷಿಗಳೆಂದರೆ ವಿಶೇಷ ಪ್ರೀತಿ. ಇದೇ ಕಾರಣದಿಂದ ತಮ್ಮ ಫಾರ್ಮ್ ಹೌಸ್ನಲ್ಲಿ ಒಂದಷ್ಟು ಪ್ರಾಣಿ ಪಕ್ಷಿಗಳನ್ನು ಬಲು ಪ್ರೀತಿ, ಮಮಕಾರದಿಂದ ಸಾಕಿ ಸಲಹುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಇಟ್ಟಿರುವ ದರ್ಶನ್, ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಸಾರ್ವಜನಿಕರು ದತ್ತು ಪಡೆಯುವಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕನ್ನಡ ಕಿರುತೆರೆ ನಟಿಯರು ಪ್ರಾಣಿ - ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.
ಚಾಲೆಂಜಿಗ್ ಸ್ಟಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಕಾವ್ಯ ಗೌಡ ಹಂಪಿ ಮೃಗಾಲಯದಲ್ಲಿನ ಬಿಳಿ ನವಿಲನ್ನು ದತ್ತು ಪಡೆದುಕೊಂಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಎಂದು ಜನಪ್ರಿಯಗೊಂಡಿರುವ ಹಂಪಿ ಮೃಗಾಲಯದಲ್ಲಿರುವ ಬಿಳಿ ನವಿಲನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆದಿದ್ದಾರೆ. ಈ ಕುರಿತು ಸ್ವತಃ ಕಾವ್ಯ ಗೌಡ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/CP4oYqwlUtu/?utm_medium=copy_link
ಅಡಾಪ್ಶನ್ ಸರ್ಟಿಫಿಕೇಟ್ ಹಂಚಿಕೊಂಡ ಕಾವ್ಯ
''ಕೋವಿಡ್ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿ ಸಂಕುಲಕ್ಕೂ ಆಗಿದೆ. ಅದರಿಂದ ಹಂಪಿ ಕ್ಷೇತ್ರದ 'ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ನ ಬಿಳಿ ನವಿಲನ್ನು ದತ್ತು ಪಡೆದಿದ್ದೇನೆ. ನಾನು ಚಿಕ್ಕಂದಿನಲ್ಲಿ ತುಂಬಾ ಇಷ್ಟ ಪಡುತ್ತಿದ್ದ ಪಕ್ಷಿ ನವಿಲು ಮತ್ತು ಇದು ನಮ್ಮ ರಾಷ್ಟ್ರೀಯ ಪಕ್ಷಿ. ಈ ನನ್ನ ಕೆಲಸಕ್ಕೆ ಮುಖ್ಯ ಕಾರಣಕರ್ತರು 'ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್'. ಅವರಿಗೂ ತುಂಬು ಹೃದಯದ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ.