2020 ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ಕಂಟಕವಾಗಿ ಕಾಡಿದ ವರ್ಷ. ಈಗಾಗಲೇ ಈ ಮಹಾಮಾರಿ ವೈರಸ್ನಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ ಕೋಟ್ಯಂತ ಜನರ ಬದುಕನ್ನ ಕಸಿದಕೊಂಡ ವರ್ಷ. ಇದರಲ್ಲಿ ಕನ್ನಡ ಚಿತ್ರರಂಗ ಕೂಡ ಹೊರತಾಗಿಲ್ಲ. ಈ 2020ರಲ್ಲಿ ಕನ್ನಡ ಚಿತ್ರರಂಗದ ಪ್ರಖ್ಯಾತ ತಾರೆಯರು ಬದುಕಿನ ಪಯಣ ಮುಗಿಸಿದ್ದು, ಸಾಕಷ್ಟು ನೋವು ತಂದಿತ್ತು.
ಹಾಗಾದರೆ 2020ರಲ್ಲಿ ಕನ್ನಡ ಚಿತ್ರರಂಗದ ಯಾರೆಲ್ಲಾ ತಾರೆಯರು ಅಗಲಿದರು ಎಂಬುದರ ಚಿತ್ರಣ ಇಲ್ಲಿದೆ.
ಕಿಶೋರಿ ಬಲ್ಲಾಳ್
ಈ ಕೊರೊನಾ ಎಂಬ ಹೆಮ್ಮಾರಿ ಬರುವುದಕ್ಕಿಂತ ಮುಂಚೆ ಕನ್ನಡ ಚಿತ್ರರಂಗದಲ್ಲಿ ಇಹಲೋಕ ತ್ಯಜಿಸಿದ ಪ್ರಖ್ಯಾತ ನಟಿ ಅಂದರೆ ಕಿಶೋರಿ ಬಲ್ಲಾಳ್. ಬಾಲಿವುಡ್, ಕನ್ನಡ ಮರಾಠಿ ಸೇರಿದಂತೆ ಬರೋಬ್ಬರಿ 75 ಚಿತ್ರಗಳಲ್ಲಿ ನಟಿಸಿದ್ದ ಈ ರಂಗ ಭೂಮಿ ಕಲಾವಿದೆ ಫೆಬ್ರವರಿ 18ರಂದು, 82ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದರು. ಹಿಂದಿಯ ಸ್ವದೇಸ್ ಸಿನಿಮಾದಲ್ಲಿ ಗಮನಾರ್ಹ ಪಾತ್ರ ಮಾಡಿದ್ದ ಕಿಶೋರಿ ಬಲ್ಲಾಳ್, ನಿಧನಕ್ಕೆ ಬಾಲಿವುಡ್ ಬಾದಾಷಾ ಶಾರುಖ್ ಖಾನ್ ಸೇರಿದಂತೆ ಅನೇಕರು ಕಿಶೋರಿ ಬಲ್ಲಾಳ್ ಸಾವಿಗೆ ಸಂತಾಪ ಸೂಚಿಸಿದ್ದರು.
ಬುಲೆಟ್ ಪ್ರಕಾಶ್
ಇನ್ನು ಕರ್ನಾಟದಲ್ಲಿ ಕೊರೊನಾ ಎಂಬ ಹೆಮ್ಮಾರಿ ವಕ್ಕರಿಸಿ ತಾಂಡವಾಡುತ್ತಿದ್ದ ಸಂದರ್ಭದಲ್ಲಿ ಕೊನೆಯುಸಿರೆಳೆದ ನಟ ಕಮ್ ರಾಜಕಾರಣಿ ಬುಲೆಟ್ ಪ್ರಕಾಶ್. ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಹಾಸ್ಯ ನಟನಾಗಿದ್ದ ಬುಲೆಟ್ ಪ್ರಕಾಶ್ ಸಾವಿನ ಸುದ್ದಿ ಚಿತ್ರರಂಗ ಶಾಕ್ಗೆ ಒಳಗಾಗುವಂತೆ ಮಾಡಿತ್ತು. ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಮಾರ್ಚ್ 31ರಂದು ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು, ಎಕೆ 47, ಪಾರ್ಥ,ಓಂಕಾರ, ಅಂಬಿ, ಮಸ್ತ್ ಮಜಾ ಮಾಡಿ, ಐತಲಕ್ಕಡಿ ಜಾಕಿ,ರಜನಿಕಾಂತ, ಗಂಗಾ,ಸಾಹೇಬ,ರೋಜ್ ಸೇರಿದಂತೆ ಕನ್ನಡದಲ್ಲೂ 323ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬುಲೆಟ್ ಪ್ರಕಾಶ್ ನಟಿಸಿ ಪ್ರೇಕ್ಷಕರನ್ನ ರಂಜಿಸಿದರು.
ಮೈಕಲ್ ಮಧು
ಬುಲೆಟ್ ಪ್ರಕಾಶ್ ಸಾವನ್ನಪ್ಪಿ 20 ದಿನಕ್ಕೆ ನಿಧನರಾದ ಮತ್ತೊಬ್ಬ ಹಾಸ್ಯ ನಟ ಅಂದರೆ ಮೈಕೆಲ್ ಮಧು. ಮೇ 13ರಂದು ಅನಾರೋಗ್ಯದಿಂದಾಗಿ ಮೈಕಲ್ ಮಧು ಹೃದಯಘಾತದಿಂದ ನಿಧನರಾದರು. ಶಿವರಾಜ್ಕುಮಾರ್ ನಟನೆಯ ಓಂ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ನಟರಾಗಿ ಎಂಟ್ರಿ ಪಡೆದ ಮೈಕೆಲ್, ಸೂರ್ಯವಂಶ, ಶ್, ಎ ಸೇರಿದಂತೆ ಸುಮಾರು 80ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಇವರು ಕೊನೆಯದಾಗಿ ನಟಿಸಿದ ಸಿನಿಮಾ 2020ರಲ್ಲಿ ತೆರೆಕಂಡ ಫ್ರೆಂಚ್ ಬಿರಿಯಾನಿ ಸಿನಿಮಾ.
ಚಿರಂಜೀವಿ ಸರ್ಜಾ
ಈ ಬೇಡಿಕೆ ಹಾಸ್ಯ ನಟರ ಸಾವಿನ ಬೆನ್ನಲ್ಲೇ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ ಕಾದಿತ್ತು. ಅದುವೇ ಯುವ ಸಾಮ್ರಾಟ್ ಆಗಿ ಮಿಂಚುತ್ತಿದ್ದ ಚಿರಂಜೀವಿ ಸರ್ಜಾ ಅಕಾಲಿಕ ಮರಣ, ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯರಿಗೆ ಶಾಕಿಂಗ್ ನ್ಯೂಸ್ ಆಗಿತ್ತು. 39ನೇ ವಯಸ್ಸಿಗೆ ಜೂನ್ 7ರಂದು ಹೃದಯಾಘಾತದಿಂದ ಚಿರಂಜೀವಿ ಕೊನೆಯುಸಿರೆಳೆದರು ಎಂಬ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಅಭಿಮಾನಿಗಳು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತುಂಬು ಗರ್ಭಿಣಿಯಾಗಿದ್ದ ಪತ್ನಿ ಮೇಘನಾ ಪತಿಯ ಪಾರ್ಥೀವ ಶರೀರ ತಬ್ಬಿ ಕಣ್ಣೀರಿಟ್ಟಿದ್ದ ದೃಶ್ಯ ಇಂದಿಗೂ ಮರೆಯಲು ಸಾಧ್ಯವಿಲ್ಲ. ಚಿರು ಮೂಲಕ ಸ್ಯಾಂಡಲ್ ವುಡ್ಗೆ ಪದಾರ್ಪಣೆ ಮಾಡಿದ್ದ ಚಿರು ಬಳಿಕ, ಕೆಂಪೇಗೌಡ, ಆಟಗಾರ, ವರಧನಾಯಕ, ಅಮ್ಮ ಐಲ್ ಯೂ, ಸಿಂಗ ಹೀಗೆ 25ಕ್ಕೂ ಹಲವಾರು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ ಚಿರಂಜೀವಿ ಸರ್ಜಾ ನೆನಪು ಮಾತ್ರ. ಆದರೆ, ಪತ್ನಿಯ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬಂದಿದ್ದಾನೆ ಎಂಬ ಸಮಾಧಾನವಿದೆ.
ಮಿಮಿಕ್ರಿ ರಾಜಗೋಪಾಲ್