ಕರ್ನಾಟಕ

karnataka

ETV Bharat / sitara

ಕನ್ನಡ ಚಿತ್ರರಂಗದ ಯಶಸ್ವಿ ಬಹುಕೋಟಿ ನಿರ್ಮಾಪಕರು ಇವರು..! - Producer Abbaiah naidu

ಯಾವುದೇ ಸಿನಿಮಾ, ಕಿರುಚಿತ್ರ, ಧಾರಾವಾಹಿ ನಿರ್ಮಾಣವಾಗಬೇಕು ಎಂದರೆ ಅದಕ್ಕೆ ಬಂಡವಾಳ ಹೂಡುವ ನಿರ್ಮಾಪಕರು ಬಹಳ ಮುಖ್ಯ. ಕನ್ನಡ ಚಿತ್ರರಂಗದಲ್ಲಿ ಎಷ್ಟೋ ಮಂದಿ ಸಿನಿಮಾ ಮಾಡುತ್ತೇನೆ ಎಂದು ಬಂದು ಹೋಗಿದ್ದಾರೆ. ಆದರೆ ಸೋಲು ಕಂಡರೂ ಧೈರ್ಯಗೆಡದೆ ಅನೇಕ ಸಿನಿಮಾಗಳನ್ನು ನಿರ್ಮಿಸಿ ನಿರ್ಮಾಪಕರಾಗಿ ಯಶಸ್ಸು ಗಳಿಸಿರುವವರು ಕೆಲವೇ ನಿರ್ಮಾಪಕರು.

Kannada film industry producers
ಬಹುಕೋಟಿ ನಿರ್ಮಾಪಕರು

By

Published : Aug 6, 2020, 6:26 PM IST

ಸಿನಿಮಾ ಎಂಬ ಕ್ರಿಯೇಟಿವ್ ಕ್ಷೇತ್ರದಲ್ಲಿ ಒಂದು ಸಣ್ಣ ಬಜೆಟ್​​​​​​​​​​ನಿಂದ ಹಿಡಿದು, ಅದ್ಧೂರಿಯಾಗಿ ಸಿನಿಮಾ ಮಾಡಬೇಕಾದ್ರೆ ಬಹು ಮುಖ್ಯವಾದ ಪಾತ್ರ ವಹಿಸೋದು ನಿರ್ಮಾಪಕರು. ಇವರನ್ನು ಡಾ. ರಾಜ್​ಕುಮಾರ್​​​ ಅನ್ನದಾತರು ಅಂತಾ ಕರೆಯುತ್ತಿದ್ದರು.

ಈ ಅನ್ನದಾತ ಇದ್ರೆ ಹೀರೋ, ಹೀರೋಯಿನ್,ಪೋಷಕ ಕಲಾವಿದರಿಂದ ಹಿಡಿದು ಸಾವಿರಾರು ಸಿನಿಮಾ ಕಾರ್ಮಿಕರಿಗೆ ಕೆಲಸ ಸಿಗುತ್ತೆ. ಕನ್ನಡ ಚಿತ್ರರಂಗದ ಆರಂಭದ ದಿನಗಳಿಂದಲೂ, ಒಂದು ಸಿನಿಮಾ ಶುರುವಾಗಲು ಮುಖ್ಯ ಕಾರಣ ಹಣ ಹೂಡುವಂತ ನಿರ್ಮಾಪಕರು. 60-70 ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಬಹುಕೋಟಿ ಖರ್ಚು ಮಾಡಿ ಸಿನಿಮಾ ಮಾಡುವ ಫ್ಯಾಷನಿಸ್ಟ್​​​​​​​​​​ ನಿರ್ಮಾಪಕರು ಇದ್ದಾರೆ. ಅತಂಹ ಅನ್ನದಾತ ನಿರ್ಮಾಪಕರ ಬಗ್ಗೆ ಒಂದು ಇಂಟ್ರಸ್ಟ್ರಿಂಗ್ ಸ್ಟೋರಿ ಇದು.

ಗುಬ್ಬಿ ವೀರಣ್ಣ

ಸ್ಯಾಂಡಲ್​​​ವುಡ್​​​ನಲ್ಲಿ ಲೆಕ್ಕವಿಲ್ಲದಷ್ಟು ನಿರ್ಮಾಪಕರು ಲಕ್ಷ, ಕೋಟಿ ರೂಪಾಯಿ ಬಜೆಟ್ ನಲ್ಲಿ ಸಿನಿಮಾಗಳನ್ನು ಮಾಡಿದ್ದಾರೆ. ಇದರಲ್ಲಿ ಬಹುಕೋಟಿ ಬಜೆಟ್ ಜೊತೆಗೆ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡ ಕೆಲವೇ ಕೆಲವು ನಿರ್ಮಾಪಕರಿದ್ದಾರೆ.

ಕಪ್ಪು-ಬಿಳುಪು ಕಾಲದಲ್ಲೇ ದೊಡ್ಡ ನಿರ್ಮಾಪಕರು ಅಂತಾ ಗುಬ್ಬಿ ವೀರಣ್ಣ ಹಾಗೂ ಅಬ್ಬಯ್ಯ ನಾಯ್ಡು ಗುರುತಿಸಿಕೊಂಡಿದ್ರು. ನಿರ್ಮಾಪಕ ಗುಬ್ಬಿ ವೀರಣ್ಣ 'ಬೇಡರ ಕಣ್ಣಪ್ಪ' ಸಿನಿಮಾ ನಿರ್ಮಾಣ ಮಾಡಲಿಲ್ಲ ಎಂದರೆ ಇಂದು ಕನ್ನಡ ಚಿತ್ರರಂಗಕ್ಕೆ ವರನಟನ ಪರಿಚಯವಾಗುತ್ತಿರಲಿಲ್ಲ.

ಗುಬ್ಬಿ ವೀರಣ್ಣ ನಂತರ ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಿರ್ಮಾಪಕರಾಗಿ ಗುರುತಿಸಿಕೊಂಡವರು ಅಬ್ಬಯ್ಯ ನಾಯ್ಡು. ಹೂವು ಮುಳ್ಳು, ರಾಜಾ ನನ್ನ ರಾಜಾ, ಚೆಲ್ಲಿದ ರಕ್ತ, ಸೀತಾರಾಮು ಅಂತಂಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಅಬ್ಬಯ್ಯ ನಾಯ್ಡು ಅವರಿಗೆ ಸಲ್ಲುತ್ತದೆ.

ಎನ್. ವೀರಾಸ್ವಾಮಿ

ಇವರ ಬಳಿಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಿರ್ಮಾಪಕರಾಗಿ ಗುರುತಿಸಿಕೊಂಡವರು ಕ್ರೇಜಿ ಸ್ಟಾರ್ ರವಿಚಂದ್ರನ್ ತಂದೆ ಎನ್​. ವಿರಾಸ್ವಾಮಿ. 1971ರಲ್ಲೇ ಡಾ. ರಾಜ್​​​​​​​ಕುಮಾರ್​​​ ಅವರ 'ಕುಲ ಗೌರವ' ಚಿತ್ರವನ್ನು ವೀರಾಸ್ವಾಮಿ ನಿರ್ಮಾಣ ಮಾಡಿದ್ರು. ಆ ಕಾಲದಲ್ಲಿ 2 ಲಕ್ಷ ಖರ್ಚು ಮಾಡಿ ಈ ಚಿತ್ರ ನಿರ್ಮಾಣ ಮಾಡಿದ್ರು. ಇದಾದ ಬಳಿ 3 ಲಕ್ಷದಲ್ಲಿ 'ನಾಗರಹಾವು' ಚಿತ್ರವನ್ನು ವೀರಾಸ್ವಾಮಿ ನಿರ್ಮಾಣ ಮಾಡುವ ಮೂಲಕ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡರು. ಇವಿಷ್ಟೇ ಅಲ್ಲ, ನಾ ನಿನ್ನ ಮರೆಯಲಾರೆ, ನಾರದ ವಿಜಯ, ಕಿಂದರಿ ಜೋಗಿ, ನಾನು ನನ್ನ ಹೆಂಡ್ತಿ, ಹೀಗೆ ಹೈ ಬಜೆಟ್​​​​​​​​​​​​​​​ನಲ್ಲಿ ಎನ್​​​. ವೀರಾಸ್ವಾಮಿ ನಿರ್ಮಾಣ ಮಾಡಿದ್ದ ಚಿತ್ರಗಳು ಯಶಸ್ಸು ಕಂಡವು.

ಪಾರ್ವತಮ್ಮ ರಾಜ್​​​ಕುಮಾರ್

ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ನಿರ್ಮಾಪಕಿಯಾಗಿ ಹೆಸರು ಮಾಡಿದವರು ಡಾ. ರಾಜ್​​​ಕುಮಾರ್​ ಧರ್ಮಪತ್ನಿ ಪಾರ್ವತಮ್ಮ ರಾಜ್​​​​​ಕುಮಾರ್. 1975ರಲ್ಲಿ ಡಾ. ರಾಜ್​​​ಕುಮಾರ್​ ತ್ರಿ ಪಾತ್ರದಲ್ಲಿ ಅಭಿನಯಿದ 'ತ್ರಿಮೂರ್ತಿ' ಯಂತ ಸಿನಿಮಾ ನಿರ್ಮಾಣ ಮಾಡುವ ಮೂಲಕ ಪಾರ್ವತಮ್ಮನವರು ನಿರ್ಮಾಪಕಿಯಾದರು. ಆ ಕಾಲದಲ್ಲಿ ಒಂದು ಕೋಟಿ ಬಜೆಟ್​​​​ನಲ್ಲಿ ಪಾರ್ವತಮ್ಮ ತ್ರಿಮೂರ್ತಿ ಸಿನಿಮಾ ನಿರ್ಮಾಣ ಮಾಡಿದ್ದರಂತೆ. ಅಲ್ಲಿಂದ ಪೂರ್ಣಿಮಾ ಹಾಗೂ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ 50 ಲಕ್ಷದಿಂದ ಹಿಡಿದು 10 ಕೋಟಿವರೆಗೆ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಗಿರಿ ಕನ್ಯೆ, ಕವಿರತ್ನ ಕಾಳಿದಾಸ, ಚಲಿಸುವ ಮೋಡಗಳು, ಕಾಮನ ಬಿಲ್ಲು, ಓಂ, ಅಪ್ಪು, ಅರಸು ಹೀಗೆ 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪಾರ್ವತಮ್ಮ ರಾಜ್​​​​​​​​​​​ಕುಮಾರ್ ಕೋಟಿ ನಿರ್ಮಾಪಕರಲ್ಲಿ ಒಬ್ಬರು.

ಕೆಸಿಎನ್ ಗೌಡ್ರು

ಇನ್ನು ರೈತ ಕುಟುಂಬದಿಂದ ಬಂದು ಸಿನಿಮಾರಂಗದಲ್ಲಿ ನಿರ್ಮಾಪಕರಾದವರು ಕೆ.ಸಿ. ಎನ್. ಗೌಡ್ರು. ಬಂಗಾರದ ಮನುಷ್ಯ ಸಿನಿಮಾ ವಿತರಕರಾಗಿ ಚಿತ್ರರಂಗಕ್ಕೆ ಬಂದ ಕೆ.ಸಿ.ಎನ್. ಗೌಡ್ರು ಕೂಡಾ, ಬಿಗ್ ಬಜೆಟ್​​​​ ಚಿತ್ರಗಳನ್ನು ಮಾಡಿ ಸಕ್ಸಸ್ ಕಂಡಿದ್ದಾರೆ. ಅದಕ್ಕೆ ಸಾಕ್ಷಿ ಬಬ್ರುವಾಹನ, ಹುಲಿಯ ಹಾಲಿನ ಮೇವು, ಕಸ್ತೂರಿ ನಿವಾಸ, ದೂರದ ಬೆಟ್ಟ, ಶರಪಂಜರ, ಭಕ್ತ ಸಿರಿಯಾಳ. ಹೀಗೆ 20ಕ್ಕೂ ಹೆಚ್ಚು ಸಿನಿಮಾಗಳನ್ನು, ಕೋಟಿ ಬಜೆಟ್​​​​​​​ನಲ್ಲಿ ಕೆ.ಸಿ.ಎನ್. ಗೌಡ್ರು ನಿರ್ಮಾಣ ಮಾಡುವ ಮೂಲಕ ಕೋಟಿ ನಿರ್ಮಾಪಕ ಅಂತಾ ಕರೆಸಿಕೊಂಡಿದ್ದಾರೆ. ಈಗ ಕೆಸಿಎನ್ ಗೌಡರ ಮಕ್ಕಳಾದ ಕೆಸಿಎನ್ ಚಂದ್ರಶೇಖರ್ ಮತ್ತು ಮೋಹನ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

ಕೋಟಿ ರಾಮು

ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದು ಹೆಸರಾದ ಮತ್ತೊಬ್ಬ ನಿರ್ಮಾಪಕ ಕೋಟಿ ರಾಮು. ಮಾಲಾಶ್ರೀ ಪತಿ ರಾಮು, ಕೋಟಿ ಬಜೆಟ್​​​​​ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುವುದರಲ್ಲಿ ಎತ್ತಿದ ಕೈ. ಅದರಲ್ಲಿ ಆ್ಯಕ್ಷನ್ ಸಿನಿಮಾಗಳೇ ಹೆಚ್ಚು ಅನ್ನೋದು ವಿಶೇಷ. 'ಚೈತ್ರದ ಪ್ರೇಮಾಂಜಲಿ' ಸಿನಿಮಾದಿಂದ ವಿತರಕರಾಗಿದ್ದ ರಾಮು, 'ಅಧಿಪತಿ' ಸಿನಿಮಾ ಮೂಲಕ ನಿರ್ಮಾಪಕರಾದ್ರು. ಲಾಕಪ್ ಡೆತ್, ಸಿಂಹದ ಮರಿ, ಭಾವ ಭಾಮೈದ, ಎಕೆ 47, ಕಲಾಸಿಪಾಳ್ಯ, ಸರ್ಕಲ್ ಇನ್ಸ್ ಪೆಕ್ಟರ್ ಹೀಗೆ ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ ಖ್ಯಾತಿ ರಾಮು ಅವರಿಗೆ ಸಲ್ಲುತ್ತದೆ.

ರಾಕ್​​ಲೈನ್ ವೆಂಕಟೇಶ್

ಇನ್ನು ಕನ್ನಡ, ತೆಲುಗು, ಹಿಂದಿ, ತಮಿಳಿನಲ್ಲಿ ಕೂಡಾ ಹಣ ಹೂಡಿ ಸಿನಿಮಾ ಮಾಡುತ್ತಿರುವ ಕನ್ನಡ ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್​. ಸ್ಟಂಟ್ ಹಾಗೂ ಖಳನಟನ ಪಾತ್ರಗಳನ್ನು ಮಾಡುತ್ತಾ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ರಾಕ್ ಲೈನ್ ವೆಂಕಟೇಶ್ ಬೆಳವಣಿಗೆ ನೋಡಿ ಚಿತ್ರರಂಗ ಅಚ್ಚರಿ ಪಟ್ಟಿದೆ. ಪುನೀತ್ ರಾಜ್​​​ಕುಮಾರ್, ಸುದೀಪ್, ದರ್ಶನ್ ಬಾಲಿವುಡ್​​​​​​​​​​​​​​​​​​​​​ನಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ರಜನಿಕಾಂತ್ ಸಿನಿಮಾಗಳನ್ನು ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಾಕ್​​ಲೈನ್​​​​​​​​ ವೆಂಕಟೇಶ್ ಹೈ ಬಜೆಟ್ ಸಿನಿಮಾಗಳ ನಿರ್ಮಾಪಕರಾಗಿದ್ದಾರೆ.

ಜಯಣ್ಣ ಭೋಗೇಂದ್ರ

ಸಿನಿಮಾ ಹಂಚಿಕೆದಾರರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೋಟಿ ನಿರ್ಮಾಪಕರಲ್ಲಿ ಜಯಣ್ಣ ಭೋಗೇಂದ್ರ ಕೂಡಾ ಒಬ್ಬರು. ಶಿವರಾಜ್ ಕುಮಾರ್, ಪುನೀತ್ ರಾಜ್​​​​​​​​​ಕುಮಾರ್ ಹಾಗೂ ರಾಕಿಂಗ್ ಸ್ಟಾರ್​​​ ಯಶ್ ಸಿನಿಮಾಗಳನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಜಯಣ್ಣ ಭೋಗೇಂದ್ರ ಕೂಡಾ ಕೋಟಿ ಹಣ ಹೂಡಿ ಕೆಲವೊಂದು ಸಿನಿಮಾಗಳನ್ನು ಮಾಡಿದ್ದಾರೆ.

ವಿಜಯ್ ಕಿರಂಗದೂರ್

ಇನ್ನು ಇತ್ತೀಚಿನ ದಿನಗಳಲ್ಲಿ ಬಹುಕೋಟಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ನಿರ್ಮಾಪಕರಲ್ಲಿ ವಿಜಯ್ ಕಿರಂಗದೂರು ಕೂಡಾ ಒಬ್ಬರು. ಮೂಲತಃ ಬಿಲ್ಡರ್ ಕಂಪನಿ ಹೊಂದಿರುವ ವಿಜಯ್ ಕಿರಂಗದೂರ್ 'ನಿನ್ನಿಂದಲೇ' ಸಿನಿಮಾ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಮಾಸ್ಟರ್ ಪೀಸ್, ರಾಜಕುಮಾರ ಹಾಗೂ ಕೆಜಿಎಫ್ ಸಿನಿಮಾಗಳನ್ನು ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ರಾಜಕುಮಾರ ಹಾಗೂ ಕೆಜಿಎಫ್ ಸಿನಿಮಾ ಮೂಲಕ ಖ್ಯಾತಿ ಹೊಂದಿರುವ ವಿಜಯ್ ಕಿರಂಗದೂರ್, 50-100 ಕೋಟಿ ಬಜೆಟ್​​​​​​​​​​​​​​​​​​​​​​ನಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ

ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ಕಿರಿಕ್ ಪಾರ್ಟಿ, ಕಥೆಯೊಂದು ಶುರುವಾಗಿದೆ, ಅವನೇ ಶ್ರೀಮನ್ನಾರಾಯಣದಂಥ ವಿಭಿನ್ನ ಸಿನಿಮಾಗಳನ್ನು ಮಾಡಿ, ಸ್ಯಾಂಡಲ್​​​​​​​ವುಡ್​​​​​​​​​​​​​ನಲ್ಲಿ ಗಮನ ಸೆಳೆದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ಹೈ ಬಜೆಟ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ, ಕನ್ನಡದಲ್ಲಿ ಕೋಟಿ ನಿರ್ಮಾಪಕ ಅಂತಾ ಕರೆಸಿಕೊಂಡಿದ್ದಾರೆ.

ಉಮಾಪತಿ

ಇನ್ನು ಹೆಬ್ಬುಲಿ, ಮದಗಜ, ರಾಬರ್ಟ್ ಸಿನಿಮಾಗಳಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ನಿರ್ಮಾಪಕ ಉಮಾಪತಿ. ಸದ್ಯ 40 ಕೋಟಿ ರೂಪಾಯಿ ಬಜೆಟ್​​​​​​​​​​​​​​​​​​ನಲ್ಲಿ ದರ್ಶನ್​ ಅಭಿನಯದ ರಾಬರ್ಟ್ ಸಿನಿಮಾ ನಿರ್ಮಾಣ ಮಾಡಿರುವ ಉಮಾಪತಿ ಕೂಡಾ ಯಂಗ್ ಪ್ರೊಡ್ಯೂಸರ್ ಎಂದು ಗುರುತಿಸಿಕೊಂಡಿದ್ದಾರೆ.

ಟಿ.ಆರ್. ಚಂದ್ರಶೇಖರ್​​​

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್​​​​ ಮೂಲಕ ಟಿ.ಆರ್. ಚಂದ್ರಶೇಖರ್​​​ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ಧಾರೆ. ಚಮಕ್, ಅಯೋಗ್ಯ ಸಿನಿಮಾಗಳನ್ನು ನಿರ್ಮಿಸಿರುವ ಚಂದ್ರಶೇಖರ್ ಉಪೇಂದ್ರ ಅಭಿನಯದ 'ಬುದ್ಧಿವಂತ 2' ಹಾಗೂ ಅಜಯ್ ರಾವ್ ಅಭಿನಯದ 'ಶೋಕಿವಾಲ' ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಗುರುತಿಸಿಕೊಂಡಿರುವ ಮುನಿರತ್ನ ಕೂಡಾ ಕೋಟಿ ಬಂಡವಾಳ ಹೂಡಿ ಸಿನಿಮಾ ಮಾಡುತ್ತಿದ್ದಾರೆ. 2018 ರಲ್ಲಿ ಬಿಡುಗಡೆಯಾದ ಬಹುತಾರಾಗಣದ ಕುರುಕ್ಷೇತ್ರ ಚಿತ್ರಕ್ಕೆ ಮುನಿರತ್ನ ಭಾರೀ ಮೊತ್ತದ ಹಣ ಖರ್ಚು ಮಾಡಿದ್ದರು. ಚಿತ್ರಕ್ಕೆ 100 ಕೋಟಿ ಖರ್ಚು ಮಾಡಲಾಗಿದೆ ಎಂದು ಮುನಿರತ್ನ ಹೇಳಿದ್ದರು. ಆದರೆ ಈ ಬಗ್ಗೆ ಭಾರೀ ಚರ್ಚೆ ನಡೆದಿತ್ತು.

ABOUT THE AUTHOR

...view details