ಪಡ್ಡೆಹುಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಸಂಪೂರ್ಣ ಸಿನಿಮಾದಲ್ಲಿಯೇ ಮುಳುಗಿದ್ದಾರೆ. ಈಗಾಗಲೇ ವಿಷ್ಣುಪ್ರಿಯ ಸಿನಿಮಾ ಮುಗಿಸಿರುವ ಶ್ರೇಯಸ್, ಇನ್ನೇನು ಆ ಚಿತ್ರವನ್ನು 2021ಕ್ಕೆ ಬಿಡುಗಡೆ ಮಾಡುವ ತಯಾರಿ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶ್ರೇಯಸ್, ಮುಂದಿನ ವರ್ಷ ಪೂರ್ತಿ ಬ್ಯುಸಿಯಾಗಲಿದ್ದಾರೆ.
ಹೌದು, ಜನವರಿ ಅಂತ್ಯಕ್ಕೆ ಶ್ರೇಯಸ್ ಅಭಿನಯದ ಮಾಸ್ ಎಂಟರ್ಟೈನರ್ ಕಥಾಹಂದರವುಳ್ಳ ಸಿನಿಮಾವೊಂದು ಸೆಟ್ಟೇರಲಿದೆ. ಸ್ನೇಹ, ಪ್ರೀತಿಯ ಎಳೆಯನ್ನು ಹೊಂದಿರುವ ಈ ಚಿತ್ರದಲ್ಲಿ ಶ್ರೇಯಸ್ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪಡ್ಡೆಹುಲಿ ಸಿನಿಮಾ ನೋಡಿ ಇಷ್ಟಪಟ್ಟು ಈ ಚಿತ್ರ ಮಾಡಲು ಮುಂದೆ ಬಂದಿದ್ದಾರೆ. ತಮಿಳು ಮತ್ತು ಮಲಯಾಳಿ ನಿರ್ಮಾಪಕ ರವಿಕುಮಾರ್ ಈ ಚಿತ್ರದ ನಿಮಾರ್ಪಕರು. ಅದರ ನಾಯಕಿ ಮತ್ತು ತಾಂತ್ರಿಕ ವರ್ಗದ ಆಯ್ಕೆ ಆಗಬೇಕಿದೆ.
ಇನ್ನು ಇದರ ಜತೆಗೆ ತಮಿಳಿನ ಕಥೆಗಾರರೊಬ್ಬರು ಹೇಳಿದ ಕಥೆಯನ್ನೂ ಶ್ರೇಯಸ್ ಕೇಳಿದ್ದು, ಆ ಕಥೆ ಕೇಳಿಯೇ ಫಿದಾ ಆಗಿದ್ದಾರೆ. ಎಲ್ಲ ಭಾಷೆಗಳಿಗೆ ಸಲ್ಲುವ ಕಥೆ ಇದಾಗಿರುವುದರಿಂದ ಕೆ.ಮಂಜು ಅವರೇ ತಮ್ಮ ಬ್ಯಾನರ್ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರಂತೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿ ಈ ಸಿನಿಮಾ ಮಾಡುವ ಯೋಜನೆ ನಡೆಯುತ್ತಿದೆ.
ಮಗನ ಸಿನಿಮಾಕ್ಕೆ 12 ಕೋಟಿ ಬಂಡವಾಳ ಹಾಕುತ್ತಿದ್ದಾರಂತೆ ಕೆ.ಮಂಜು ಹುಡುಗ-ಹುಡುಗಿ ಮದುವೆ ಆಗುವುದಕ್ಕೂ ಮುಂಚೆ ಹೇಗಿರಬೇಕು, ಮದುವೆ ಆದ ಬಳಿಕ ಹೇಗಿರಬೇಕು ಎಂಬ ಎಳೆ ಈ ಚಿತ್ರದ್ದು. 10-12 ಕೋಟಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿರುವುದರಿಂದ ಮಾರ್ಚ್ ಅಂತ್ಯದ ವೇಳೆಗೆ ಈ ಸಿನಿಮಾ ಶುರುವಾಗಲಿದೆಯಂತೆ. ಈ ಎರಡು ಸಿನಿಮಾ ಒಂದು ಹಂತಕ್ಕೆ ಬರುತ್ತಿದ್ದಂತೆ ಮಲಯಾಳಂ ನಿರ್ದೇಶಕರ ಚಿತ್ರದಲ್ಲಿಯೂ ಶ್ರೇಯಸ್ ನಟಿಸಲಿದ್ದಾರೆ. ಈ ಸಿನಿಮಾ ಏಪ್ರಿಲ್ ಅಂತ್ಯಕ್ಕೆ ಸೆಟ್ಟೇರಲಿದ್ದು, ಭೂಗತ ಜಗತ್ತಿನ ಕಥಾಹಂದರ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದೆ. ಮಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲಾಗುತ್ತದೆ.
ಈ ಮೂರು ಸಿನಿಮಾಗಳ ಮಾಹಿತಿ ಒಂದೆಡೆಯಾದರೆ, ಈಗಾಗಲೇ ವಿಷ್ಣುಪ್ರಿಯಾ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದ ಜತೆಗೆ ಮಲಯಾಳಂನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೆ.ಮಂಜು, ಕೋವಿಡ್ ಪ್ರಮಾಣ ಕಡಿಮೆಯಾಗುತ್ತಿದೆಯಾದರೂ ಚಿತ್ರಮಂದಿರಗಳು ಮೊದಲಿನಂತೆ ಕಾರ್ಯನಿರ್ವಹಿಸುತ್ತಿಲ್ಲ. ಈಗಾಗಲೇ ನಾನೇ ಹಲವು ಬಾರಿ ಸಿನಿಮಾ ವೀಕ್ಷಣೆ ಮಾಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಾಗಾಗಿ ಮುಂದಿನ ವರ್ಷಕ್ಕೆ ಚಿತ್ರಮಂದಿರದಲ್ಲಿಯೇ ಬರಬೇಕೆಂದು ನಿರ್ಧರಿಸಿದ್ದೇವೆ. ಇತ್ತ ಇನ್ನೂ ಮೂರು ಸಿನಿಮಾಗಳು ಶ್ರೇಯಸ್ ಬಳಿ ಇದ್ದು, ಒಂದೊಂದಾಗಿಯೇ ಘೋಷಣೆ ಆಗಲಿವೆ ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ.