ನಾನವನಲ್ಲ ನಾನವನಲ್ಲ... ಈ ಡೈಲಾಗ್ ಕೇಳಿದೊಡನೆ ನಮಗೆ ನೆನಪಾಗುವುದು ಉಪೇಂದ್ರ ಅಭಿನಯದ ಬುದ್ಧಿವಂತ ಸಿನಿಮಾ. 2008 ರಲ್ಲಿ ಬಿಡುಗಡೆಯಾಗಿದ್ದ ಬುದ್ಧಿವಂತ ಚಿತ್ರ ಒಳ್ಳೆಯ ಹೆಸರು ಮಾಡಿತ್ತು. ಸಿನಿಮಾ ಕಥೆ, ಹಾಡುಗಳು, ಡೈಲಾಗ್ ಇಂದಿಗೂ ಫೇಮಸ್.
ಬುದ್ಧಿವಂತ-2 ಚಿತ್ರದಿಂದ ನಿರ್ದೇಶಕ ಡಿ.ಎನ್. ಮೌರ್ಯ ಹೊರಕ್ಕೆ... ಜಯರಾಂ ಹೆಗಲಿಗೆ ಡೈರೆಕ್ಷನ್
ಉಪೇಂದ್ರ ಅಭಿನಯದ ಬುದ್ಧಿವಂತ-2 ಸಿನಿಮಾದಿಂದ ನಿರ್ದೇಶಕ ಡಿ.ಎನ್. ಮೌರ್ಯ ಹೊರ ನಡೆದಿದ್ದು ಇದೀಗ ಆ ಜಾಗಕ್ಕೆ ನಿರ್ದೇಶಕ ಜಯರಾಂ ಬಂದಿದ್ದಾರೆ. ಚಿತ್ರದ ನಿರ್ದೇಶಕರು ಬದಲಾಗಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಕೆಲವೊಂದು ಭಿನ್ನಾಭಿಪ್ರಾಯಗಳಿಂದ ಈ ಬದಲಾವಣೆ ಆಗಿದೆ ಎನ್ನಲಾಗ್ತಿದೆ.
ಇದೀಗ ಉಪೇಂದ್ರ ಅಭಿನಯದಲ್ಲಿ ಬುದ್ಧಿವಂತ ಸೀಕ್ವೆಲ್ ತಯಾರಾಗುತ್ತಿರುವುದು ತಿಳಿದಿರುವ ವಿಚಾರ. ಇನ್ನು ಉಪೇಂದ್ರ ಅವರಿಗೆ ಪ್ರತಿಯೊಂದು ಅಚ್ಚುಕಟ್ಟಾಗಿ ಆಗಬೇಕು. ಅವರನ್ನು ಮೆಚ್ಚಿಸುವುದು ಬಹಳ ಕಷ್ಟ ಎಂದೇ ಹೇಳಬಹುದು. ಕೆಲವೊಮ್ಮೆ ಎಷ್ಟೇ ನಿಭಾಯಿಸಿದರೂ ಕೆಲವೊಂದು ತಪ್ಪುಗಳಾಗಿ ಹೋಗುತ್ತವೆ. ಇದೀಗ ‘ಬುದ್ಧಿವಂತ -2‘ ವಿಷಯದಲ್ಲೂ ಆಗಿರುವುದು ಅದೇ. ಕೆಲವೊಂದು ಭಿನ್ನಾಭಿಪ್ರಾಯಗಳಿಂದ ‘ಬುದ್ಧಿವಂತ 2’ ನಿರ್ದೇಶ ಡಿ.ಎನ್. ಮೌರ್ಯ ಚಿತ್ರದಿಂದ ಹೊರನಡೆದಿದ್ದಾರೆ. ಇದೀಗ ಅವರ ಜಾಗಕ್ಕೆ ಜಯರಾಂ ಎಂಬ ಹೊಸ ನಿರ್ದೇಶಕ ಬಂದಿದ್ದಾರೆ. ಡಿ.ಎನ್. ಮೌರ್ಯ ಸಿನಿಮಾದ ಕೆಲವೊಂದು ಭಾಗಗಳ ಚಿತ್ರೀಕರಣ ಮಾಡಿಮುಗಿಸಿದ್ದಾರೆ. ಇದೀಗ ಜಯರಾಂ ಉಳಿದ ಭಾಗದ ಚಿತ್ರೀಕರಣ ಮುಗಿಸಲಿದ್ದಾರೆ. ಜಯರಾಂ, ನಿರ್ದೇಶಕ ಆರ್.ಚಂದ್ರು ಅವರ ಸಹಾಯಕ ನಿರ್ದೇಶಕ. ಐ ಲವ್ ಯು ಸಿನಿಮಾ ಚಿತ್ರೀಕರಣದ ವೇಳೆ ಉಪೇಂದ್ರ ಅವರಿಗೆ ಜಯರಾಂ ಪರಿಚಯವಾಗಿತ್ತು.
ಮೈಸೂರಿನ ಕ್ರಿಸ್ಟಲ್ ಪಾರ್ಕ್ ಹೋಟೆಲ್ ಉದ್ಯಮಿ ಟಿ.ಆರ್. ಚಂದ್ರಶೇಖರ್ ಬುದ್ಧಿವಂತ-2 ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಟೈಟಲ್ ಕಾರ್ಡಿನಲ್ಲಿ ಮೌರ್ಯ ಅವರ ಹೆಸರು ಕೂಡಾ ಇರಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಉಪೇಂದ್ರ ಅವರದ್ದು ದ್ವಿಪಾತ್ರ. ಮೇಘನಾ ರಾಜ್ ಹಾಗೂ ಸೋನಾಲ್ ಮೊಂತೆರೋ ನಾಯಕಿಯರಾಗಿ ನಟಿಸಿದ್ದಾರೆ.