ಕರ್ನಾಟಕ

karnataka

By

Published : Aug 16, 2019, 8:19 PM IST

Updated : Aug 16, 2019, 8:31 PM IST

ETV Bharat / sitara

'ನಾತಿಚರಾಮಿ'ಗೆ 5 ರಾಷ್ಟ್ರಪ್ರಶಸ್ತಿ ಪ್ರಶ್ನಿಸಿ ಕೋರ್ಟ್​ ಮೊರೆ: ಆಕ್ಷೇಪಕ್ಕೆ ದಯಾಳ್​​ ಕೊಡುವ ಕಾರಣ ಏನು?

ಮಂಸೋರೆ ನಿರ್ದೇಶನದ 'ನಾತಿಚರಾಮಿ' ಸಿನಿಮಾಗೆ 5 ರಾಷ್ಟ್ರಪ್ರಶಸ್ತಿ ಲಭಿಸಿರುವುದಕ್ಕೆ ನಿರ್ದೇಶಕ ದಯಾಳ್ ಪದ್ಮನಾಭನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ದಯಾಳ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಶೃತಿ ಹರಿಹರನ್ ಹಾಗೂ ಸಂಚಾರಿ ವಿಜಯ್ 'ನಾತಿಚರಾಮಿ' ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಾತಿಚರಾಮಿ

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಕಳೆದ ವಾರ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದರು. ಯಶ್ ಅಭಿನಯದ ಕೆಜಿಎಫ್, ನಾತಿಚರಾಮಿ, ಒಂದಲ್ಲಾ ಎರಡಲ್ಲಾ ಸೇರಿ ಕನ್ನಡಕ್ಕೆ 13 ರಾಷ್ಟ್ರಪ್ರಶಸ್ತಿ ಘೋಷಣೆಯಾಗಿವೆ.

ದಯಾಳ್​​​​ ಪದ್ಮನಾಭನ್

ಕನ್ನಡಕ್ಕೆ 13 ರಾಷ್ಟ್ರಪ್ರಶಸ್ತಿಗಳು ಬಂದಿರುವುದು ಸ್ಯಾಂಡಲ್​ವುಡ್​​ ಇತಿಹಾಸದಲ್ಲೇ ಇದೇ ಮೊದಲು. ಇನ್ನು ಶೃತಿ ಹರಿಹರನ್ ಹಾಗೂ ಸಂಚಾರಿ ವಿಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ನಾತಿಚರಾಮಿ' ಸಿನಿಮಾಗೆ ಅತ್ಯುತ್ತಮ ಚಿತ್ರ, ಅತ್ಯುತ್ತಮ ಗಾಯನ, ಸಾಹಿತ್ಯ, ಸಂಕಲನ, ಅತ್ಯುತ್ತಮ ನಟಿ ಸೇರಿ ಒಟ್ಟು 5 ವಿಭಾಗಗಳಲ್ಲಿ ಪ್ರಶಸ್ತಿ ಲಭಿಸಿವೆ. ಆದರೆ ಈ ಸಿನಿಮಾಗೆ 5 ವಿಭಾಗಗಲ್ಲಿ ಪ್ರಶಸ್ತಿ ಲಭಿಸಿರುವುದಕ್ಕೆ ನಿರ್ದೇಶಕ ದಯಾಳ್ ಪದ್ಮನಾಭನ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರಾಷ್ಟ್ರಪ್ರಶಸ್ತಿ ಜ್ಯೂರಿ ಸದಸ್ಯರಾಗಿರುವವರು ಆ ಪ್ರಶಸ್ತಿ ಸಮಾರಂಭದಲ್ಲಿ ನಾಮಿನೇಟ್ ಆಗುವ ಸಿನಿಮಾಗಳೊಂದಿಗೆ ಯಾವುದೇ ಸಂಬಂಧ ಹೊಂದಿರಬಾರದು ಎಂಬ ಷರತ್ತು ಇದೆ. ಆದರೆ ಜ್ಯೂರಿ ಸದಸ್ಯರಾದ ನಿರ್ದೇಶಕ ಬಿ.ಎಸ್​. ಲಿಂಗದೇವರಿಗೂ 'ನಾತಿಚರಾಮಿ' ಚಿತ್ರಕ್ಕೂ ಲಿಂಕ್ ಇದೆ ಎನ್ನಲಾಗಿದೆ.

'ಅಕ್ಕ ಕಮ್ಯುನಿಕೇಷನ್' ಬಗ್ಗೆ ವಿವರ

'ನಾತಿಚರಾಮಿ' ಸಿನಿಮಾವು ಬಿ.ಎಸ್​. ಲಿಂಗದೇವರು ಮಾಲೀಕತ್ವದ 'ಅಕ್ಕ ಕಮ್ಯುನಿಕೇಷನ್​' ಸಂಸ್ಥೆಯಲ್ಲಿ ಎಡಿಟ್ ಆಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ. ಈ ಮೂಲಕ ರಾಷ್ಟ್ರಪ್ರಶಸ್ತಿ ಷರತ್ತುಗಳ ಉಲ್ಲಂಘನೆಯಾಗಿದೆ. ಅಲ್ಲದೆ, ನನ್ನ ಸಿನಿಮಾ ಬಿಡುಗಡೆಯಾದಾಗ ಎಲ್ಲಾ ಮಾಧ್ಯಮಗಳಲ್ಲೂ ಒಳ್ಳೆಯ ರಿವ್ಯೂ ಬಂದಿತ್ತು. ಜೊತೆಗೆ ಸ್ಪರ್ಧೆಯಲ್ಲಿ ಇನ್ನೂ ಒಳ್ಳೆಯ ಸಿನಿಮಾಗಳು ಇದ್ದವು. ಆದರೆ ಎಲ್ಲವನ್ನೂ ಬಿಟ್ಟು 'ನಾತಿಚರಾಮಿ' ಸಿನಿಮಾಗೆ ಐದು ಪ್ರಶಸ್ತಿಗಳು ಬರಲು ಕಾರಣವೇನು ಎಂಬುದು ದಯಾಳ್ ಪ್ರಶ್ನೆ. ಇದೀಗ ದಯಾಳ್ ಕೋರ್ಟ್ ಮೆಟ್ಟಿಲೇರಿದ್ದು ಅವರು ನ್ಯಾಯಾಲಯದಲ್ಲಿ ಗೆಲ್ಲುವರೇ.. 'ನಾತಿಚರಾಮಿ' ಚಿತ್ರಕ್ಕೆ ಘೋಷಣೆಯಾಗಿರುವ ಪ್ರಶಸ್ತಿಗಳನ್ನು ಹಿಂಪಡೆಯಲಾಗುವುದೇ ಎಂಬುದನ್ನು ಕಾದು ನೋಡಬೇಕು.

'ಅಕ್ಕ ಕಮ್ಯುನಿಕೇಷನ್' ಬಗ್ಗೆ ವಿವರ
Last Updated : Aug 16, 2019, 8:31 PM IST

ABOUT THE AUTHOR

...view details