ಕಳೆದ 6 ತಿಂಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳನ್ನು ಅಕ್ಟೋಬರ್ 15 ರಿಂದ ಮತ್ತೆ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಚಿತ್ರಮಂದಿರ ತೆರೆಯುತ್ತಿದ್ದಂತೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಲು ಕ್ಯೂನಲ್ಲಿ ನಿಂತಿವೆ. ಇದೀಗ 'ರಣಂ' ಚಿತ್ರತಂಡ ಕೂಡಾ ಚಿತ್ರ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ.
ಚಿರಂಜೀವಿ ಸರ್ಜಾ ಹಾಗೂ ಚೇತನ್ ಕುಮಾರ್ ನಟಿಸಿರುವ 'ರಣಂ' ಚಿತ್ರವನ್ನು ದಸರಾ ಹಬ್ಬಕ್ಕೆ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೇಳಿದ್ದಾರೆ. ಚಿತ್ರವನ್ನು ನೋಡಲು ಪ್ರೇಕ್ಷಕರು ಖಂಡಿತ ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎಂಬುದು ಶ್ರೀನಿವಾಸ್ ಅವರ ನಂಬಿಕೆ. ಎಲ್ಲಾ ಸರಿ ಇದ್ದಿದ್ದರೆ ಏಪ್ರಿಲ್ನಲ್ಲಿ ರಣಂ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಸಮಸ್ಯೆಯಿಂದ ಚಿತ್ರ ಬಿಡುಗಡೆ ತಡವಾಯ್ತು. ಒಂದು ವೇಳೆ ಏಪ್ರಿಲ್ನಲ್ಲೇ ಚಿತ್ರ ಬಿಡುಗಡೆಯಾಗಿದ್ದರೆ ಚಿರಂಜೀವಿ ಸರ್ಜಾ ಕೂಡಾ ತಮ್ಮ ಚಿತ್ರವನ್ನು ನೋಡುತ್ತಿದ್ದರೇನೋ. ಆದರೆ ಈಗ ಚಿರು ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಅವರ ಸಿನಿಮಾವನ್ನು ನೋಡುವಂತಾಗಿದೆ.