ಕರ್ನಾಟಕ

karnataka

ಚಂದನವನದ ಅಂಗಳದಲ್ಲಿ ರಾರಾಜಿಸುವ ಬಿಗ್​ ಬಜೆಟ್​ ಸಿನಿಮಾಗಳು ಗಪ್​​​ಚುಪ್​​..!

By

Published : Apr 23, 2021, 8:00 PM IST

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಲಗಾಮ್', ಪುನೀತ್​​ ರಾಜ್​ಕುಮಾರ್ ಅವರ 'ಜೇಮ್ಸ್', ವಸಿಷ್ಠ ಸಿಂಹ ನಟನೆಯ 'ತಲ್ವಾರ್', ಶಿವರಾಜ್ ಕುಮಾರ್ ಅವರ 'ಶಿವಪ್'ಪ, ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3', ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅವರ ಹೊಸ ಸಿನಿಮಾ ಸೆರಿದಂತೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಚಿತ್ರ ಸಹ ಚಂದನವನದಲ್ಲಿ ಸದ್ಯಕ್ಕೆ ಬ್ರೇಕ್​ ತೆಗೆದುಕೊಂಡಿವೆ. ಇದಕ್ಕೆ ಕಾರಣ ಏನಿರಬಹುದು ಗೊತ್ತಾ?

kannada film industry
ಬಿಗ್​ ಬಜೆಟ್​ ಸಿನಿಮಾಗಳು

ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದ್ದು, ಈ ಕೊಂಡಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜೊತೆಗೆ ಮಾಲ್, ಚಿತ್ರಮಂದಿರ ಹಾಗೂ ಧಾರ್ಮಿಕ ಕೇಂದ್ರಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಇದರಲ್ಲಿ ಕನ್ನಡ ಚಿತ್ರರಂಗ ಕೂಡ ಹೊರತಾಗಿಲ್ಲ. ಸದ್ಯಕ್ಕೆ ಕನ್ನಡದ ಸ್ಟಾರ್ ನಟರ ಸಿನಿಮಾಗಳ ಮೇಲೆ ಕೊರೊನಾ ಕರಿನೆರಳು ಆವರಿಸಿದೆ.

ಕೊರೊನಾದ ಎಫೆಕ್ಟ್ ಚಿತ್ರೀಕರಣಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಸ್ಟಾರ್‌ ನಟರ ಸಿನಿಮಾಗಳು ಸೇರಿದಂತೆ ಹೊಸಬರ ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದಿದೆ. ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಸ್ಟಾರ್ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರು ರಿಸ್ಕ್‌ ತೆಗೆದುಕೊಳ್ಳುವುದು ಬೇಡ ಎಂದು ಚಿತ್ರೀಕರಣವನ್ನು ಮುಂದಕ್ಕೆ ಹಾಕಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ

ಕೆಲ ದಿನಗಳ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಲಗಾಮ್' ಸಿನಿಮಾ ಸರಳವಾಗಿ ಸೆಟ್ಟೇರಿತ್ತು. ನಿರ್ದೇಶಕ ಕೆ ಮಾದೇಶ ಪ್ಲಾನ್ ಪ್ರಕಾರ ಮೈಸೂರಿನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ತಯಾರಿ ನಡೆಸಿತ್ತು. ಆದರೆ, ಕೊರೊನಾ ಹೆಚ್ಚಾದ ಕಾರಣ 'ಲಗಾಮ್' ಚಿತ್ರದ ಶೂಟಿಂಗ್ ಮುಂದೂಡಲಾಗಿದೆ.

ಹಾಗೆ ಆರ್ ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಕೂಡ ಸದ್ಯಕ್ಕೆ ಸ್ಥಗಿತಗೊಂಡಿದೆ. ಕಬ್ಜ ಸಿನಿಮಾಗಾಗಿ ಮಿನರ್ವ ಮಿಲ್‌ನಲ್ಲಿ ಕೊಟ್ಯಂತರ ರೂ. ಖರ್ಚು ಮಾಡಿ ಅದ್ಧೂರಿ ಸೆಟ್‌ ಹಾಕಲಾಗಿತ್ತು. ಅದೇ ಸೆಟ್​​ನಲ್ಲಿ ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ಸಹ ನಡೆಯುತ್ತಿತ್ತು. ಆದರೆ, ಈಗ ಕೊರೊನಾ ಕೇಸ್​ಗಳು ಹೆಚ್ಚಾಗುತ್ತಿರುವುದರಿಂದ ಚಿತ್ರದ ನಿರ್ದೇಶಕರು ಗೊಂದಲದಲ್ಲಿದ್ದಾರೆ. ಹೀಗಾಗಿ ಉಪೇಂದ್ರ ಫ್ಯಾಮಿಲಿ ಜೊತೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಪುನೀತ್​ ರಾಜ್​ಕುಮಾರ್

ಇನ್ನು 'ಯುವರತ್ನ' ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ನಟ ಪುನೀತ್​​ ರಾಜ್​ಕುಮಾರ್ 'ಜೇಮ್ಸ್' ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಬೇಕಿತ್ತು. ಆದರೆ, ರಾಜ್ಯ ಸರ್ಕಾರ ಕರ್ಫ್ಯೂ ಹೇರಿದ್ದರಿಂದ ಈ ಸಿನಿಮಾದ ಚಿತ್ರೀಕರಣವನ್ನು ಸಹ ನಿಲ್ಲಿಸಲಾಗಿದೆ. ಚಿತ್ರತಂಡದ ಆರೋಗ್ಯದ ದೃಷ್ಟಿಯಿಂದ ಚಿತ್ರೀಕರಣವನ್ನ ಮುಂದೂಡಲಾಗಿದೆ. ಈ ಸಂಕಷ್ಟದ ಕಾಲ ಕಳೆದ ಮೇಲೆ ನಮ್ಮ ಕೆಲಸ ಶುರುವಾಗಲಿದೆ ಅಂತಾರೆ ನಿರ್ದೇಶಕ ಚೇತನ್ ಕುಮಾರ್. ಈ ಕಡೆ ಸಿನಿಮಾ ಶೂಟಿಂಗ್ ಇಲ್ಲದ ಕಾರಣ ಪವರ್ ಸ್ಟಾರ್ ಹೊಸ ಸಿನಿಮಾಗಳು ಕಥೆ ಕೇಳೋದು ಹಾಗೂ ತಮ್ಮ ಪಿಆರ್​ಕೆ ಸಂಸ್ಥೆಯಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಕಥೆ ಆಯ್ಕೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಕುಟುಂಬದ ಜೊತೆ ಎಂಜಾಯ್​ ಮಾಡುತ್ತಿದ್ದಾರೆ.

ವಸಿಷ್ಠ ಸಿಂಹ

ಕಂಚಿನ ಕಂಠದಿಂದಲೇ ಚಂದನವನದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟ ವಸಿಷ್ಠ ಸಿಂಹಗೂ ಈ ಕೊರೊನಾ ದಾರಿ ಮಾಡಿಕೊಟ್ಟಿಲ್ಲ. ಸದ್ಯ 'ಕಾಲಚಕ್ರ' ಸಿನಿಮಾ ಸೇರಿದಂತೆ 'ತಲ್ವಾಲ್', ತೆಲುಗಿನ 'ಒಡೆಲ್​​ ರೈಲ್ವೆ ಸ್ಟೇಷನ್‌' ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಆದರೆ, ಕೊರೊನಾ ಕಾರಣದಿಂದ ಚಿತ್ರೀಕರಣದಿಂದ ದೂರವೇ ಉಳಿದಿದ್ದಾರೆ. ರಾಜ್ಯ ಸರ್ಕಾರ ಕರ್ಫ್ಯೂ ಹೊರಡಿಸುವುದಕ್ಕಿಂತಲೂ ಮೊದಲು 'ತಲ್ವಾರ್' ಸಿನಿಮಾವನ್ನು ಶುರು ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಆದರೆ, ಸೋಂಕಿತರ ಸಂಖ್ಯೆ ಹಚ್ಚಾಗುತ್ತಿರುವುದರಿಂದ ಚಿತ್ರೀಕರಣಕ್ಕೆ ಬ್ರೇಕ್​ ನೀಡಿದ್ದೇವೆ. ಹಾಗಾಗಿ ಎಲ್ಲರೂ ಮನೆಯಲ್ಲಿ ಇರುವಂತಾಗಿದೆ ಎನ್ನುತ್ತಾರೆ ಕಂಚಿನ ಕಂಠದ ಕುವರ ವಸಿಷ್ಠ ಸಿಂಹ.

ಶಿವರಾಜ್​ಕುಮಾರ್

ಇನ್ನು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ 'ಶಿವಪ್ಪ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದರು. ಕೊರೊನಾ ಪ್ರಕರಣದಿಂದ ಶಿವಪ್ಪ ಸಿನಿಮಾದ ಚಿತ್ರೀಕರಣವನ್ನು ಸಹ ನಿಲ್ಲಿಸಿದ್ದಾರಂತೆ. ಹಾಗಾಗಿ ಶಿವಣ್ಣ ಸದ್ಯ ತಮ್ಮ ಹೋಂ ಬ್ಯಾನರ್​ನಲ್ಲಿ ಬರಲಿರುವ ಹೆಸರಿಡದ ಚಿತ್ರದ ಸ್ಕ್ರೀಪ್ಟ್ ರೀಡಿಂಗ್​​ನಲ್ಲಿ ಬ್ಯುಸಿಯಾಗಿದ್ದಾರೆ.

ಸುದೀಪ್​

ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ, ಮತ್ತೆ ಕೊರೊನಾದ ಎರಡನೇ ಅಲೆ ಶುರುವಾಗಿದ್ದರಿಂದ ಈ ಚಿತ್ರದ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದ ಬಳಿಕ ಸುದೀಪ್ 'ವಿಕ್ರಾಂತ್ ರೋಣ' ಚಿತ್ರದ ಕಡೆ ಗಮನ ಹರಿಸಬೇಕಿತ್ತು. ಸದ್ಯ ಅನಾರೋಗ್ಯದಿಂದ ಬಳುತ್ತಿರುವ ಸುದೀಪ್ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಕನ್ನಡದ 'ಬಿಗ್ ಬಾಸ್'​ನ ಈ ವಾರದ ವೀಕೆಂಡ್​ ಸಂಚಿಕೆಯಲ್ಲಿಯೂ ಕಿಚ್ಚ ಸುದೀಪ್ ಕಾಣಿಸಿಕೊಳ್ಳುವುದಿಲ್ಲ.

ದರ್ಶನ್​

ಇನ್ನು 'ರಾಬರ್ಟ್' ಸಿನಿಮಾ ಯಶಸ್ಸಿನ ಅಲೆಯಲ್ಲಿರುವ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅವರ ಹೊಸ ಸಿನಿಮಾ ಇಷ್ಟೊತ್ತಿಗೆ ಶುರುವಾಗಬೇಕಿತ್ತು. ರಾಕ್​​​​ಲೈನ್ ವೆಂಕಟೇಶ್ ಅವರ ಪುತ್ರ ನಿರ್ಮಾಣ ಮಾಡಲಿರುವ 'ಗೋಲ್ಡ್​​ ರಿಂಗ್' ಸಿನಿಮಾದಲ್ಲಿ ಬ್ಯುಸಿಯಾಗಬೇಕಿದ್ದ ದಚ್ಚು ಕೊರೊನಾದಿಂದ ಸದ್ಯಕ್ಕೆ ಹಿಂದೆ ಸರಿದಿದ್ದಾರೆ. ಹಾಗಾಗಿ ಸ್ನೇಹಿತರ ಜೊತೆ ಜಾಲಿ ಟ್ರಿಪ್​ನಲ್ಲಿದ್ದಾರೆ.

ಯಶ್​

ಕೊನೆಯದಾಗಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಬ್ಲಾಕ್ ಬಸ್ಟರ್​ 'ಕೆಜಿಎಫ್ -ಚಾಪ್ಟರ್ 2' ಸಿನಿಮಾವನ್ನು ರಿಲೀಸ್ ಮಾಡುವ ಸಿದ್ಧತೆಯಲ್ಲಿದ್ದರು. ಜುಲೈಗೆ ವರ್ಲ್ಡ್​ ವೈಡ್ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಣೆ ಸಹ ಮಾಡಿದೆ. ಕೆಜಿಎಫ್ ಬಳಿಕ ಯಶ್ ಯಾವ ಸಿನಿಮಾಗೆ ಗ್ರೀನ್​ ಸಿಗ್ನಲ್​ ನೀಡಲಿದ್ದಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿತ್ತು. ಅಂದಕೊಂಡಂತೆ ಆಗಿದ್ದರೆ ಈ ಯಕ್ಷ ಪ್ರಶ್ನೆಗೆ ಈಗ ಉತ್ತರ ಸಿಗುತ್ತಿತ್ತು. ಆದರೆ, ಈ ತೊಡಕಿನಿಂದ ಅವರು ಸಹ ಬ್ರೇಕ್​ ತೆಗೆದುಕೊಂಡಿದ್ದು ಸದ್ಯ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

ಇದನ್ನೂ ಓದಿ: ಇಂದಿನಿಂದ ರಾಜ್ಯದಲ್ಲಿ ಚಿತ್ರಮಂದಿರಗಳು ಸ್ತಬ್ಧ: ಮತ್ತೆ ಶುರುವಾಗುವುದೆಂದು?

ಇದರ ಜೊತೆಗೆ ಗೋಲ್ಡನ್​ ಸ್ಟಾರ್​ ಗಣೇಶ್ ಅವರ 'ತ್ರಿಬ್ಬಲ್ ರೈಡಿಂಗ್', ಶರಣ್ ಅಭಿನಯದ 'ಗುರು ಶಿಷ್ಯರು', ವಿನಯ್ ರಾಜ್​​ಕುಮಾರ್ ಅವರ 'ಅಂದೊಂದಿತ್ತು ಕಾಲ' ಹೀಗೆ... ಸ್ಟಾರ್ ನಟರು ಸೇರಿದಂತೆ ಯುವ ನಟರ ಸಿನಿಮಾಗಳು ಕೊರೊನಾ ಕಾರಣಾಥರದಿಂದ ಚಿತ್ರೀಕರಣವನ್ನ ಸ್ಥಗಿತ ಮಾಡಿದ್ದಾರೆ.

ಗಣೇಶ್​

ABOUT THE AUTHOR

...view details