ಪ್ರಾಣಿ, ಪಕ್ಷಿಗಳನ್ನು ಹೆಚ್ಚಾಗಿ ಪ್ರೀತಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಡೀಪುರ ಅರಣ್ಯದ ಕಾಡ್ಗಿಚ್ಚು ನಂದಿಸಲು ನೆರವಾಗುವಂತೆ ಸ್ವಯಂಸೇವಕರಲ್ಲಿ ಮನವಿ ಮಾಡಿದ್ದಾರೆ.
ಆಕಸ್ಮಿಕವಾಗಿ ಹುಟ್ಟಿಕೊಂಡ ಕಾಡ್ಗಿಚ್ಚಿಗೆ ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯ ಸುಟ್ಟು ಕರಗಲಾಗಿದೆ. ಸುಮಾರು ೨೫೦೦ ಎಕರೆ ಪ್ರದೇಶದ ಅರಣ್ಯದಲ್ಲಿ ಬೆಂಕಿಯ ಕೆನ್ನಾಲಿಗೆ ಸುತ್ತುವರೆದಿದ್ದು ಪ್ರಾಣಿಗಳು ಜೀವಂತ ಸುಟ್ಟು ಬೂದಿಯಾಗಿವೆ. ಜೊತೆಗೆ ಭಾರೀ ಪ್ರಮಾಣದ ಅರಣ್ಯ ಸಂಪತ್ತು ಕೂಡಾ ನಾಶವಾಗಿದೆ.
ಸದ್ಯ ಕಾಡ್ಗಿಚ್ಚನ್ನು ನಂದಿಸಲು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕದಳ ನಿರಂತರ ಪ್ರಯತ್ನ ಪಡುತ್ತಿದ್ದಾರೆ. ಈಗ ಕಾಡ್ಗಿಚ್ಚನ್ನು ನಂದಿಸಿ ಪ್ರಾಣಿಸಂಕುಲವನ್ನು ರಕ್ಷಿಸಲು ಅರಣ್ಯ ಇಲಾಖೆ ರಾಯಭಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವಯಂ ಸೇವಕರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
'ಬಂಡೀಪುರ ಅಭಯಾರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನ್ಯಜೀವಿ ಸಂಕುಲಕ್ಕೆ ತೊಂದರೆಯುಂಟಾಗಿದೆ. ಸರ್ಕಾರ, ಅರಣ್ಯ ಇಲಾಖೆ ಹಾಗೂ ಹಲವಾರು ಸ್ವಯಂಸೇವಕರು ಜೊತೆಗೂಡಿ ಈ ಅವಘಡವನ್ನು ಶಮನ ಮಾಡಲು ಯತ್ನಿಸುತ್ತಿದ್ದಾರೆ. ಆಸಕ್ತಿಯುಳ್ಳ ಸ್ವಯಂಸೇವಕರು ದಯಮಾಡಿ ಈ ಅಭಿಯಾನದಲ್ಲಿ ನೆರವಾಗಬೇಕಾಗಿ ವಿನಂತಿ' ಎಂದು ದರ್ಶನ್ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.