ಕರ್ನಾಟಕ

karnataka

ETV Bharat / sitara

ಕನ್ನಡ ಚಿತ್ರರಂಗದ ಧಣಿವಿಲ್ಲದ ಧಣಿ ಬಿ.ಆರ್. ಪಂತುಲು ಸವಿ ನೆನಪು

ಧಣಿವಿಲ್ಲದ ಧಣಿ ಎಂದೇ ಹೆಸರಾದ, ಪುಟ್ಟಣ್ಣ ಕಣಗಾಲ್ ಗುರುಗಳಾದ ಬಿ.ಆರ್. ಪಂತುಲು ಕನ್ನಡ ಚಿತ್ರರಂಗ ಕಂಡ ಮಹಾನ್ ನಿರ್ದೇಶನ, ನಟ, ನಿರ್ಮಾಪಕ, ಬರಹಗಾರ. ಜುಲೈ 26 ಪಂತುಲು ಅವರ 100ನೇ ಜನ್ಮದಿನೋತ್ಸವ.

By

Published : Jul 27, 2020, 2:03 PM IST

Updated : Jul 28, 2020, 9:23 AM IST

BR Panthulu 110th Birth anniversary
ಬಿ.ಆರ್. ಪಂತುಲು ಸವಿ ನೆನಪು

ಕನ್ನಡ ಚಿತ್ರರಂಗ ಮಾತ್ರವಲ್ಲದೆ, ತಮಿಳು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿರುವ ಕೆಲವು ನಿರ್ದೇಶಕರ ಪೈಕಿ ಬಿ.ಆರ್. ಪಂತುಲು ಅವರು ಪ್ರಥಮ ಸ್ಥಾನ ಪಡೆಯುತ್ತಾರೆ. ಬಿ.ಆರ್. ಪಂತುಲು ಮೂಲತ: ಕರ್ನಾಟಕದ ಕೋಲಾರ ಜಿಲ್ಲೆಯ ಬುದಗೂರು ತಾಲೂಕಿನವರು.

ಬಿ.ಆರ್. ಪಂತುಲು ಸವಿ ನೆನಪು

ಬಿ.ಆರ್. ಪಂತುಲು 26 ಜುಲೈ 1910 ರಂದು ಜನಿಸಿದರು. ಅವರ ವೃತ್ತಿ ಜೀವನದಲ್ಲಿ 57 ಸಿನಿಮಾಗಳನ್ನು ನಿರ್ದೇಶನ ಮಾಡುವುದರ ಜೊತೆಗೆ ಅಭಿನಯ, ಕಥೆ, ಚಿತ್ರಕಥೆ, ನಿರ್ಮಾಣ ಸಂಸ್ಥೆ ಸ್ಥಾಪಿಸಿದವರು. ಈ ಮೂಲಕ ಅವರು ಧಣಿವಿಲ್ಲದ ಧಣಿ ಎಂದೇ ಕರೆಸಿಕೊಂಡರು.

ಕರ್ನಾಟಕ ಚಲನಚಿತ್ರ ಅಕಾಡೆಮಿ 2010 ರಲ್ಲಿ ಬಿ.ಆರ್. ಪಂತುಲು ಅವರ 100 ವರ್ಷದ ಜನ್ಮದಿನದ ಸಮಾರಂಭ ಏರ್ಪಾಡು ಮಾಡಿತ್ತು. ಟಿ.ಎಸ್​​​. ನಾಗಾಭರಣ ಅವರು ಅಕಾಡೆಮಿ ಅಧ್ಯಕ್ಷ ಆಗಿದ್ದಾಗ ಬಿ.ಆರ್. ಪಂತುಲು ಚಿತ್ರೋತ್ಸವದಲ್ಲಿ 19 ಸಿನಿಮಾಗಳ ಪ್ರದರ್ಶನ ಹಾಗೂ ಚರ್ಚೆ ಬಿಟ್ಟರೆ ಇನ್ಯಾವ ಕಾರ್ಯಕ್ರಮಗಳು ಆಗಲಿಲ್ಲ. ಆ ವೇಳೆ ಬಿ.ಆರ್. ಪಂತುಲು ಅವರ ಮಗಳು ಹೆಸರಾಂತ ತಮಿಳು ಸಿನಿಮಾ ಛಾಯಾಗ್ರಹಕಿ ಹಾಗೂ ನಿರ್ದೇಶಕಿ ಬಿ.ಆರ್. ವಿಜಯಲಕ್ಷ್ಮಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಚಿತ್ರರಂಗ ಕಂಡ ಶ್ರೇಷ್ಠ ವ್ಯಕ್ತಿಯ ಬಗ್ಗೆ ಮತ್ತಷ್ಟು ಆಸಕ್ತಿಕರ ವಿಚಾರಗಳು ಇಲ್ಲಿವೆ.

ಬಿ.ಆರ್. ಪಂತುಲು ಸವಿ ನೆನಪು

ಬಿ.ಆರ್. ಪಂತುಲು ಅವರ ಸಿನಿಮಾಗಳು ಅಂದರೆ ಕನ್ನಡಿಗರಿಗೆ ಜ್ಞಾಪಕ ಬರುವುದು 'ಸ್ಕೂಲ್ ಮಾಸ್ಟರ್​​'. 1957 ರಲ್ಲಿ ನಿರ್ದೇಶನ ಮಾಡಿದ ಚಿತ್ರ ಇದು. ಆ ಸಿನಿಮಾ ಹಲವಾರು ಭಾಷೆಗಳಲ್ಲಿ ರೀಮೇಕ್ ಆಯ್ತು. ಆ ಸಿನಿಮಾದಲ್ಲಿ ತಮಿಳು ಚಿತ್ರರಂಗದ ಆರಾಧ್ಯ ದೈವ ಶಿವಾಜಿ ಗಣೇಶನ್ ಕೂಡಾ ಅಭಿನಯ ಮಾಡಿದ್ದರು. ಅಲ್ಲದೆ 'ಸ್ವಾಮಿ ದೇವನೆ ಲೋಕ ಪಾಲನೆ....ಪ್ರಾರ್ಥನೆ ಗೀತೆ' ಜನಪ್ರಿಯ ಆದಷ್ಟು ಇನ್ಯಾವ ಪ್ರಾರ್ಥನೆ ಗೀತೆ ಆಗಲಿಲ್ಲ. ಸೋಸಲೆ ಅಯ್ಯಾ ಶಾಸ್ತ್ರಿ ಅವರು ರಚಿಸಿದ ಹಾಡು ಅದು. ಈ ಸಿನಿಮಾ ರಾಷ್ಟ್ರ ಪ್ರಶಸ್ತಿ ಜೊತೆಗೆ ಅನೇಕ ಗೌರವಗಳನ್ನು ಸಂಪಾದಿಸಿತು. 2003 ರಲ್ಲಿ ಹಿಂದಿಯಲ್ಲಿ ತಯಾರಾದ ಬಹು ತಾರಾಗಣದ ‘ಬಾಗ್ಭನ್’ ಚಿತ್ರದಲ್ಲಿ 'ಸ್ಕೂಲ್ ಮಾಸ್ಟರ್' ಚಿತ್ರದ ಕೆಲವೊಂದು ಅಂಶಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಕನ್ನಡದಲ್ಲಿ ಮತ್ತೆ ‘ಈ ಬಂಧನ’ ಅದೇ ಶೈಲಿಯಲ್ಲಿ ನಿರ್ಮಾಣ ಆಗಿತ್ತು.

ಬಿ.ಆರ್. ಪಂತುಲು ಅವರು ಕನ್ನಡದಲ್ಲಿ 1970 ರಲ್ಲಿ 'ಶ್ರೀ ಕೃಷ್ಣದೇವರಾಯ' ಚಿತ್ರವನ್ನು ಮಾಡಿದರೆ, ತಮಿಳು ಚಿತ್ರರಂಗದಲ್ಲಿ 1959 ರಲ್ಲಿ ಶಿವಾಜಿ ಗಣೇಶನ್ ಅವರ ಆಲ್ ಟೈಮ್ ಹಿಟ್ ಸಿನಿಮಾ 'ವೀರಪಾಂಡ್ಯ ಕಟ್ಟಬೊಮ್ಮನ್' ಸಿನಿಮಾ ನಿರ್ದೇಶನ ಮಾಡಿ ಹೆಸರು ಗಳಿಸಿದರು.

ಬಿ.ಆರ್. ಪಂತುಲು ಸವಿ ನೆನಪು

ಆಗಿನ ಮದ್ರಾಸ್​​​​ನಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದ ಪಂತುಲು ಅವರಿಗೆ ತೆಲುಗು ಹಾಗೂ ತಮಿಳು ಭಾಷೆ ಸಹ ತಿಳಿದಿತ್ತು. ಕುಪ್ಪಮ್ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿಕೊಂಡ ನಂತರ ಮಕ್ಕಳಿಗೆ ಪಾಠ ಹೇಳಿಕೊಡುವುದರ ಬದಲು ನಾಟಕ ಅಭಿನಯದ ಬಗ್ಗೆ ಪಾಠ ನಡೆಸುತ್ತಾರೆಂದು ಇವರನ್ನು ಶಾಲೆಯಿಂದ ವಜಾ ಮಾಡುವ ನಿರ್ಧಾರ ಮಾಡಲಾಯ್ತು. ಆದರೆ ಪಂತುಲು ನೀವು ತೆಗೆಯುವ ಮುನ್ನ ನಾನೇ ರಾಜೀನಾಮೆ ನೀಡುತ್ತೇನೆ ಎಂದು ಕೆಲಸದಿಂದ ಹೊರಬಂದರು. ಶಾಲೆ ಬಿಟ್ಟ ನಂತರ ಬಿ.ಆರ್. ಪಂತುಲು ನಾಟಕಗಳನ್ನು ಬರೆಯಲು ಆರಂಭಿಸಿದರು.

ಬಿ.ಆರ್. ಪಂತುಲು ಸವಿ ನೆನಪು

ಬಿ.ಆರ್. ಪಂತುಲು ರಚನೆಯ ‘ಸಂಸಾರ ನೌಕೆ’ ಚಂದ್ರಕಲಾ ನಾಟಕ ಮಂಡಳಿಯಲ್ಲಿ ಪ್ರದರ್ಶನ ಆಯಿತು. ಹೆಚ್​​​.ಎಲ್​​.ಎನ್​​​​​​​​​ ಸಿಂಹ, ಪಾಪಯ್ಯ, ಮಾಧವ ರಾವ್, ಬಿಂದು ರಾವ್ ಇವರ ಪ್ರೋತ್ಸಾಹಕ್ಕೆ ನಿಂತರು. ಮದ್ರಾಸಿನ ಸೌಂದರ್ಯ ಹಾಲ್​​​ನಲ್ಲಿ 'ಸಂಸಾರ ನೌಕೆ' ಪ್ರದರ್ಶನ ಆದಾಗ, ನಿರ್ಮಾಪಕ ಎ.ವಿ. ಎಂ ಚೆಟ್ಟಿಯಾರ್ ಈ ನಾಟಕವನ್ನು ನೋಡಿ ಬಿ.ಆರ್. ಪಂತುಲು ಅವರಿಗೆ ಶಹಬ್ಬಾಸ್ ಹೇಳಿದ್ದರು. ನಂತರ ಈ ಚಿತ್ರ ಸಿನಿಮಾವಾಗಿ ತಯಾರಾಯಿತು. ಕೇವಲ 22 ಸಾವಿರ ರೂಪಾಯಿ ಬಜೆಟ್​​​​ನಲ್ಲಿ ತಯಾರಾದ 'ಸಂಸಾರ ನೌಕೆ' ಬಾಕ್ಸ್​ ಆಫೀಸಿನಲ್ಲಿ 3.5 ಲಕ್ಷ ರೂಪಾಯಿ ಗಳಿಸಿ ದಾಖಲೆ ಮಾಡಿತು.

ಬಿ.ಆರ್. ಪಂತುಲು ಸವಿ ನೆನಪು

1944 ರಲ್ಲಿ ಬಿ.ಆರ್. ಪಂತುಲು ಪದ್ಮಿನಿ ಪಿಕ್ಚರ್ ಸಂಸ್ಥೆಯನ್ನು ಹುಟ್ಟುಹಾಕಿದರು. 'ಮೊದಲ ತೇದಿ'ಈ ನಿರ್ಮಾಣದ ಸಂಸ್ಥೆಯಲ್ಲಿ ತಯಾರಾದ ಮೊದಲ ಚಿತ್ರ. 1957 ರಲ್ಲಿ 'ಸ್ಕೂಲ್ ಮಾಸ್ಟರ್' ನಿರ್ದೇಶನದ ನಂತರ ಮತ್ತೆ ಪಂತುಲು ಅವರ ಸ್ನೇಹ ಕೂಟ ದೊಡ್ಡದಾಯಿತು. ಚಿ. ಉದಯಶಂಕರ್ ಅವರ ತಂದೆ ಶ್ರೀ ಸದಾಶಿವಯ್ಯ ಸಂಭಾಷಣೆ, ಚಿತ್ರಕಥೆ, ಗೀತ ಸಾಹಿತ್ಯವಿದ್ದ ಬಿ. ಸರೋಜಾ ದೇವಿ, ಉದಯ ಕುಮಾರ್, ಸಾಹುಕಾರ್ ಜಾನಕಿ ಅಭಿನಯದ ರತ್ನಗಿರಿ ರಹಸ್ಯ ಸಿನಿಮಾ ಕೇವಲ 35000 ರೂಪಾಯಿ ಅಲ್ಲಿ ನಿರ್ಮಾಣ ಆಗಿದ್ದು 11.5 ಲಕ್ಷ ರೂಪಾಯಿ ಸಂಪಾದಿಸಿ ದೊಡ್ಡ ಯಶಸ್ಸನ್ನು ಪಡೆದು ದಾಖಲೆ ಕೂಡಾ ನಿರ್ಮಿಸಿತು.

ಬಿ.ಆರ್. ಪಂತುಲು ಸವಿ ನೆನಪು

ಕನ್ನಡ ಚಿತ್ರರಂಗದ ಮೊದಲ ನಿರ್ಮಾಪಕಿ ಎಂ. ವಿ. ರಾಜಮ್ಮ ಅವರು 1963 ರಲ್ಲಿ 'ರಾಧಾರಮಣ' ಚಿತ್ರವನ್ನು ನಿರ್ದೇಶಿಸಲು ಬಿ.ಆರ್. ಪಂತುಲು ಸಹಾಯ ಮಾಡಿದರು. ಆ ಚಿತ್ರದ ಮೂಲಕ ಬಾಲಕೃಷ್ಣ ಚಿತ್ರರಂಗ ಪ್ರವೇಶಿಸಿದರು. ಬಿ.ಆರ್. ಪಂತುಲು ಹಾಗೂ ಎಂ. ವಿ. ರಾಜಮ್ಮ ಅನೇಕ ಸಿನಿಮಾಗಳಲ್ಲಿ ಜೊತೆಗೆ ನಟಿಸಿದ್ದಾರೆ.

ಬಿ.ಆರ್. ಪಂತುಲು ಸವಿ ನೆನಪು

ಬಿ.ಆರ್. ಪಂತುಲು ಅವರು ಜಿ.ವಿ. ಅಯ್ಯರ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಕು.ರಾ.ಸೀತಾರಾಮ ಶಾಸ್ತ್ರಿ, ವಿಜಯ ನಾರಸಿಂಹ ಮತ್ತೊಬ್ಬ ತಮಿಳು ದಿಗ್ಗಜ, ಜೊತೆಗೆ ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಸೇರಿ ಕಥೆ, ಚಿತ್ರಕಥೆ ಬಗ್ಗೆ ಚರ್ಚಿಸುತ್ತಿದ್ದರು. ಪ್ರತಿ ಸನ್ನಿವೇಶಕ್ಕೂ ಈ ಐವರು ಚರ್ಚೆ ನಡೆಸುತ್ತಿದ್ದರು. ನಂತರ ಓಟಿಂಗ್ ಆಧಾರದ ಮೇಲೆ ಉತ್ತಮವಾದದ್ದನ್ನು ಆಯ್ಕೆ ಮಾಡುತ್ತಿದ್ದರು. ಬಿ.ಆರ್. ಪಂತುಲು ಅವರ 'ಕಿತ್ತೂರು ಚೆನ್ನಮ್ಮ' ಇಂದಿಗೂ ಜನಪ್ರಿಯ, ಕಲ್ಪನ ಅವರನ್ನು 'ಸಾಕು ಮಗಳು' ಚಿತ್ರದಿಂದ ಚಿತ್ರರಂಗಕ್ಕೆ ಕರೆತಂದಿದ್ದು ಬಿ.ಆರ್. ಪಂತುಲು ಅವರೇ. ಮಕ್ಕಳ ರಾಜ್ಯ, ಅಮ್ಮ, ಗಾಳಿ ಗೋಪುರ, ಗಂಡೊಂದು ಹೆಣ್ಣಾರು, ಚಿನ್ನದ ಗೊಂಬೆ, ಚಿನ್ನಾರಿ ಪುಟ್ಟಣ್ಣ, ಅಳಿಯ ಗೆಳೆಯ, ಮಾಲತಿ ಮಾಧವ, ಒಂದು ಹೆಣ್ಣಿನ ಕಥೆ, ಹೀಗೆ ಒಂದರ ಹಿಂದೆ ಒಂದು ಚಿತ್ರಗಳನ್ನು ನಿರ್ದೇಶನ ಮಾಡಿದರು.

ಬಿ.ಆರ್. ಪಂತುಲು ಸವಿ ನೆನಪು

ಆಗಿನ ಕಾಲದಲ್ಲೇ ರಾಜಸ್ಥಾನದ ಜೈಪುರದ ಶೇಷ್​ ಮಹಲ್​​​ ಪ್ಯಾಲೇಸ್ ಬುಕ್ ಮಾಡಿಕೊಂಡು ಸುಮಾರು 58 ದಿನಗಳ ಕಾಲ 'ಶ್ರೀ ಕೃಷ್ಣದೇವರಾಯ' ಸಿನಿಮಾ ಚಿತ್ರೀಕರಣ ಮಾಡಿದ ಕೀರ್ತಿ ಪಂತುಲು ಅವರಿಗೆ ಸಲ್ಲುತ್ತದೆ. ಈ ವೇಳೆ ಆ ಚಿತ್ರದಲ್ಲಿ ನಟಿಸಿದ್ದ ನಟರ ಕುಟುಂಬದವರನ್ನೂ ಆ ಜಾಗಕ್ಕೆ ಕರೆಸಿಕೊಂಡಿದ್ದರು. ಇದು ಕನ್ನಡ ಚಿತ್ರರಂಗದ ವೈಭವವನ್ನು ತೋರಿಸುತ್ತದೆ. 'ಶ್ರೀ ಕೃಷ್ಣ ದೇವರಾಯ' ಚಿತ್ರಕ್ಕೆ ಜಯಲಲಿತಾ ಅವರನ್ನು ಕರೆತರಬೇಕು ಎಂಬ ಪಂತುಲು ಅವರ ಪ್ರಯತ್ನ ಫಲಿಸಲಿಲ್ಲ. ಆ ಜಾಗಕ್ಕೆ ಭಾರತಿ ಅವರು ಬಂದರು. ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಸಿನಿಮಾಗಳು ಮಾತ್ರವಲ್ಲದೆ, ಎಂ.ಜಿ. ರಾಮಚಂದ್ರನ್ ಅವರ ಆಯರತಿಲ್ ಒರುವಣ್, ರಹಸ್ಯ ಪೊಲೀಸ್, ತೇಡಿ ವಂದ ಮಾಪಿಳ್ಳೈ, ಮಧುರೈ ಮೇಟಿಯ ಸುಂದರ ಪಾಂಡಿಯನ್ ಸಿನಿಮಾಗಳನ್ನು ಬಿ.ಆರ್. ಪಂತುಲು ನಿರ್ದೇಶಿಸಿದರು. ಇದು ಅವರನ್ನು ಉತ್ತುಂಗದ ಸ್ಥಾನದಲ್ಲಿ ತಂದು ನಿಲ್ಲಿಸಿತು.

ಬಿ.ಆರ್. ಪಂತುಲು ಸವಿ ನೆನಪು

ಅಕ್ಟೋಬರ್ 8, 1974 ಬಿ.ಆರ್. ಪಂತುಲು ನಿಧನರಾದರು. ಇವರ ಪತ್ನಿ ಕಮಲಮ್ಮ, ಮಗ ರವಿ ಹಾಗೂ ಮಗಳು ಬಿ.ಆರ್​. ವಿಜಯಲಕ್ಷ್ಮಿ. ಬಿ.ಆರ್. ಪಂತುಲು ಅವರ ಪುತ್ರಿ ಬಿ.ಆರ್​. ವಿಜಯಲಕ್ಷ್ಮಿ ಏಷ್ಯಾದ ಮೊದಲ ಮಹಿಳಾ ಛಾಯಾಗ್ರಾಹಕಿ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಾಗಿದೆ. ಇವರು ಸುಮಾರು 20 ತಮಿಳು ಸಿನಿಮಾಗಳಿಗೆ ಛಾಯಾಗ್ರಹಣ ಮಾತ್ರವಲ್ಲದೆ ಕೆಲವೊಂದು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ಬಿ.ಆರ್. ಪಂತುಲು ಅಂತಹ ದಿಗ್ಗಜ ನಿರ್ದೇಶಕ, ನಟ, ನಿರ್ಮಾಪಕ, ಬರಹಗಾರ ಹಾಗೂ ಹಲವಾರು ಯಶಸ್ಸುಗಳಿಗೆ ಕಾರಣಕರ್ತ ಆದವರ ಹೆಸರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಯಾವುದೇ ಪ್ರಶಸ್ತಿ ಬಗ್ಗೆ ಗಮನ ಹರಿಸದೆ ಇರುವ ಬಗ್ಗೆ ಖ್ಯಾತ ನಟ ಶ್ರೀನಿವಾಸಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಇವರು ಪುಟ್ಟಣ್ಣ ಕಣಗಾಲ್​ರಂತ ಮಹಾನ್ ನಿರ್ದೇಶಕರಿಗೆ ಗುರುಗಳು. ಅವರ ಸೇವೆಯನ್ನು ಗುರುತಿಸಿ ಬಿ.ಆರ್. ಪಂತುಲು ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಬೇಕು ಎಂದು ಶ್ರೀನಿವಾಸ್ ಮೂರ್ತಿ ಆಗ್ರಹಿಸಿದ್ದಾರೆ.

Last Updated : Jul 28, 2020, 9:23 AM IST

ABOUT THE AUTHOR

...view details