ಕರ್ನಾಟಕ

karnataka

'ಯುವರತ್ನ'ಗೆ ಜೈ ಹೋ ಎಂದ ಅಭಿಮಾನಿಗಳು: ಅಪ್ಪು ನಟನೆಗೆ ಫುಲ್ ಮಾರ್ಕ್ಸ್

By

Published : Apr 1, 2021, 5:24 PM IST

ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್ ನಟನೆಯ ಬಹು ನಿರೀಕ್ಷಿತ ಯುವರತ್ನ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಅಪ್ಪು ಅಭಿಮಾನಿಗಳು ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Appu fans reaction about Yuvaratna Cinema
'ಯುವರತ್ನ'ಗೆ ಜೈ ಹೋ ಎಂದ ಅಭಿಮಾನಿಗಳು

ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಬಹು ನಿರೀಕ್ಷಿತ ಚಿತ್ರ 'ಯುವರತ್ನ'ಗೆ ಪ್ರೇಕ್ಷಕರು ಜೈ ಹೋ ಅಂದಿದ್ದಾರೆ.

ರಾಜಕುಮಾರ ಸಿನಿಮಾ ಬಳಿಕ ಪುನೀತ್ ರಾಜ್‍ಕುಮಾರ್ ಯುವರತ್ನ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನೋದು ಅಭಿಮಾನಿಗಳು ಮಾತ್ರವಲ್ಲದೆ, ಇಡೀ ಗಾಂಧಿನಗರದಲ್ಲಿ ಕುತೂಹಲ ಮೂಡಿಸಿತ್ತು. ಈ ಕ್ಯೂರಿಯಾಸಿಟಿಗೆ ಯುವರತ್ನ ಸಿನಿಮಾದಲ್ಲಿ ಉತ್ತರ ಸಿಕ್ಕಿದೆ. ಪವರ್ ಸ್ಟಾರ್ ಅಭಿಮಾನಿಗಳು, ಪೋಷಕರು, ವಿದ್ಯೆ ಹೇಳಿ ಕೊಡುವ ಗುರುಗಳು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೆಣೆದಿರುವ ಕಥೆಯೇ ಯುವರತ್ನ.

'ಯುವರತ್ನ'ಗೆ ಜೈ ಹೋ ಎಂದ ಅಭಿಮಾನಿಗಳು

ಪ್ರತಿಷ್ಠೆಯ ಜೊತೆಗೆ ಶಿಕ್ಷಣ ವ್ಯವಸ್ಥೆ ಯಾವ ರೀತಿ ವ್ಯಾಪಾರೀಕರಣ ಆಗಿದೆ ಎಂಬುದನ್ನು ನಿರ್ದೇಶಕ ಸಂತೋಷ್ ಆನಂದ್, ಪುನೀತ್ ರಾಜ್‍ಕುಮಾರ್ ಮೂಲಕ ಹೇಳಿಸಿರುವ ಪರಿ ಮೆಚ್ಚುಗೆ ಪಡೆದಿದೆ. ಒಂದು ಸರ್ಕಾರಿ ಕಾಲೇಜಿನಲ್ಲಿ ಅನೇಕ ಅಕ್ರಮಗಳು ನಡೆಯುತ್ತಿರುತ್ತವೆ. ಹೇಗಾದರೂ ಮಾಡಿ ಕಾಲೇಜು​ ಮುಚ್ಚಿಸಬೇಕು ಎಂಬುದು ಖಳನಾಯಕರ ಗುರಿ. ಆದರೆ, ಅದಕ್ಕೆ ಅಡ್ಡಿಯಾಗಿ ನಿಲ್ಲುವ ಕಥಾನಾಯಕ ಯುವರಾಜ್,​ ಅಕ್ರಮ ಮಾಡುವವರನ್ನು ಹೇಗೆ ಮಟ್ಟಹಾಕುತ್ತಾನೆ ಎಂಬುದು ಯುವರತ್ನದಲ್ಲಿ ತೋರಿಸಲಾಗಿದೆ. ಡ್ಯಾನ್ಸ್​, ಫೈಟ್​, ಫ್ಯಾಮಿಲಿ ಸೆಂಟಿಮೆಂಟ್​ ಸೇರಿದಂತೆ ಸಂಪೂರ್ಣ ಪ್ಯಾಕೇಜ್ ಯುವರತ್ನ ಚಿತ್ರದಲ್ಲಿದೆ.

ಓದಿ : ನಟ ಪ್ರಜ್ವಲ್​ ದೇವರಾಜ್​, ಪತ್ನಿ ರಾಗಿಣಿಗೆ ಕೊರೊನಾ ಸೋಂಕು

ಪವರ್ ಸ್ಟಾರ್ ರಿಯಲ್​ ಲೈಫ್​ಗೆ ಕನೆಕ್ಟ್​ ಆಗುವಂತಹ ಅನೇಕ ಡೈಲಾಗ್​ಗಳು ಯುವರತ್ನದಲ್ಲಿದೆ. ಕಾಲೇಜು ವಿದ್ಯಾರ್ಥಿಯಾಗಿ ಹಾಗೂ ವಿದ್ಯಾರ್ಥಿಗಳು ಮೆಚ್ಚುವ ಪ್ರೊಫೆಸರ್​ ಆಗಿ ಎರಡೂ ಗೆಟಪ್​ನಲ್ಲಿ ಪುನೀತ್​ ಮಿಂಚಿದ್ದಾರೆ. ಮಕ್ಕಳಿಗೆ ಪಾಠ ಮಾಡಿ ವಿದ್ಯೆ ಕಲಿಸಲೂ ಸೈ, ವಿಲನ್​ಗಳ ಮೂಳೆ ಮುರಿದು ಬುದ್ಧಿ ಕಲಿಸಲೂ ಸೈ ಎಂಬಂತೆ ಪುನೀತ್ ಬಿಗ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ‌.

ಪವರ್ ಸ್ಟಾರ್ ಜೊತೆ ಟಾಲಿವುಡ್ ಸುಂದರಿ ಸಯ್ಯೇಶಾ ಕೆಮಿಸ್ಟ್ರಿ ವರ್ಕ್ ಔಟ್ ಆಗಿದೆ. ಚಿತ್ರದಲ್ಲಿ ಜನಪ್ರಿಯ ಕಲಾವಿದರ ತಂಡವೇ ಇದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ಸರ್ಕಾರಿ ಕಾಲೇಜಿನ ಉಳಿವಿಗಾಗಿ ಹಗಲಿರುಳು ಹೋರಾಡುವ ಪ್ರಾಂಶುಪಾಲರ ಪಾತ್ರದಲ್ಲಿ ಪ್ರಕಾಶ್​ ರೈ ಮಿಂಚಿದ್ದಾರೆ. ಸ್ಟೈಲಿಷ್ ವಿಲನ್ ಆಗಿ ಡಾಲಿ ಧನಂಜಯ್​ ತಮ್ಮ ಕ್ಯಾರೆಕ್ಟರ್​ನಲ್ಲಿ ಗಮನ ಸೆಳೆಯುತ್ತಾರೆ. ಸಾಯಿ ಕುಮಾರ್​, ಅವಿನಾಶ್​, ಸುಧಾರಾಣಿ, ಪ್ರಕಾಶ್​ ಬೆಳವಾಡಿ, ರಾಜೇಶ್​ ನಟರಂಗ ಮುಂತಾದ ಸ್ಟಾರ್​ ಕಲಾವಿದರಿಂದಾಗಿ ಯುವರತ್ನನ ಮೆರುಗು ಹೆಚ್ಚಿದೆ.

ದಿಗಂತ್​, ಸೋನು ಗೌಡ, ತಾರಕ್​ ಪೊನ್ನಪ್ಪ ತಮಗೆ ಸಿಕ್ಕಿರುವ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಪವರ್​ ಆಫ್​ ಯೂತ್​ ಹಾಗೂ ನೀನಾದೆನಾ.. ಹಾಡಿನ ಮೂಲಕ ಸಂಗೀತ ನಿರ್ದೇಶಕ ಎಸ್​. ಥಮನ್​ ಹೆಚ್ಚು ಸ್ಕೋರ್​ ಮಾಡಿದ್ದಾರೆ. ಹಿನ್ನೆಲೆ ಸಂಗೀತವೂ ಗಮನ ಸಳೆಯುವಂತಿದೆ. ಛಾಯಾಗ್ರಹಕ ವೆಂಕಟೇಶ್​ ಕೆಲಸ ಅಚ್ಚುಕಟ್ಟಾಗಿದೆ. ಸಂತೋಷ್​ ಆನಂದ್​ರಾಮ್​ ಬರೆದ ಸಂಭಾಷಣೆಗಳು ಅಪ್ಪು ಅಭಿಮಾನಿಗಳಿಂದ ಶಿಳ್ಳೆ, ಚೆಪ್ಪಾಳೆ ಗಿಟ್ಟಿಸಿವೆ.

ಬಹಳ ಅದ್ಧೂರಿಯಾಗಿ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಂಗದೂರ್ ನಿರ್ಮಾಣ ಮಾಡಿರುವುದು ಯುವರತ್ನನ ಅದ್ಧೂರಿತನಕ್ಕೆ ಸಾಕ್ಷಿಯಾಗಿದೆ. ಒಟ್ಟಾರೆ ಯುವರತ್ನ ಕುಟುಂಬ ಸಮೇತರಾಗಿ ಥಿಯೇಟರ್​ಗೆ ಬಂದು ನೋಡಬಹುದಾದ ಸಿನಿಮಾ.

ABOUT THE AUTHOR

...view details