ಭಾನುವಾರ ನಿಧನರಾದ ಯುವನಟ ಸುಶಾಂತ್ ಸಿಂಗ್ ರಜಪೂತ್ ಅಂತ್ಯಕ್ರಿಯೆ ನಿನ್ನೆ ಮುಂಬೈನಲ್ಲಿ ನೆರವೇರಿದೆ. ಸುಶಾಂತ್ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಮಾತ್ರವಲ್ಲ ಟಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲರೂ ಕಂಬನಿ ಮಿಡಿದಿದ್ದಾರೆ.
ಪ್ರಪಂಚದಲ್ಲಿ ಯಾರೂ ಪರಿಪೂರ್ಣರಲ್ಲ... ಸ್ವೀಟಿ ಭಾವನಾತ್ಮಕ ಪೋಸ್ಟ್ - Anushka shetty Instagram post
ಬಾಲಿವುಡ್ ನಟ ಸುಶಾಂತ್ ನಿಧನಕ್ಕೆ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸುಧೀರ್ಘ ಪೋಸ್ಟ್ ಬರೆದಿರುವ ಸ್ವೀಟಿ ಇನ್ನೊಬ್ಬರ ನೋವನ್ನು ಮರೆಸಲು ಪ್ರಯತ್ನಿಸೋಣ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
![ಪ್ರಪಂಚದಲ್ಲಿ ಯಾರೂ ಪರಿಪೂರ್ಣರಲ್ಲ... ಸ್ವೀಟಿ ಭಾವನಾತ್ಮಕ ಪೋಸ್ಟ್ Anushka shetty emotional post](https://etvbharatimages.akamaized.net/etvbharat/prod-images/768-512-7640278-1030-7640278-1592307038355.jpg)
ಟಾಲಿವುಡ್ ಸ್ಟಾರ್ ಅನುಷ್ಕಾ ಶೆಟ್ಟಿ ಕೂಡಾ ಸುಶಾಂತ್ ಸಾವಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಷೇರ್ ಮಾಡಿರುವ ಅನುಷ್ಕಾ ಶೆಟ್ಟಿ, ಮನಸ್ಸಿನಲ್ಲಿನ ದು:ಖಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಬೇಕು. ಇನ್ನೊಬ್ಬರ ಮಾತುಗಳನ್ನು ಕೇಳಬೇಕು. ಪ್ರಪಂಚಲ್ಲಿ ಯಾರೂ ಪರಿಪೂರ್ಣರಲ್ಲ, ನಾವೆಲ್ಲಾ ನಮಗೆ ತಿಳಿದ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ನಮಗೆ ಸರಿ ಎನ್ನಿಸಿದ ದಾರಿಯಲ್ಲಿ ನಾವು ಪ್ರಯಾಣಿಸುತ್ತೇವೆ. ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕ ಹಿಂಸೆ ಅನುಭವಿಸುತ್ತಿರುತ್ತೇವೆ. ಕೆಲವರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಕೆಲವರು ಸಮಸ್ಯೆಗಳಿಗೆ ಸೂಕ್ತ ಮಾರ್ಗ ಹುಡುಕುತ್ತಾರೆ, ಮತ್ತೆ ಕೆಲವರು ಇತರರ ಸಹಾಯ ಬಯಸುತ್ತಾರೆ. ಆದರೆ ನಾವೆಲ್ಲರೂ ಜೊತೆ ಸೇರಿ ಇದಕ್ಕಿಂತ ಉತ್ತಮ ಮಾರ್ಗದಲ್ಲಿ ಜೀವಿಸಲು ಪ್ರಯತ್ನಿಸೋಣ ಎಂದು ಅನುಷ್ಕಾ ಸಲಹೆ ನೀಡಿದ್ದಾರೆ.
ಅಷ್ಟೇ ಅಲ್ಲ, ಇನ್ನು ಮುಂದೆ ದಯೆಯಿಂದ ಬದುಕೋಣ. ನಿಮ್ಮೊಂದಿಗಿರುವವರ ಮಾತನ್ನು ಕೇಳಿ. ನಾವೆಲ್ಲರೂ ಮನುಷ್ಯರೇ, ಒಂದು ನಗು, ಮಾತನ್ನು ಕೇಳುವ ಗುಣ, ಮನಸ್ಸನ್ನು ಹಗುರ ಮಾಡುವ ಸ್ಪರ್ಶ ನಿಮ್ಮೆದುರು ಇರುವ ವ್ಯಕ್ತಿ ಜೀವನದಲ್ಲಿ ಎಷ್ಟೋ ಬದಲಾವಣೆ ತರಬಹುದು ಎಂದು ಸ್ವೀಟಿ ಬರೆದುಕೊಂಡಿದ್ದಾರೆ.