ಕೇರಳದಲ್ಲಿ ಆಹಾರ ಹುಡುಕಿಕೊಂಡು ಬಂದ ಗರ್ಭಿಣಿ ಆನೆಗೆ ಪೈನಾಪಲ್ ಹಣ್ಣಿನಲ್ಲಿ ಸಿಡಿಮದ್ದು ಕೊಟ್ಟು ಕೊಲೆ ಮಾಡಿರುವ ಹೇಯ ಕೃತ್ಯಕ್ಕೆ ದೇಶಾದ್ಯಂತ ಪ್ರಾಣಿ ಪ್ರಿಯರು ಕಂಬನಿಯ ಜೊತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಪ್ರಾಣಿ ಪ್ರಿಯರು ಮಾತ್ರವಲ್ಲದೆ ಜನ ಸಾಮಾನ್ಯರೂ, ಬಾಲಿವುಡ್ ತಾರೆಯರು ಕೂಡ ಆರೋಪಿಗಳ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.
ಆನೆ ಸಾವಿನ ಬಗ್ಗೆ ಟ್ವೀಟ್ ಮಾಡಿರುವ ಶ್ರದ್ಧಾ ಕಪೂರ್, 'ಹೇಗೆ? ಇಂಥದ್ದೆಲ್ಲ ಹೇಗೆ ನಡೆಯಲು ಸಾಧ್ಯ? ಮಾನವರಿಗೆ ಹೃದಯವೇ ಇಲ್ಲವೇ? ಈ ಸುದ್ದಿ ಕೇಳಿದ ನನ್ನ ಹೃದಯ ಒಡೆದು ಚೂರಾಗಿದೆ. ತಪ್ಪಿತಸ್ಥರಿಗೆ ಅತಿ ಘೋರವಾದ ಶಿಕ್ಷೆ ಆಗಬೇಕು' ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಕೇರಳ ಮುಖ್ಯಮಂತ್ರಿಗೂ ಟ್ಯಾಗ್ ಮಾಡಿದ್ದಾರೆ.
ನಟ ರಣದೀಪ್ ಹೂಡಾ ಕೂಡ ಘಟನೆ ಬಗ್ಗೆ ಸರಣಿ ಟ್ವೀಟ್ ಮಾಡುತ್ತಿದ್ದಾರೆ. 'ಇಂಥದ್ದನ್ನೆಲ್ಲ ನಾವು ಒಪ್ಪಿಕೊಳ್ಳಬಾರದು. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ಗೆ ಒತ್ತಾಯಿಸಿದ್ದಾರೆ.
ಇನ್ನು ಬಾಲಿವುಡ್ ನಟಿ ಅನುಷ್ಕ ಶರ್ಮಾ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಾಣಿಗಳ ಮೇಲೆ ನಡೆಯುವ ಹಲ್ಲೆ ನಿಯಂತ್ರಿಸಲು ಕಠಿಣ ಕಾನೂನು ಬೇಕು ಎಂದಿದ್ದಾರೆ.