ಕರ್ನಾಟಕ

karnataka

ತಲೈವಾ ರಜಿನಿಕಾಂತ್​ಗೆ ಒಲಿದ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ.. ಧನ್ಯವಾದ ಅರ್ಪಿಸಿದ ನಟ

By

Published : Apr 1, 2021, 10:11 AM IST

Updated : Apr 1, 2021, 1:43 PM IST

51st Dadasaheb Phalke Award will be conferred upon actor Rajinikanth
ತಲೈವಾ ರಜಿನಿಕಾಂತ್​ಗೆ ಒಲಿದ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

13:41 April 01

ಧನ್ಯವಾದ ಅರ್ಪಿಸಿದ ತಲೈವಾ

ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನನಗೆ ಪ್ರದಾನ ಮಾಡಿದ ಭಾರತ ಸರ್ಕಾರಕ್ಕೆ, ಗೌರವಾನ್ವಿತ ಮತ್ತು ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ, ಸಚಿವ ಪ್ರಕಾಶ್ ಜಾವಡೇಕರ್ ಮತ್ತು ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಈ ಪ್ರಶಸ್ತಿಯನ್ನು ನನ್ನ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ನಾನು ಅರ್ಪಿಸುತ್ತೇನೆ ಎಂದು ರಜಿನಿಕಾಂತ್ ಹೇಳಿದ್ದಾರೆ.  

10:58 April 01

ಪ್ರಧಾನಿ ಮೋದಿ ಅಭಿನಂದನೆ

ತಲೆ ತಲಾಂತರಗಳ ಕಾಲ ವೈವಿಧ್ಯಮಯ ಪಾತ್ರಗಳನ್ನು ಮಾಡಿ ಜನಪ್ರಿಯರಾಗಿರುವ, ಉತ್ತಮ, ಪ್ರೀತಿಯ ವ್ಯಕ್ತಿತ್ವ ಹೊಂದಿರುವ ತಲೈವಾ ರಜಿನಿಕಾಂತ್​ ಜೀ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವುದು ಸಂತಸದ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.  

10:09 April 01

2020ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಮಿಳು ಸೂಪರ್​ಸ್ಟಾರ್​ ರಜಿನಿಕಾಂತ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ತಿಳಿಸಿದ್ದಾರೆ.

ನವದೆಹಲಿ: ಭಾರತ ಚಿತ್ರರಂಗದಲ್ಲಿನ ಜೀವಮಾನ ಸಾಧನೆಗಾಗಿ ತಮಿಳು ಸೂಪರ್​ಸ್ಟಾರ್​ ರಜಿನಿಕಾಂತ್​ ಅವರು 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.  

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಈ ವಿಚಾರವನ್ನು ಟ್ವೀಟ್​ ಮಾಡಿ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಚಲನಚಿತ್ರ ಇತಿಹಾಸದ ಖ್ಯಾತ ನಟ ರಜಿನಿಕಾಂತ್ ಜೀ ಅವರಿಗೆ 2020ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಘೋಷಿಸಲು ಬಹಳ ಸಂತೋಷವಾಗಿದೆ. ನಟ, ನಿರ್ಮಾಪಕ ಮತ್ತು ಚಿತ್ರಕಥೆಗಾರನಾಗಿ ಅವರ ಕೊಡುಗೆ ಅಪ್ರತಿಮವಾಗಿದೆ ಎಂದು ಅವರು ಈ ವೇಳೆ ಬಣ್ಣಿಸಿದ್ದಾರೆ.  

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಸಚಿವ ಪ್ರಕಾಶ್ ಜಾವಡೇಕರ್, ದಾದಾಸಾಹೇಬ್ ಫಾಲ್ಕೆ ಅವರು ಭಾರತ ಸಿನಿಮಾ ರಂಗದ ಸಂಸ್ಥಾಪಕರು. 108 ವರ್ಷದ ಹಿಂದೆ ಅವರು ಭಾರತದ ಚೊಚ್ಚಲ 'ರಾಜಾ ಹರಿಶ್ಚಂದ್ರ' ಚಿತ್ರವನ್ನು ನಿರ್ದೇಶಿಸಿದ್ದರು. ಅಂದಿನಿಂದ ದೇಶದ ಚಿತ್ರರಂಗ ಬೆಳವಣಿಗೆ ಕಾಣುತ್ತಾ ಬಂದಿದ್ದು, ಇಂದು ಪ್ರಪಂಚದಲ್ಲೇ ತನ್ನ ಛಾಪು ಮೂಡಿಸಿದೆ. ಈ ಬಾರಿಯ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 50 ವರ್ಷಗಳಿಂದ ಭಾರತ ಚಿತ್ರರಂಗದಲ್ಲಿ ಸಾಧನೆ ಮಾಡಿರುವ ರಜಿನಿಕಾಂತ್​ಗೆ ನೀಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.  

ಗಾಯಕಿ ಆಶಾ ಭೋಂಸ್ಲೆ, ನಿರ್ದೇಶಕ ಸುಭಾಷ್ ಘಾಯ್, ನಟ-ನಿರ್ಮಾಪಕ ಮೋಹನ್ ಲಾಲ್, ನಿರ್ದೇಶಕ ಎಸ್​ ಶಂಕರ್​ ಹಾಗೂ ನಿರ್ದೇಶಕ ಬಿಸ್ವಜೀತ್ ಚಟರ್ಜಿ ಅವರನ್ನೊಳಗೊಂಡ ತೀರ್ಪುಗಾರರ ತಂಡಕ್ಕೆ ಸಚಿವರು ಧನ್ಯವಾದ ಅರ್ಪಿಸಿದ್ದಾರೆ.  

Last Updated : Apr 1, 2021, 1:43 PM IST

ABOUT THE AUTHOR

...view details