ಸಿನಿಮಾ ಕ್ಷೇತ್ರ ಎಂದರೆ ಆಡಿಯೋ ಬಿಡುಗಡೆ, ಟ್ರೇಲರ್ ಬಿಡುಗಡೆ, ಮುಹೂರ್ತ, ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ ಎಂದೆಲ್ಲ ಸಾಕಷ್ಟು ಕಾರ್ಯಕ್ರಮಗಳು ಇರುತ್ತವೆ. ಇದರಲ್ಲಿ ಕೆಲವೊಂದು ಕಾರ್ಯಕ್ರಮಗಳು ಮಾತ್ರ ಕೊನೆಯವರೆಗೂ ನೆನಪಿನಲ್ಲಿ ಉಳಿಯುತ್ತವೆ. ಇಂತದ್ದೇ ಒಂದು ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ ಏರ್ಪಾಟು ಮಾಡಿದೆ.
ಛಾಯಾಗ್ರಾಹಕರ ಸಂಘಕ್ಕೆ 35 ವರ್ಷ...ಜೆ.ಜಿ. ಕೃಷ್ಣ ಅವರಿಂದ ವಿಶೇಷ ಕಾರ್ಯಕ್ರಮ - ಫೋಟೋಗ್ರಾಫರ್ ಕೃಷ್ಣರಿಂದ ವಿಶೇಷ ಕಾರ್ಯಕ್ರಮ
ಛಾಯಾಗ್ರಾಹಕರ ಸಂಘ 35 ವಸಂತಗಳನ್ನು ಪೂರೈಸಿದೆ. ಆದರೆ, ಯಾವುದೇ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿಲ್ಲ ಎಂಬ ಬೇಸರದಿಂದ ಸಂಘದ ಅಧ್ಯಕ್ಷ ಜೆ.ಜಿ. ಕೃಷ್ಣ ಒಂದು ಯೋಜನೆ ಸಿದ್ದ ಪಡಿಸಿದ್ದಾರೆ.
ಚಿತ್ರರಂಗದಲ್ಲಿ ಶೂಟಿಂಗ್ ವೇಳೆ ಲೋಟ ತೊಳೆಯುವ, ಕಾರು ಓಡಿಸುವ, ಊಟ ಕೊಡುವ, ಹೀಗೆ ಅನೇಕ ಸ್ತರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ನೆನಪಿಸಿಕೊಂಡು ಅವರಿಗೆ ಸನ್ಮಾನ ಮಾಡುವ ಕೆಲಸಕ್ಕೆ ಜೆ.ಜಿ. ಕೃಷ್ಣ ಅವರ ತಂಡ ಮುಂದಾಗಿದೆ. ಇದುವರೆಗೂ ಯಾರ ಗಮನಕ್ಕೂ ಇಂತಹ ವ್ಯಕ್ತಿಗಳು ನೆನಪಿಗೆ ಬಂದಿಲ್ಲ. ಇವರೆಲ್ಲ ತೆರೆಮರೆಯಲ್ಲೇ ಇದ್ದು ಬಿಡುತ್ತಾರೆ. ಇನ್ನು ಈ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾಥ್ ನೀಡಿದ್ದು, ಈ ಕಾರ್ಯಕ್ರಮಕ್ಕೆ ನಾನು ಬಂದೇ ಬರುತ್ತೇನೆ ಎಂದು ಹೇಳಿದ್ದಾರೆ. ಇವರೊಂದಿಗೆ ಸುದೀಪ್, ದರ್ಶನ್, ಶಿವರಾಜ್ಕುಮಾರ್, ತಾರಾ, ಉಮಾಶ್ರೀ ಹಾಗೂ ಇನ್ನಿತರರು ಹಾಜರಿರಲಿದ್ದಾರೆ.
ಛಾಯಾಗ್ರಾಹಕರ ಸಂಘ ಇದುವರೆಗೂ 35 ವಸಂತಗಳನ್ನು ಕಳೆದಿದೆ. ಆದರೆ, ಯಾವುದೇ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿಲ್ಲ ಎಂಬ ಬೇಸರದಿಂದ ಸಂಘದ ಅಧ್ಯಕ್ಷ ಜೆ.ಜಿ. ಕೃಷ್ಣ ಒಂದು ಯೋಜನೆ ಸಿದ್ದ ಪಡಿಸಿದ್ದಾರೆ. ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಈ ಕಾರ್ಯಕ್ರಮ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಒಂದು ಸಿನಿಮಾ ತಯಾರಾಗಬೇಕೆಂದರೆ ಹಲವಾರು ಕೈಗಳು ಕೆಲಸ ಮಾಡುತ್ತದೆ. ಆದರೆ ಕಾಣಿಸದೆ ಇರುವ ವ್ಯಕ್ತಿಗಳನ್ನು ಗುರುತಿಸಿ ಅಂತವರಿಗೆ ಸನ್ಮಾನ ಹಾಗೂ ಅವರ ಪತ್ನಿಯರಿಗೆ ಸಂಪ್ರದಾಯದಂತೆ ಬಾಗಿನ ಕೊಡುವುದು ಹಾಗೂ ಇನ್ನಿತರ ಗೌರವ ಸಲ್ಲಿಸುವ ಕೆಲಸವನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಗುವುದು. ನಾನಾ ವಿಭಾಗಗಳಲ್ಲಿ ಕೆಲಸ ಮಾಡುವ ಸುಮಾರು 108 ವ್ಯಕ್ತಿಗಳನ್ನು ಗುರುತಿಸಿ ಆ ದಿನದಂದು ಸನ್ಮಾನ ಮಾಡಲಾಗುವುದು. ‘ಸಿನಿ 35’ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಛಾಯಾಗ್ರಾಹಕರ ಸಂಘಕ್ಕೆ 35 ವರ್ಷ ತುಂಬಿದ ಕಾರಣ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಹೇಳಿಕೊಂಡು ಜೆ.ಜಿ. ಕೃಷ್ಣ ಭಾವುಕರಾದರು.