ಕರ್ನಾಟಕ

karnataka

ಜೂನ್ 29 ವರೆಗಿನ ಸುಶಾಂತ್ ಡೈರಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸಹೋದರಿ

By

Published : Aug 1, 2020, 10:33 AM IST

ಸುಶಾಂತ್ ಸಿಂಗ್ ರಜಪೂತ್ ತಮ್ಮ ಮುಂದಿನ ದಿನಚರಿಯನ್ನು ಮೊದಲೇ ಪ್ಲ್ಯಾನ್ ಮಾಡಿ ಅದರಂತೆ ನಡೆಯುತ್ತಿದ್ದರು. ಜೂನ್ 29 ವರೆಗೂ ಏನೆಲ್ಲಾ ಮಾಡಬೇಕು ಎಂದು ಸುಶಾಂತ್ ಬರೆದುಕೊಂಡಿದ್ದರು. ಹಾಗಿದ್ದರೆ ಆತನಿಗೆ ಆತ್ಮಹತ್ಯೆಯಂತ ಯೋಚನೆ ಬರಲು ಸಾಧ್ಯವೇ ಇಲ್ಲ ಎಂದು ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಹೇಳಿದ್ದಾರೆ.

Sushanth sing diary
ಸುಶಾಂತ್ ಡೈರಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲಿಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಸುಶಾಂತ್ ತಂದೆ, ರಿಯಾ ಚಕ್ರವರ್ತಿ ಹಾಗೂ ಕುಟುಂಬದ ಮೇಲೆ ದೂರು ನೀಡಿದ್ದು ರಿಯಾ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.

ಮೊನ್ನೆಯಷ್ಟೇ ಸುಶಾಂತ್ ಸಹೋದರಿ ಮೀತು ಸಿಂಗ್, ರಿಯಾ ಚಕ್ರವರ್ತಿ ಸುಶಾಂತ್​​ಗೆ ಬಹಳ ಕಿರುಕುಳ ನೀಡುತ್ತಿದ್ದಳು ಎಂದು ಹೇಳಿಕೆ ನೀಡಿದ್ದರು. ಈ ನಡುವೆ ಸುಶಾಂತ್ ಮತ್ತೊಬ್ಬ ಸಹೋದರಿ ಶ್ವೇತಾ ಸಿಂಗ್ , ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. 'ಮರಣೋತ್ತರ ಪರೀಕ್ಷೆಯಲ್ಲಿ ಸೂಚಿಸಿರುವಂತೆ ಇದು ಆತ್ಮಹತ್ಯೆಯಾ ಅಥವಾ ಇದರಲ್ಲಿ ಬೇರೆ ಯಾರ ಕೈವಾಡ ಇರಬಹುದಾ..?' ಎಂದು ಪ್ರಶ್ನಾರ್ಥಕವಾಗಿ ಬರೆದುಕೊಂಡಿದ್ದಾರೆ.

'ಸುಶಾಂತ್​ ತನ್ನ ಜೀವನದಲ್ಲಿ ಎಲ್ಲವನ್ನೂ ಪ್ಲ್ಯಾನ್ ಮಾಡಿ ಅದರಂತೆ ನಡೆಯುತ್ತಿದ್ದರು. ಇಂತ ದಿನ ಇಂತಹ ಕೆಲಸಗಳನ್ನು ಮಾಡಬೇಕು ಎಂದು ತಮ್ಮ ಡೈರಿಯಲ್ಲಿ ಬರೆದಿಡುತ್ತಿದ್ದರು. ಅದರಂತೆ ಅವರು ತಪ್ಪದೆ ನಡೆಯುತ್ತಿದ್ದರು. ಅದೇ ರೀತಿ ಜೂನ್ 29 ವರೆಗೂ ಯಾವ ಕೆಲಸಗಳನ್ನು ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದರು. ಆದರೆ ಜೂನ್ 14 ರಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಇದನ್ನು ನಂಬಲು ಹೇಗೆ ಸಾಧ್ಯ..?' ಎಂದು ಶ್ವೇತಾ ಪ್ರಶ್ನಿಸಿದ್ದಾರೆ.

ಬಿಳಿ ಬಣ್ಣದ ಚಿಕ್ಕ ಬೋರ್ಡ್​ನಲ್ಲಿ ಮಾರ್ಕರ್​​ನಿಂದ ಸುಶಾಂತ್ ಬರೆದಿರುವ ದಿನಚರಿಗಳನ್ನು ಶ್ವೇತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಜೂನ್ 29 ರಿಂದ ಮೆಡಿಟೇಷನ್ ಆರಂಭಿಸಬೇಕು ಎಂದು ಬರೆಯಲಾಗಿದೆ. ಅಷ್ಟೇ ಅಲ್ಲ, ಎದ್ದ ಕೂಡಲೇ ಹಾಸಿಗೆಯನ್ನು ಸರಿ ಮಾಡುವುದು, ಪುಸ್ತಕಗಳನ್ನು ಓದುವುದು, ಕಂಟೆಂಟ್​​​ ಒರಿಯಂಟೆಡ್ ಸಿನಿಮಾ/ವೆಬ್ ಸೀರೀಸ್​​ಗಳನ್ನು ನೋಡುವುದು, ಗಿಟಾರ್ ಕಲಿಯುವುದು, ವರ್ಕೌಟ್ ಮಾಡುವುದು ಸೇರಿದಂತೆ ಕೆಲವೊಂದು ದಿನಚರಿಗಳನ್ನು ಇಲ್ಲಿ ಬರೆಯಲಾಗಿದೆ.

ಸುಶಾಂತ್ ತನ್ನ ಮುಂದಿನ ದಿನಗಳ ದಿನಚರಿಯನ್ನು ಹೀಗೆಲ್ಲಾ ಪ್ಲ್ಯಾನ್ ಮಾಡಿರುವಾಗ ಆತನ ಮನಸ್ಸಿನಲ್ಲಿ ಆತ್ಮಹತ್ಯೆ ಯೋಚನೆ ಹೇಗೆ ಬರಲು ಸಾಧ್ಯ ಎಂದು ಶ್ವೇತಾ ಪ್ರಶ್ನಿಸಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ನೆಟಿಜನ್ಸ್​​ ಸುಶಾಂತ್ ಸಾವಿಗೆ ನ್ಯಾಯ ದೊರೆಯುವವರೆಗೂ ನಾವು ನಿಮ್ಮನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ.

'ಸುಶಾಂತ್ ನಮಗೆ ಸಾಕಷ್ಟು ಕಲಿಸಿದ್ದಾರೆ. ಆತ ಎಂದಿಗೂ ಮರೆಯಲಾರದ ಶಕ್ತಿ. ಆತನ ಕಥೆಗಳನ್ನು ನನ್ನ ಮಕ್ಕಳಿಗೆ ಹೇಳುತ್ತಿರುತ್ತೇನೆ. ಆತನಲ್ಲಿ ಒಳ್ಳೆಯ ಯೋಚನೆಗಳು ತುಂಬಿತ್ತು. ಸುಶಾಂತ್​​​​​ ಇಂದಿಗೂ ನಮ್ಮೊಳಗೆ ಇದ್ದಾನೆ' ಎಂದು ಶ್ವೇತಾ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. 'ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ ಅಂತಹ ಹುಚ್ಚು ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿಯಲ್ಲ. ಆತ ಬಹಳ ಬುದ್ಧಿವಂತ, ಪ್ರತಿಭಾವಂತ, ರಿಯಲ್ ಹೀರೋ. ಯಾರೋ ಆತನನ್ನು ಕೊಲೆ ಮಾಡಿದ್ದಾರೆ. ಈ ವಿಚಾರದಲ್ಲಿ ದೇವರು ನಮಗೆ ನ್ಯಾಯ ಒದಗಿಸುತ್ತಾರೆ. ಎಂಬ ನಂಬಿಕೆ ಇದೆ. ಎಲ್ಲರೂ ಈ ವಿಚಾರವಾಗಿ ಪ್ರಾರ್ಥಿಸೋಣ' ಎಂದು ಸುಶಾಂತ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಸುಶಾಂತ್​​, ಗಿಟಾರ್ ಬಾರಿಸುತ್ತಾ ಮಹಾದೇವ್ ಶಂಭೋ ಹಾಡನ್ನು ಹಾಡುತ್ತಿರುವ ವಿಡಿಯೋವೊಂದನ್ನು ಶ್ವೇತಾ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಒಟ್ಟಿನಲ್ಲಿ ಸುಶಾಂತ್ ಪ್ರಕರಣ ದಿನೇ ದಿನೆ ತಿರುವು ಪಡೆದುಕೊಳ್ಳುತ್ತಿರುವುದಂತೂ ನಿಜ

ABOUT THE AUTHOR

...view details