ಕರ್ನಾಟಕ

karnataka

By

Published : Dec 20, 2019, 9:04 PM IST

Updated : Dec 20, 2019, 11:12 PM IST

ETV Bharat / jagte-raho

ಪ್ರೀತಿಸಿ ಮದುವೆಯಾಗಿ 2 ತಿಂಗಳಲ್ಲೇ ಪತ್ನಿಯ ಉಸಿರು ನಿಲ್ಲಿಸಿದ ಕಿರಾತಕ: ಕಾರಣ?!

ತನ್ನ ಕುಟುಂಬವನ್ನೇ ಎದುರು ಹಾಕಿಕೊಂಡು ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿವೋರ್ವ ಹೆಂಡತಿಯನ್ನು ಕೊಂದು ಇದೀಗ ಜೈಲು ಕಂಬಿ ಎಣಿಸುವಂತಾಗಿರುವ ಪ್ರಕರಣ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರಲ್ಲಿ ನಡೆದಿದೆ.

wife was allegedly murdered by husband
ಪ್ರೀತಿಸಿದವಳ ಕೊಲೆಗೈದ ಪತಿ

ದಾವಣಗೆರೆ: ಒಬ್ಬರನ್ನೊಬ್ಬರನ್ನು ಬಿಟ್ಟಿರಲಾರದಷ್ಟು ಪ್ರೀತಿಸಿದವರು. ಎಲ್ಲರನ್ನು ಎದುರು ಹಾಕಿಕೊಂಡು ಮದುವೆಯಾದ್ರು. ಆದ್ರೆ ಊರಿಗೆ ಬಂದ ಕೆಲ ದಿನಗಳಲ್ಲೇ ಈ ಇಬ್ಬರ ಮಧ್ಯೆ ಗಲಾಟೆ ಶುರುವಾಯಿತು. ಈಗ ಕೈಹಿಡಿದ ಪತ್ನಿಯನ್ನೇ ಆತ ಹೆಣವಾಗಿಸಿದ್ದಾನೆ.

ಹರಿಹರ ತಾಲೂಕಿನ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂಡಸಘಟ್ಟ ಗ್ರಾಮದ ತಾಂಡ ನಿವಾಸಿ ನಾಗರಾಜ ನಾಯ್ಕ ಇದೇ ಗ್ರಾಮದ 21 ವರ್ಷದ ರಂಜಿತಾ ಬಾಯಿಯನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ. 2 ತಿಂಗಳ ಹಿಂದೆಯಷ್ಟೇ ಇವರಿಬ್ಬರು ಪ್ರೇಮ ವಿವಾಹವಾಗಿದ್ದರು. ಕುಟುಂಬದವರ ಆಕ್ಷೇಪದಿಂದಾಗಿ ಓಡಿ ಹೋಗಿ ಮದುವೆ ಆಗಿದ್ದರು.

ಮನೆಯಿಂದ ಓಡಿಹೋದ ಜೋಡಿ ಕೆಲ ದಿನಗಳ ಹಿಂದೆಯಷ್ಟೇ ಗ್ರಾಮಕ್ಕೆ ವಾಪಸಾಗಿದ್ದರು. ಪ್ರೀತಿಸಿ ಮದುವೆಯಾದ ಮೇಲೆ ಆದರ್ಶ ದಂಪತಿಯಂತೆ ಬದುಕಬೇಕೆಂಬ ಕನಸು ಕಟ್ಟಿಕೊಂಡು ಗ್ರಾಮಕ್ಕೆ ಬಂದರು. ಆದ್ರೆ, ಅಷ್ಟರೊಳಗೆ ಈ ನವಜೋಡಿ ನಡುವೆ ನಡೆಯಬಾರದು ನಡೆದು ಹೋಯಿತು. ಸಣ್ಣ ವಿಷಯಕ್ಕೆ ಪತ್ನಿ ರಂಜಿತಾಳನ್ನೇ ನಾಗರಾಜ್​ ನಾಯ್ಕ ಕೊಂದು ಹಾಕಿದ್ದಾನೆ.

ಮೃತಳ ತಾಯಿ ರೋಧನ

ನಾಗರಾಜ್​ ನಾಯ್ಕನ ಅಣ್ಣನ ಮಗನಿಗೆ ನೀರು ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ಸಣ್ಣದಾದ ಗಲಾಟೆ ಜಗಳ ಶುರುವಾಗಿತ್ತು. ಗಲಾಟೆ ನಡೆದ ಸಂದರ್ಭದಲ್ಲಿ ನಾಗರಾಜನ ಅಣ್ಣ ಮತ್ತು ಅತ್ತಿಗೆ ಬಂದು ಬಿಡಿಸಿದರು. ಆದ್ರೆ, ಮಾರನೇ ದಿನ ಬೆಳಗ್ಗೆ ನಡೆದದ್ದೇ ಬೇರೆ. ಸುಗಂಧರಾಜ ಹೂವಿನ ತೋಟಕ್ಕೆ ರಂಜಿತಾ ಬಾಯಿಯನ್ನು ನಾಗರಾಜ ನಾಯ್ಕ ಕರೆದೊಯ್ದಿದ್ದ.

ಬೆಳಗ್ಗೆ ಆರು ಗಂಟೆಗೆ ಬೈಕ್ ನಲ್ಲಿ ಇಬ್ಬರು ತೋಟಕ್ಕೆ ಹೋದ ವೇಳೆ ಮತ್ತೆ ರಾತ್ರಿ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ನಾಗರಾಜ, ಅಲ್ಲೇ ಒಂದು ಏಟು ಹೊಡೆದಿದ್ದ. ಕೈಯಿಂದ ಕತ್ತನ್ನು ಉಸಿರು ಗಟ್ಟಿಸಿ ಕೊಂದಿದ್ದಾನೆ ಎನ್ನಲಾಗ್ತಿದೆ. ಕೂಡಲೇ ಆಕೆಯನ್ನು ಮಲೇಬೆನ್ನೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಆದರೆ, ಅಷ್ಟರಲ್ಲಾಗಲೇ ರಂಜಿತಾಬಾಯಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು.

ರಂಜಿತಾಳ ತಾಯಿ ಮೋತಿಬಾಯಿ ಈ ಕುರಿತು ದೂರು ನೀಡಿದ್ದು, ಆರೋಪಿಯನ್ನ ಮಲೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಎರಡೇ ತಿಂಗಳಿಗೆ ಇಂಥದ್ದೊಂದು ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.

Last Updated : Dec 20, 2019, 11:12 PM IST

ABOUT THE AUTHOR

...view details