ದಾವಣಗೆರೆ: ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಕೆಟಿಜೆ ನಗರ ಪೊಲೀಸರು ಭೂಮಿಕಾ ನಗರದ ಶೇಖರಪ್ಪ ಗೋದಾಮು ಬಳಿ ಬಂಧಿಸಿದ್ದಾರೆ.
ಎರಡು ಪ್ರತ್ಯೇಕ ಗಾಂಜಾ ಮಾರಾಟ ಪ್ರಕರಣ: ಆರು ಮಂದಿಯ ಬಂಧನ
ಎರಡು ಪ್ರತ್ಯೇಕ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿ, ಗಾಂಜಾ ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಡಿಪ್ಲೊಮಾ ವಿದ್ಯಾರ್ಥಿ ಮಹಮದ್ ಹರ್ಷನ್, ಆಟೋ ಚಾಲಕ ರಾಕೇಶ್ ನಾಯಕ್, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಉಜ್ಜಯನಿಪುರದ ಶೋಬನ್ ಬಾಬು, ವೈ.ಅನಿಲ್ ಬಂಧಿತ ಆರೋಪಿಗಳು. ಇವರ ಬಳಿ ಇದ್ದ 9 ಸಾವಿರ ರೂ. ಮೌಲ್ಯದ 282 ಗ್ರಾಂ ಗಾಂಜಾ, ಎರಡು ಬೈಕ್, ನಾಲ್ಕು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನು ಬನಸಿರಿ ಬಡಾವಣೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಇಎನ್ ಅಪರಾಧ ಠಾಣೆಯ ಪೊಲೀಸರು ಸೆರೆ ಹಿಡಿದಿದ್ದಾರೆ. ಸರಸ್ವತಿ ನಗರದ ಬಾಲರಾಜ್, ಚಿಕ್ಕಮಗಳೂರು ಜಿಲ್ಲೆಯ ಹಸ್ತಿನಾಪುರ ಹಳೇ ತಾಂಡಾದ ಸುಮನ್ ಬಂಧಿತ ಆರೋಪಿಗಳಾಗಿದ್ದು, 39 ಸಾವಿರ ರೂಪಾಯಿ ಮೌಲ್ಯದ 280 ಗ್ರಾಂ ಗಾಂಜಾ ಮತ್ತು 500 ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.