ಕರ್ನಾಟಕ

karnataka

By

Published : Mar 12, 2020, 10:21 AM IST

ETV Bharat / jagte-raho

ಭೂಗತ ಪಾತಕಿ ರವಿ ಪೂಜಾರಿ ಜೊತೆ ಎಸಿಪಿ ಸಂಪರ್ಕ: ತನಿಖೆಗೆ ಡಿಜಿಪಿ ಆದೇಶ

ಭೂಗತ ಪಾತಕಿ ರವಿ ಪೂಜಾರಿ ಜೊತೆ ಸಿಸಿಬಿ ವಿಂಗ್​ನ ಎಸಿಪಿಯೊಬ್ಬರು ನಿರಂತರ ಸಂಪರ್ಕದಲ್ಲಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಸಂಗತಿಯನ್ನ ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ ಪ್ರವೀಣ್ ಸೂದ್, ಎಸಿಪಿ ವಿರುದ್ಧ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಲು ಆದೇಶ ನೀಡಿದ್ದಾರೆ.

ACP contact with Ravi Poojary:  DGP has ordered an investigation
ಭೂಗತ ಪಾತಕಿ ರವಿ ಪೂಜಾರಿ ಜೊತೆ ಎಸಿಪಿ ಸಂಪರ್ಕ: ತನಿಖೆಗೆ ಆದೇಶ ನೀಡಿದ ಡಿಜಿಪಿ

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ಬಂಧಿಸಿದ ಬಳಿಕ ಸಿಸಿಬಿ ಅಧಿಕಾರಿಗಳಿಗೆ ಕೆಲ ಮಹತ್ವದ ವಿಚಾರಗಳು ಗೊತ್ತಾಗಿವೆ. ರವಿ ಪೂಜಾರಿ ಜೊತೆ ಸಿಸಿಬಿ ವಿಂಗ್​ನ ಎಸಿಪಿಯೊಬ್ಬರು ನಿರಂತರ ಸಂಪರ್ಕದಲ್ಲಿದ್ದರು ಎಂಬ ವಿಚಾರ ಬಯಲಾಗಿದೆ ಎಂದು ತಿಳಿದು ಬಂದಿದೆ.

ಸಿಸಿಬಿ ಎಸಿಪಿಯೊಬ್ಬರು ತನ್ನ ಜೊತೆ ಆತ್ಮೀಯ ಒಡನಾಟ ಹೊಂದಿದ್ದರು ಎಂಬ ವಿಚಾರವನ್ನು ರವಿ ಪೂಜಾರಿ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ರವಿ ಪೂಜಾರಿ ಅಲ್ಲದೇ ಕರಾವಳಿ ಭಾಗದ ಮತ್ತೊಬ್ಬ ಕುಖ್ಯಾತ ಪಾತಕಿ ಕಲಿ ಯೋಗೇಶ್ ಜೊತೆ ಕೂಡ ಎಸಿಪಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಈ ಆಪಾದನೆ ಹಿನ್ನೆಲೆ ಸಿಸಿಬಿಯಿಂದ ಅತಿ ಗಣ್ಯ ವ್ಯಕ್ತಿಗಳ ಭದ್ರತಾ (ವಿವಿಐಪಿ) ವಿಭಾಗಕ್ಕೆ ಎಸಿಪಿಯನ್ನು ವರ್ಗಾವಣೆ ಮಾಡಲಾಗಿದೆ.

ಇನ್ನು ಈ ಸಂಗತಿಯನ್ನ ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ ಪ್ರವೀಣ್ ಸೂದ್, ಎಸಿಪಿ ವಿರುದ್ಧ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಲು ಆದೇಶ ನೀಡಿದ್ದಾರೆ. ಸೆನೆಗಲ್​​ನಿಂದ ಬೆಂಗಳೂರಿಗೆ ರವಿ ಪೂಜಾರಿಯನ್ನ ಕರೆ ತರುವಾಗಲೂ ಎಸಿಪಿ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಹಾಗೆ ಹಣಕಾಸಿನ ವ್ಯವಹಾರ ಕೂಡ ನಡೆದಿರುವ ಸಾಧ್ಯತೆ ಹಿನ್ನೆಲೆ‌ ಎಲ್ಲಾ ಮಟ್ಟದಲ್ಲೂ ತನಿಖೆ ನಡೆಸಲು ಡಿಜಿಪಿ ಸೂಚನೆ ನೀಡಿದ್ದಾರೆ. ಎಸಿಪಿ 2003ರಿಂದ 2015ರವರೆಗೆ ಮಂಗಳೂರು ಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಎಲ್ಲಾ ವಲಯದಲ್ಲಿ ಎಸಿಪಿಗೆ ಸಂಪರ್ಕ ಇರುವ ಸಾಧ್ಯತೆ ಹಿನ್ನೆಲೆ ಸದ್ಯ ಎಸಿಪಿ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ.

ABOUT THE AUTHOR

...view details