ಕರ್ನಾಟಕ

karnataka

By

Published : May 3, 2023, 7:10 AM IST

ETV Bharat / international

ಪತ್ರಕರ್ತರ ಮೇಲಿನ ದೌರ್ಜನ್ಯ ನಿಲ್ಲಿಸಿ, ಪ್ರಜಾಪ್ರಭುತ್ವ ಉಳಿಸಿ: ವಿಶ್ವಸಂಸ್ಥೆ ಕರೆ

ಇಂದು ಮೇ 3. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. ವಿಶ್ವಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಲಾಯಿತು.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ

ವಿಶ್ವಸಂಸ್ಥೆ:ಜಗತ್ತಿನ ಮೂಲೆ ಮೂಲೆಯಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿದೆ. ಪತ್ರಕರ್ತರ ಬಂಧನ ಮತ್ತು ಸೆರೆವಾಸವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಕರೆ ನೀಡಿದರು. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಅಂಗವಾಗಿ ಮಂಗಳವಾರ ನೀಡಿದ ವಿಡಿಯೋ ಸಂದೇಶದಲ್ಲಿ ಅವರು ಪತ್ರಿಕಾ ಸ್ವಾತಂತ್ರ್ಯದ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿದರು.

ಪ್ರಪಂಚದ ಹಲವೆಡೆ ಮಾಧ್ಯಮ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿದೆ. ಪತ್ರಕರ್ತರು ತಮ್ಮ ಕೆಲಸದ ವೇಳೆ ದಬ್ಬಾಳಿಕೆಗೆ ಒಳಗಾಗಿ ಬಂಧನವಾಗುತ್ತಿದ್ದಾರೆ. ಇದು ನಿಲ್ಲಬೇಕು. ಈ ಬಗ್ಗೆ ವಿಶ್ವ ಸಮುದಾಯ ಏಕಧ್ವನಿಯಲ್ಲಿ ಮಾತನಾಡಬೇಕು ಎಂದು ಅವರು ಒತ್ತಾಯಿಸಿದರು.

ನಮ್ಮ ಎಲ್ಲಾ ಸ್ವಾತಂತ್ರ್ಯ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಅವಲಂಬಿತವಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ನ್ಯಾಯದ ಅಡಿಪಾಯ. ಬೆದರಿಕೆಗಳು ಮತ್ತು ದಾಳಿಗಳನ್ನು ನಿಲ್ಲಿಸಿ. ಅವರು ಮಾಡುವ ಕೆಲಸಗಳಿಗಾಗಿ ಬಂಧಿಸಿ ಜೈಲಿಗೆ ಹಾಕುವುದನ್ನು ನಿಲ್ಲಿಸಿ. ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ತಡೆಯಿರಿ. ಸತ್ಯ ಹೇಳುವವರನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಗುಟೆರಸ್ ಅವರು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ಹಾಲ್‌ನಲ್ಲಿ ಯುನೆಸ್ಕೋ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ವರ್ಷ 67 ಮಾಧ್ಯಮ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ. ಅದಕ್ಕಿಂತಲೂ ಹಿಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಾಗಿದೆ. ಮಹಿಳಾ ಪತ್ರಕರ್ತೆಯರು ಪರೋಕ್ಷವಾಗಿ ಬೆದರಿಕೆ, ಹಿಂಸೆಯನ್ನು ಅನುಭವಿಸಿದ್ದಾರೆ. ನಾಲ್ವರಲ್ಲಿ ಒಬ್ಬರು ದೈಹಿಕ ಬೆದರಿಕೆಗೆ ತುತ್ತಾಗಿದ್ದಾರೆ. ಇದು ಕಳವಳಕಾರಿ ಸಂಗತಿ ಎಂದು ಹೇಳಿದರು.

ಪತ್ರಕರ್ತರು ಮತ್ತು ಮಾಧ್ಯಮ ಮಿತ್ರರು ಮಾಡುವ ಪ್ರಮುಖ ಕೆಲಸದ ವೇಲೆ ನೇರವಾಗಿ ಅಥವಾ ಪರೋಕ್ಷವಾಗಿ ವಿರೋಧಕ್ಕೆ ಒಳಗಾಗುತ್ತಾರೆ. ಅವರಿಗೆ ನಿತ್ಯ ಕಿರುಕುಳ, ಬೆದರಿಕೆ, ಬಂಧನ ಮತ್ತು ಜೈಲಿಗೆ ಹಾಕುವ ಕೆಲಸ ನಡೆಯುತ್ತಲೇ ಇದೆ. ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ ಎಂದು ಗುಟೆರಸ್​ ಅಭಿಪ್ರಾಯಪಟ್ಟರು.

ಯುನೆಸ್ಕೋ ಮಹಾನಿರ್ದೇಶಕ ಆಡ್ರೆ ಅಜೌಲೇ ಮಾತನಾಡಿ, ಜಾಗತಿಕವಾಗಿ ನೂರಾರು ಪತ್ರಕರ್ತರು ದಾಳಿಗೆ ಒಳಗಾಗಿದ್ದಾರೆ. ಜೈಲಿನಲ್ಲಿ ಕೊಳೆಯುವಂತಾಗಿದೆ. ಅವರು ಮಾಡುವ ಕೆಲಸದ ಕಾರಣಕ್ಕಾಗಿ ಅವರನ್ನು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಇದು ಯಾವ ಕಾರಣಕ್ಕೂ ಸ್ವೀಕಾರಾರ್ಹವಲ್ಲ. ಪತ್ರಕರ್ತರ ಸುರಕ್ಷತೆಯು ಇಡೀ ಸಮಾಜಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದರು.

ಪತ್ರಿಕಾ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ಬುನಾದಿ:ಪತ್ರಿಕಾ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ಬುನಾದಿ. ಅದರ ಅವಸಾನವಾದಲ್ಲಿ, ಪ್ರಜಾಪ್ರಭುತ್ವವೂ ನಶಿಸಲಿದೆ. ಕೆಲ ಪ್ರಭಾವಿ ಕೈಗಳು ಇಂತಹ ಸಂಸ್ಥೆಯ ಮೇಲೆ ದಬ್ಬಾಳಿಕೆ ನಡೆಸಿ, ಸೆನ್ಸಾರ್​ಶಿಪ್, ಮಾಧ್ಯಮ ದಮನ ಮತ್ತು ಪತ್ರಕರ್ತರ ಮೇಲಿನ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ನ ಅಧ್ಯಕ್ಷ ಎ.ಜಿ.ಸುಲ್ಜ್‌ಬರ್ಗರ್ ಹೇಳಿದರು.

ಚೀನಾದಲ್ಲಿ ಪತ್ರಕರ್ತರ ಮೇಲೆ ಕಣ್ಗಾವಲು ಇಡಲಾಗಿದೆ. ಬೆದರಿಕೆ, ಜೈಲಿಗೆ ಹಾಕಲಾಗುತ್ತದೆ. ಈಜಿಪ್ಟ್‌ನಲ್ಲಿ ಸರ್ಕಾರ ಸುದ್ದಿ ಸೈಟ್‌ಗಳನ್ನು ನಿರ್ಬಂಧಿಸಲು ಭದ್ರತಾ ಪಡೆಗಳನ್ನು ಬಳಸಿದೆ. ಭಾರತದಲ್ಲಿ ಸುದ್ದಿ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಪತ್ರಕರ್ತರನ್ನು ಮೂಲಭೂತವಾಗಿ ಭಯೋತ್ಪಾದಕರಂತೆ ಪರಿಗಣಿಸಲಾಗುತ್ತಿದೆ. ಉಕ್ರೇನ್​ ಯುದ್ಧವನ್ನು ವಿರೋಧಿಸುವ ಪತ್ರಕರ್ತರು ಜೈಲು ಪಾಲಾಗಿದ್ದಾರೆ ಎಂದು ಮಾಹಿತಿ ನೀಡಿದರು.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ:ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಪ್ರತಿ ವರ್ಷ ಮೇ 3 ರಂದು ಆಚರಿಸಲಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯ ಅಂತಾರಾಷ್ಟ್ರೀಯ ದಿನವನ್ನು ಘೋಷಣೆ ಮಾಡಿ 30 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯುನೆಸ್ಕೋ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. "ಹಕ್ಕುಗಳ ಭವಿಷ್ಯ ರಚನೆ: ಎಲ್ಲಾ ಇತರ ಮಾನವ ಹಕ್ಕುಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೇ ಆಧಾರ" ಎಂಬ ಥೀಮ್​ನಡಿ ಈ ವರ್ಷ ಸಂಭ್ರಮಾಚರಣೆ ನಡೆಸಲಾಯಿತು.

ಇದನ್ನೂ ಓದಿ:5 ತಿಂಗಳಲ್ಲಿ ಎರಡು ಬಾರಿ ವಧುವಾಗಿ ಮಾರಾಟವಾಗಿದ್ದ ಅಪ್ರಾಪ್ತ ಬಾಲಕಿಯ ರಕ್ಷಣೆ

ABOUT THE AUTHOR

...view details