ಕರ್ನಾಟಕ

karnataka

By ETV Bharat Karnataka Team

Published : Dec 4, 2023, 11:37 AM IST

ETV Bharat / international

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: 11 ಪರ್ವತಾರೋಹಿಗಳು ಸಾವು, 22 ಮಂದಿ ನಾಪತ್ತೆ

Volcanic eruption in Indonesia: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡು ಹಲವು ಪರ್ವತಾರೋಹಿಗಳು ಸಾವನ್ನಪ್ಪಿದ್ದು, ಮೃತದೇಹಗಳು ಪತ್ತೆಯಾಗಿವೆ. ಇನ್ನೂ 22 ಪರ್ವತಾರೋಹಿಗಳು ನಾಪತ್ತೆಯಾಗಿದ್ದಾರೆ.

Etv Bharat
Etv Bharat

ಪಡಂಗ್(ಇಂಡೋನೇಷ್ಯಾ):ಇಂಡೋನೇಷ್ಯಾದ ಮೌಂಟ್ ಮರಾಪಿಯಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸಿಲುಕಿ 11 ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಕರ್ತರು ಇಂದು (ಸೋಮವಾರ) ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ನಾಪತ್ತೆಯಾಗಿರುವ 22 ಪರ್ವತಾರೋಹಿಗಳ ಪತ್ತೆಗೆ ಶೋಧಕಾರ್ಯ ನಡೆಸಲಾಗುತ್ತಿದೆ.

ಶನಿವಾರ ಸುಮಾರು 75 ಪರ್ವತಾರೋಹಿಗಳು 2,900 ಮೀಟರ್ ಎತ್ತರದ ಪರ್ವತ ಹತ್ತಲು ಪ್ರಾರಂಭಿಸಿದ್ದರು. ದಿಢೀರ್ ಜ್ವಾಲಾಮುಖಿ ಸ್ಫೋಟಗೊಂಡು ದಟ್ಟ ಹೊಗೆ ಆವರಿಸಿದ್ದರಿಂದ ಅವರು ಸಿಲುಕಿಕೊಂಡಿದ್ದರು. ಈ ಪೈಕಿ ಎಂಟು ಮಂದಿಗೆ ಸುಟ್ಟ ಗಾಯಗಳಾಗಿವೆ. ಓರ್ವನ ಕೈ,ಕಾಲುಗಳು ಮುರಿದಿವೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪಡಂಗ್‌ನ ಸ್ಥಳೀಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಅಧಿಕಾರಿ ಹ್ಯಾರಿ ಅಗಸ್ಟಿಯನ್ ಹೇಳಿದರು.

''ರಕ್ಷಣಾ ಕಾರ್ಯಕರ್ತರು ಸೋಮವಾರ ಬೆಳಿಗ್ಗೆ 11 ಜನರ ಪರ್ವತಾರೋಹಿಗಳ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಇನ್ನೂ ನಾಪತ್ತೆಯಾಗಿರುವ ಹಲವು ಪರ್ವತಾರೋಹಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ'' ಎಂದು ಪಶ್ಚಿಮ ಸುಮಾತ್ರದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಮುಖ್ಯಸ್ಥ ಅಬ್ದುಲ್ ಮಲಿಕ್ ತಿಳಿಸಿದರು.

ಮೌಂಟ್ ಮರಾಪಿಯಲ್ಲಿ ಸ್ಫೋಟ:ಪಶ್ಚಿಮ ಸುಮಾತ್ರದ ಆಗಮ್ ಪ್ರಾಂತ್ಯದಲ್ಲಿರುವ ಮೌಂಟ್ ಮರಾಪಿಯಲ್ಲಿ ಭಾನುವಾರ ಹಠಾತ್ ಸ್ಫೋಟಗೊಂಡಿದ್ದರಿಂದ ಆಕಾಶದಲ್ಲಿ 3,000 ಮೀಟರ್ ಎತ್ತರದವರೆಗೂ ಬೂದಿ ಹಾರಿದ್ದು, ದಟ್ಟ ಪದರ ಆವರಿಸಿದೆ. ಬೂದಿ ಆವರಿಸಿದ ಮೋಡಗಳು ಹಲವಾರು ಕಿಲೋಮೀಟರ್‌ಗಳವರೆಗೆ ಹರಡಿಕೊಂಡಿರುವುದು ಕಂಡುಬಂದಿದೆ. ಪಟ್ಟಣಗಳು ಹಾಗೂ ಗ್ರಾಮಗಳು ಜ್ವಾಲಾಮುಖಿಯ ಅವಶೇಷಗಳಿಂದ ಮುಚ್ಚಿಹೋಗಿವೆ.

ಸ್ಫೋಟದ ನಂತರ ಪರ್ವತಾರೋಹಿಗಳು ಸಂಚರಿಸುವ ಎರಡು ಮಾರ್ಗಗಳನ್ನು ಮುಚ್ಚಲಾಗಿದೆ. ಪರ್ವತದ ಇಳಿಜಾರುಗಳಲ್ಲಿ ವಾಸಿಸುವ ಗ್ರಾಮಸ್ಥರಿಗೆ, ಸಂಭಾವ್ಯ ಲಾವಾದಿಂದಾಗಿ ಕುಳಿಯ ಬಾಯಿಯಿಂದ 3 ಕಿಲೋಮೀಟರ್ (1.8 ಮೈಲಿಗಳು) ದೂರದಲ್ಲಿ ಉಳಿದುಕೊಳ್ಳಲು ಸಲಹೆ ನೀಡಲಾಗಿದೆ. ಶನಿವಾರ 9,480 ಅಡಿಗಳಷ್ಟು ದೂರದ ಪರ್ವತದ ವ್ಯಾಪ್ತಿಯಲ್ಲಿ ಲಾವಾ ಆವರಿಸಿತ್ತು.

ಇಲ್ಲಿಯವರೆಗೆ 49 ಜನರನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಉಳಿದವರ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಪೊಲೀಸ್ ಮತ್ತು ಸೈನಿಕರು ಸೇರಿದಂತೆ ಸುಮಾರು 168 ರಕ್ಷಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಎಲ್ಲಾ ಆರೋಹಿಗಳನ್ನು ರಕ್ಷಿಸಲು ನಿಯೋಜಿಸಲಾಗಿದೆ. ಹಲವಾರು ಗ್ರಾಮಗಳು ಬೂದಿಯಿಂದ ಆವರಿಸಲ್ಪಟ್ಟಿವೆ. ಅನೇಕ ಪ್ರದೇಶಗಳಲ್ಲಿ ಸೂರ್ಯನ ಕಿರಣಗಳೇ ಬೀಳುತ್ತಿಲ್ಲ. ಬೂದಿಯಿಂದ ರಕ್ಷಣೆ ಪಡೆಯಲು ಜನರಿಗೆ ಕನ್ನಡಕ ಹಾಗೂ ಮುಖವಾಡಗಳನ್ನು ವಿತರಿಸಲಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.

''ಶಿಖರದಿಂದ ಸುಮಾರು 5 ರಿಂದ 6 ಕಿಲೋಮೀಟರ್ (3.1 ರಿಂದ 3.7 ಮೈಲುಗಳು) ಹತ್ತಿರದ ಗ್ರಾಮಗಳಾದ ರುಬೈ ಮತ್ತು ಗೋಬಾಹ್ ಕುಮಾಂಟಿಯಾಂಗ್‌ನಲ್ಲಿ ಸುಮಾರು 1,400 ಜನರು ಮರಪಿಯ ಇಳಿಜಾರುಗಳಲ್ಲಿ ವಾಸಿಸುತ್ತಿದ್ದಾರೆ. ಈ ಭಾಗದ ಜನರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಜನವರಿಯಿಂದ ಮರಾಪಿಯ ಜ್ವಾಲಾಮುಖಿ ಸಕ್ರಿಯವಾಗಿದೆ. ಇಂಡೋನೇಷ್ಯಾದಲ್ಲಿನ 120ಕ್ಕೂ ಹೆಚ್ಚು ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿದೆ. ಪೆಸಿಫಿಕ್ ಜಲಾನಯನ ಪ್ರದೇಶವನ್ನು ಈ ಜ್ವಾಲಾಮುಖಿ ಸುತ್ತುವರೆದಿದೆ.

ಇದನ್ನೂ ಓದಿ:ಗಾಝಾ ಮೇಲೆ ಇಸ್ರೇಲ್​ನಿಂದ 1 ಲಕ್ಷ ಬಾಂಬ್​ಗಳ ಸುರಿಮಳೆ; ಹಮಾಸ್ ಆರೋಪ

ABOUT THE AUTHOR

...view details