ವ್ಯಾಟ್ಸನ್ ವೈಲಿ (ಅಮೆರಿಕ):ನಿರಂತರ ಮಳೆಯಿಂದಾಗಿ ಕ್ಯಾಲಿಫೋರ್ನಿಯಾದಲ್ಲಿ ಪ್ರವಾಹ ಮತ್ತು ಭೂಕುಸಿತ ಉಂಟಾಗುತ್ತಿದೆ. ಮಳೆ ನೀರು ನುಗ್ಗುತ್ತಿರುವುದರಿಂದ ರಸ್ತೆಗಳು ಕೊಚ್ಚಿಹೋಗಿವೆ. ಬಿರುಸಾದ ಗಾಳಿಗೆ ಮರಗಳು ಬೀಳುತ್ತಿವೆ. ನಗರದಲ್ಲಿ ಹಿಮಪಾತದ ಅಪಾಯ ಹೆಚ್ಚಾಗಿದೆ. ಈಗ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸ್ಥಳೀಯ ಆಡಳಿತ ರಕ್ಷಣಾ ಕಾರ್ಯ ಕೈಗೊಂಡಿದೆ. ಅಲ್ಲಲ್ಲಿ ಸಾವು-ನೋವು ವರದಿಯಾಗಿದೆ.
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಚಂಡಮಾರುತದ ಪರಿಣಾಮ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ನಗರವು ವಿಪರೀತ ಮಳೆ ಮತ್ತು ಹಿಮದಿಂದ ತತ್ತರಿಸುತ್ತಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಈ ವಾರದ ಮಧ್ಯ ಸಿಯೆರಾ ಮತ್ತು ಎತ್ತರದ ಪ್ರದೇಶಗಳಲ್ಲಿ ಭಾರಿ ಹಿಮ ಬೀಳುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಮಾಂಟೆರಿ ಕೌಂಟಿಯಲ್ಲಿ ಅನಾನಸ್ ಎಕ್ಸ್ಪ್ರೆಸ್ ಚಂಡಮಾರುತದ ಪ್ರಭಾವದ ಮಧ್ಯೆ ಪಜಾರೋ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ನದಿ ದಡದ ಸುಮಾರು 1,700 ನಿವಾಸಿಗಳು ಸೇರಿದಂತೆ 8,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಅದರಲ್ಲಿ ಅನೇಕರು ಲ್ಯಾಟಿನೋ ಕೃಷಿ ಕೆಲಸಗಾರರಾಗಿದ್ದಾರೆ. ಪಜಾರೊ ಕಣಿವೆಯು ಸ್ಟ್ರಾಬೆರಿ, ಸೇಬು, ಹೂಕೋಸು, ಕೋಸುಗಡ್ಡೆ ಮತ್ತು ಆರ್ಟಿಚೋಕ್ಗಳನ್ನು ಬೆಳೆಯಲು ಹೆಸರುವಾಸಿಯಾದ ಕರಾವಳಿ ಕೃಷಿ ಪ್ರದೇಶ.
ಪಜಾರೋ ನದಿಗೆ 120 ಅಡಿ ಅಗಲವಾಗಿ ಅಣೆಕಟ್ಟು ಕಟ್ಟಲಾಗಿದೆ. ನದಿ ತುಂಬಿ ಹರಿಯುತ್ತಿರುವುದರಿಂದ ಡ್ಯಾಂ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ. ಈಗಾಗಲೇ ಹತ್ತಾರು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಟ್ರಾಬೆರಿ ಬೆಳೆಗೆ ಹೆಸರುವಾಸಿಯಾದ ಉತ್ತರ ಕ್ಯಾಲಿಫೋರ್ನಿಯಾದ ಕೃಷಿ ಸಮುದಾಯದಿಂದ ಶನಿವಾರ ಆರಂಭದಲ್ಲಿ 1,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆಯಿತು. ಉತ್ತರ ಕ್ಯಾಲಿಫೋರ್ನಿಯಾ ಪ್ರಸ್ತುತ ಅಕಾಲಿಕ ಮಳೆ ಅನುಭವಿಸುತ್ತಿದ್ದು, ಬುಧವಾರದವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.