ವಿಶ್ವಸಂಸ್ಥೆ:ಇಸ್ರೇಲ್ ನಡೆಸುತ್ತಿರುವ ಯುದ್ಧವು ಲಕ್ಷಾಂತರ ಪ್ಯಾಲೆಸ್ಟೈನಿಯನ್ನರನ್ನು ಸಾವು ಬದುಕಿನ ಮಧ್ಯೆ ನರಳುವಂತೆ ಮಾಡಿದೆ. ಹೀಗಾಗಿ ತಕ್ಷಣವೇ ಕದನ ವಿರಾಮ ಘೋಷಿಸಬೇಕು. ಆದಷ್ಟು ಶೀಘ್ರದಲ್ಲಿ ಅಲ್ಲಿನ ಲಕ್ಷಾಂತರ ಜನರಿಗೆ ಮಾನವೀಯ ನೆರವು ಒದಗಿಸಬೇಕಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಸೋಮವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಲಕ್ಷಾಂತರ ಪ್ಯಾಲೆಸ್ಟೈನಿಯನ್ನರು ಯುದ್ಧ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಇಸ್ರೇಲ್ ಬಲವಂತವಾಗಿ ಸ್ಥಳಾಂತರ ಮಾಡಿಸಿದೆ. ಇದರಿಂದ ಅಗತ್ಯ ಸೌಲಭ್ಯಗಳ ಕೊರತೆಯಿಂದ ಜನರು ನಲುಗಿದ್ದಾರೆ. ತಕ್ಷಣವೇ ಇಸ್ರೇಲ್ ಕದನವಿರಾಮ ಘೋಷಿಸಬೇಕು. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಜನರಿಗೆ ತಕ್ಷಣವೇ ವಿಶ್ವಸಮುದಾಯ ನೆರವು ನೀಡಬೇಕು ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಫ್ ಹೇಳಿದೆ.
ಯುನಿಸೆಫ್ ಮುಖ್ಯಸ್ಥರಾದ ಲಜ್ಜರಿನಿ ಹೇಳುವಂತೆ, ಗಾಜಾದಲ್ಲಿ 23 ದಿನಗಳ ಯುದ್ಧದಲ್ಲಿ 8,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 66 ಪ್ರತಿಶತ ಮಹಿಳೆಯರು ಮತ್ತು ಮಕ್ಕಳು ಇದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ. ಇದು ಗಾಜಾದ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳಾಗಿವೆ. ಅದರಲ್ಲೂ 3,400 ಕ್ಕೂ ಹೆಚ್ಚು ಮಕ್ಕಳು ಇಸ್ರೇಲ್ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. 6,300 ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರರ್ಥ ಗಾಜಾದಲ್ಲಿ ಪ್ರತಿದಿನ 420 ಕ್ಕೂ ಹೆಚ್ಚು ಮಕ್ಕಳು ಸಾಯುತ್ತಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಇದು ನಿಜಕ್ಕೂ ಆತಂಕದ ವಿಚಾರವಾಗಿದೆ ಎಂದು ಹೇಳಿದರು. 2019 ರಿಂದ ವಿಶ್ವದ ಹಲವು ಪ್ರದೇಶಗಳಲ್ಲಿ ನಡೆಯುವ ಸಂಘರ್ಷಗಳಲ್ಲಿ ವಾರ್ಷಿಕವಾಗಿ ಸಾವಿಗೀಡಾದ ಮಕ್ಕಳ ಸಂಖ್ಯೆಯನ್ನು ಇದು ಮೀರಿಸುತ್ತದೆ ಎಂದು ಅವರು ತಿಳಿಸಿದರು.